ಶಿಗ್ಗಾಂವಿ: ಹಳ್ಳಿಗಳಿಂದ ದಿನನಿತ್ಯ ರೈತರು ಕೆಲಸಕ್ಕಾಗಿ ತಹಸೀಲ್ದಾರ್ ಕಚೇರಿಗೆ ಅಲೆದಾಡಿಸುವುದು ಸರಿಯಲ್ಲ. ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕು ಎಂದು ಶಾಸಕ ಯಾಸೀರ ಅಹ್ಮದಖಾನ್ ಪಠಾಣ ಅವರು ಅಧಿಕಾರಿಗಳಿಗೆ ಸೂಚಿಸಿದರು.ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಭವನದಲ್ಲಿ ನಡೆದ ಶಿಗ್ಗಾಂವಿ, ಸವಣೂರು ತಾಲೂಕಿನ ಗ್ರಾಮ ಆಡಳಿತ ಅಧಿಕಾರಿಗಳಿಗೆ ಲ್ಯಾಪ್ಟ್ಯಾಪ್, ಸಾರ್ವಜನಿಕರಿಗೆ ಗಣಕೀಕೃತ ಭೂದಾಖಲೆಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಸಾರ್ವಜನಿಕ ಆಸ್ತಿಗಳ ಸಂರಕ್ಷಣೆ ಮುಖ್ಯವಾಗಿದ್ದು, ಅದಕ್ಕಾಗಿ ಭೂದಾಖಲೆಗಳ ಗಣಕೀಕರಣ ಕಾರ್ಯ ನಡೆಯುತ್ತಿದೆ. ಇದರಿಂದ ದಾಖಲೆಗಳು ರೈತರಿಗೆ ಸುಲಭವಾಗಿ ಸಿಗುತ್ತವೆ. ರೈತರ ಶ್ರಮ ಮತ್ತು ಸಮಯ ಉಳಿತಾಯವಾಗಲಿದೆ ಎಂದರು.ಕ್ಷೇತ್ರದ ೧೬ ಲಕ್ಷ ರೈತರ ಭೂದಾಖಲೆಗಳನ್ನು ಗಣಕೀಕರಣ ಮಾಡಲಾಗಿದೆ. ಶಿಗ್ಗಾಂವಿ, ಸವಣೂರಿನ ೫೦ ಗ್ರಾಮಗಳಲ್ಲಿನ ೨೫ ಸಾವಿರ ಜನರಿಗೆ ಆಸ್ತಿ ಪಟ್ಟಾ ವಿತರಿಸಲಾಗಿದೆ. ಮೃತ ವ್ಯಕ್ತಿಗಳ ಹೆಸರಿನಲ್ಲಿನ ೧೧,೯೯೨ ಖಾತೆಗಳ ವಾರಸಾ ದಾಖಲೆಗಳನ್ನು ಅವರ ಕುಟುಂಬಸ್ಥರಿಗೆ ನೀಡಲಾಗಿದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದರೆ ಮಾತ್ರ ಜನರ ಬಾಳು ಹಸನಾಗುತ್ತದೆ ಎಂದರು.ತಹಸೀಲ್ದಾರ್ ರವಿ ಕೊರವರ ಮಾತನಾಡಿ, ೬.೩೨ ಲಕ್ಷ ದಾಖಲೆ ಗಣಕೀಕರಣ ಕ್ಷೇತ್ರದಲ್ಲಿ ಅನಧಿಕೃತವಾಗಿರುವ ೪೫೦ ಮನೆಗಳನ್ನು ಗುರುತಿಸಿ, ೫೩೦ ಜನ ಫಲಾನುಭವಿಗಳಿಗೆ ಪಟ್ಟಾ ನೀಡಲಾಗಿದೆ. ೩೪ ಸಾವಿರ ಫಲಾನುಭವಿಗಳಿಗೆ ವಿವಿಧ ಪಿಂಚಣಿ ವಿತರಿಸಲಾಗುತ್ತಿದೆ. ೬.೩೨ ಲಕ್ಷ ಜನರ ದಾಖಲೆಗಳನ್ನು ಗಣಕೀಕರಣ ಮಾಡಲಾಗಿದೆ ಎಂದರು.ತಾಲೂಕಿನ ವಿವಿಧ ಗ್ರಾಮಗಳಲ್ಲಿ ಹೊಲಕ್ಕೆ ಹೋಗುವ ರಸ್ತೆ ನಿರ್ಮಾಣದ ಸಮಸ್ಯೆ ಪರಿಹರಿಸಲಾಗಿದೆ. ರೈತರು ಸುಲಭವಾಗಿ ಹಾಗೂ ತಕ್ಷಣ ತಮ್ಮ ಆಸ್ತಿಯ ದಾಖಲೆ ತಕ್ಷಣ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಸವಣೂರು ತಹಸೀಲ್ದಾರ್ ಭರತಕುಮಾರ, ಪುರಸಭೆ ಸದಸ್ಯರಾದ ಗೌಸಖಾನ್ ಮುನಸಿ, ವಸಂತಾ ಬಾಗೂರ, ಅಯೊಬಖಾನ್ ಪಠಾಣ, ಕಾಂಗ್ರೆಸ್ ತಾಲೂಕು ಘಟಕದ ಅಧ್ಯಕ್ಷ ಎಂ.ಜಿ. ಮುಲ್ಲಾ, ಮುಖಂಡರಾದ ಎಸ್.ಎಫ್. ಮಣಕಟ್ಟಿ, ಗುಡ್ಡಪ್ಪ ಜಲದಿ, ಲಕ್ಷ್ಮೀ ಮಾಳಗಿಮನಿ, ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ತಾಲೂಕು ಘಟಕದ ಅಧ್ಯಕ್ಷ ಸಂತೋಷ ಮಾಳವಾಡ ಇದ್ದರು.