ಚಿರತೆ ಬಗ್ಗೆ ಆತಂಕ ಬೇಡ: ಅರಣ್ಯ ಇಲಾಖೆ ಅಭಯ

KannadaprabhaNewsNetwork |  
Published : Dec 04, 2025, 02:45 AM IST
ಚಿರತೆ | Kannada Prabha

ಸಾರಾಂಶ

ಚಿರತೆಯನ್ನು ಸೆರೆ ಹಿಡಿಯಲಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಇದು ಅಪರಾಧ. ಭಾರತೀಯ ನ್ಯಾಯ ಸಂಹಿತೆ 2023 ಸೆಕ್ಷನ್ 240ರ ಪ್ರಕಾರ ಸುಳ್ಳು ಸುದ್ದಿ ಹರಡಿಸುವವರಿಗೆ ಎರಡು ವರ್ಷ ಜೈಲು ಶಿಕ್ಷೆ ಹಾಗೂ ದಂಡವನ್ನು ವಿಧಿಸಲಾಗುವುದು.

ಗದಗ: ಚಿರತೆ ಬಗ್ಗೆ ಅಂಜಿಕೆ ಬೇಡ. ಸಾರ್ವಜನಿಕರು ಭಯಮುಕ್ತರಾಗಿ ಸಂಚರಿಸಬೇಕೆಂದು ಅರಣ್ಯ ಇಲಾಖೆಯ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಇತ್ತೀಚೆಗೆ ನಗರದ ಪಂಚಾಕ್ಷರಿ ಬಡಾವಣೆಯ 6ನೇ ಕ್ರಾಸ್ ಬಳಿ ಚಿರತೆ ಪ್ರತ್ಯಕ್ಷ ಆಗಿತ್ತು. ಈ ದೃಶ್ಯ ಸ್ಥಳೀಯ ಸಿಸಿ ಕ್ಯಾಮೆರಾದ ದೃಶ್ಯಾವಳಿಯಲ್ಲಿ ಸೆರೆ ಆಗಿತ್ತು. ಅಲ್ಲದೇ ಎಪಿಎಂಸಿ ಬಳಿ ಕೂಡ ಚಿರತೆ ಕಾಣಿಸಿಕೊಂಡು ಜನರಲ್ಲಿ ತೀವ್ರ ಆತಂಕ ಉಂಟು ಮಾಡಿತ್ತು. ಚಿರತೆಗಾಗಿ ಅರಣ್ಯಾಧಿಕಾರಿಗಳು ನಿರಂತರವಾಗಿ ಶೋಧ ಕಾರ್ಯವನ್ನು ಕೂಡ ನಡೆಸಿದ್ದರು. ಆದರೆ, ಚಿರತೆಯ ಕುರುಹು ಪತ್ತೆ ಆಗಿಲ್ಲ. ಚಿರತೆ ಅರಣ್ಯ ಕಡೆಗೆ ಹೋಗಿರಬಹುದೆಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದು, ಸಾರ್ವಜನಿಕರು ಭಯಮುಕ್ತವಾಗಿ ಓಡಾಡಬೇಕು ಎಂದು ವಲಯ ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

ನ. 25 ಹಾಗೂ 26ರಂದು ಪಂಚಾಕ್ಷರಿ ನಗರದ ಬುರಬುರೆ ಲೇಔಟ್‌ನ 6ನೇ ಕ್ರಾಸ್ ಹಾಗೂ ಎಪಿಎಂಸಿ ಬರದೂರ ಟ್ರೇಡಿಂಗ್ ಕಂಪನಿ ಅಂಗಡಿಯ ಸಿಸಿ ಕ್ಯಾಮೆರಾದಲ್ಲಿ ಚಿರತೆಯ ಓಡಾಟ ಕಂಡುಬಂದಿರುವುದು ದೃಢವಾಗಿದೆ. ಈ ವಿಷಯ ತಿಳಿದ ಅರಣ್ಯ ಇಲಾಖೆಯು ಅದೇ ದಿನದಿಂದ ಸ್ಥಳ ಹಾಗೂ ನಗರದ ವಿವಿಧ ಕಡೆ ಹುಡುಕಾಡಿದರೂ ಕುರುಹು ಪತ್ತೆಯಾಗಿಲ್ಲ.

ಅಲ್ಲದೇ ರಾತ್ರಿ ಗಸ್ತು ಕೂಡಾ ಮಾಡಲಾಗಿದೆ. ಆದರೆ, ಇಲ್ಲಿಯವರೆಗೂ ಚಿರತೆಯ ಯಾವುದೇ ಚಲನವಲನ, ಹೆಜ್ಜೆ ಗುರುತಿನ ಕುರುಹು ಸಹಿತ ಪತ್ತೆ ಆಗಿಲ್ಲ. ಚಿರತೆಯು ತನ್ನ ಜಾಡು ಹಿಡಿದು ಅರಣ್ಯದ ಕಡೆಗೆ ಹೋಗಿರಬಹುದೆಂದು ಅರಣ್ಯ ಇಲಾಖೆಯು ನಂಬಿದೆ. ಆದ್ದರಿಂದ ಸಾರ್ವಜನಿಕರು ನಿರ್ಭೀತಿಯಿಂದ ತಮ್ಮ ಕಾರ್ಯಗಳನ್ನು ಕೈಗೊಳ್ಳಬಹುದು.

ಚಿರತೆಯನ್ನು ಬೆಟಗೇರಿ ಭಾಗದಲ್ಲಿ ಸೆರೆ ಹಿಡಿಯಲಾಗಿದೆ ಎಂದು ಮಂಗಳವಾರ ಬೆಳಗ್ಗೆಯಿಂದ ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಸುದ್ದಿಗಳನ್ನು ಹರಡಲಾಗುತ್ತಿದೆ. ಆದರೆ, ಚಿರತೆ ಪತ್ತೆಯಾಗಿಲ್ಲ. ಯಾವುದೇ ವನ್ಯಜೀವಿ ಕಂಡುಬಂದಲ್ಲಿ ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು ಎಂದು ತಿಳಿಸಿದ್ದಾರೆ.

ಸಹಾಯವಾಣಿಗೆ ಕರೆ ಮಾಡಿ...

ಚಿರತೆಯನ್ನು ಸೆರೆ ಹಿಡಿಯಲಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಇದು ಅಪರಾಧ. ಭಾರತೀಯ ನ್ಯಾಯ ಸಂಹಿತೆ 2023 ಸೆಕ್ಷನ್ 240ರ ಪ್ರಕಾರ ಸುಳ್ಳು ಸುದ್ದಿ ಹರಡಿಸುವವರಿಗೆ ಎರಡು ವರ್ಷ ಜೈಲು ಶಿಕ್ಷೆ ಹಾಗೂ ದಂಡವನ್ನು ವಿಧಿಸಲಾಗುವುದು. ಕಾಡುಪ್ರಾಣಿಗಳು ಕಂಡುಬಂದಲ್ಲಿ ಸಹಾಯವಾಣಿ 8151020753, 6362718315 ಸಂಪರ್ಕಿಸಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿಎಂ ಕುರ್ಚಿಗೆ ಪೈಪೋಟಿ, ರೈತರ ಸಮಸ್ಯೆ ಗೌಣ: ವಿಜಯೇಂದ್ರ
ಜನ್ಮ ಸಾರ್ಥಕತೆಗೆ ಗುರುವಿನ ಅನುಗ್ರಹ ಅವಶ್ಯ