ಕನ್ನಡಪ್ರಭ ವಾರ್ತೆ ಚಿಂತಾಮಣಿ
ದಾನಗಳಲ್ಲಿಯೇ ರಕ್ತದಾನ ಶ್ರೇಷ್ಠವಾಗಿದ್ದು, ನಾವು ನೀಡುವ ರಕ್ತವು ಮತ್ತೊಂದು ಜೀವ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ ಎಂ.ಸಿ.ಸುಧಾಕರ್ ತಿಳಿಸಿದರು.ನಗರದ ಕಿಶೋರ ವಿದ್ಯಾಭವನದ ಮೈದಾನದಲ್ಲಿ ಹಮ್ಮಿಕೊಂಡಿದ್ದ ಬೃಹತ್ ರಕ್ತದಾನ ಶಿಬಿರ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಜಿಲ್ಲೆಯಲ್ಲಿ ರಕ್ತದ ಕೊರತೆ ಇರುವುದಾಗಿ ತಿಳಿಸಿದರು.
ಆರೋಗ್ಯ ರಕ್ಷಣೆಗೂ ಸಹಕಾರಿರಕ್ತದಾನ ಶಿಬಿರದಿಂದ ಜಿಲ್ಲೆಗೆ ರಕ್ತ ಸಂಗ್ರಹಣೆಗೆ ಅನುಕೂಲವಾಗಲಿದೆ. ರಕ್ತದಾನ ಮಾಡುವುದರಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ ಇತರರ ಜೀವವನ್ನು ಉಳಿಸಬಹುದಾಗಿದೆ. ಈ ರಕ್ತದಾನ ಶಿಬಿರಕ್ಕೆ ಸುಮಾರು ೭,೬೦೦ ಜನರು ರಕ್ತದಾನಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ. ಜಿಲ್ಲೆಯ ವಿವಿಧ ತಾಲೂಕುಗಳು ಸೇರಿದಂತೆ ಬೆಂಗಳೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಂದಲೂ ಸ್ನೇಹಿತರು, ಹಿತೈಷಿಗಳು ಬಂದು ರಕ್ತದಾನ ಮಾಡಿದ್ದಾರೆಂದು ಸಚಿವರು ತಿಳಿಸಿದರು.
ಜಿಲ್ಲೆಯಲ್ಲಿ ರಕ್ತದ ಕೊರತೆಜಿಲ್ಲಾಧಿಕಾರಿ ರವೀಂದ್ರ ಅವರು ಮಾತನಾಡಿ, ಜಿಲ್ಲೆಯಲ್ಲಿ ೧೦೦೦ ಯೂನಿಟ್ ರಕ್ತ ಬೇಕಾಗಿದ್ದು ಕೇವಲ ೭೦೦ ಯೂನಿಟ್ ರಕ್ತ ಮಾತ್ರ ಲಭಿಸುತ್ತಿದೆ. ತುರ್ತುಪರಿಸ್ಥಿತಿಗಳು, ಅಪಘಾತ, ರಕ್ತಹೀನತೆ ಮುಂತಾದ ಸಂದರ್ಭದಲ್ಲಿ ಬೇರೆ ಬೇರೆ ಜಿಲ್ಲೆ ಹಾಗೂ ನೆರೆಯ ರಾಜ್ಯಗಳಿಂದ ರಕ್ತವನ್ನು ಸಂಗ್ರಹಣೆ ಮಾಡಿಕೊಳ್ಳಲಾಗುತ್ತಿತ್ತು. ಆದರೆ ಇಂತಹ ಬೃಹತ್ ರಕ್ತದಾನ ಶಿಬಿರಗಳಿಂದ ರಕ್ತ ಸಂಗ್ರಹಣೆ ಮಾಡಿ ರಕ್ತದ ಅವಶ್ಯಕತೆ ಇರುವವರಿಗೆ ಪೂರೈಸಬಹುದಾಗಿದೆ ಎಂದರು.
ರಕ್ತದಾನ ಶಿಬಿರ ಅಗತ್ಯರಕ್ತದಾನದ ಶಿಬಿರಗಳು ತುಂಬಾ ಅವಶ್ಯಕವಾಗಿದ್ದು ರಕ್ತದ ಕೊರತೆಯಿಂದ ಸಾಕಷ್ಟು ಮಂದಿ ಸಾವನ್ನಪ್ಪುತ್ತಿರುವ ಘಟನೆಗಳು, ಜಿಲ್ಲೆ, ರಾಜ್ಯ ಮತ್ತು ದೇಶದಲ್ಲಿ ಹೆಚ್ಚಾಗುತ್ತಿದ್ದು ಇಂತಹ ಸಂದರ್ಭದಲ್ಲಿ ತಕ್ಷಣ ರಕ್ತದಾನ ಮಾಡಲು ಸಾಧ್ಯವಾಗುವುದಿಲ್ಲ, ಇಂತಹ ಶಿಬಿರಗಳಿಂದ ರಕ್ತ ಸಂಗ್ರಹಣೆಗೊಂಡಾಗ ಜೀವ ಉಳಿವಿಗೆ ಆಸರೆಯಾಗುತ್ತದೆ ಎಂದರು.
3200 ಯೂನಿಟ್ ರಕ್ತ ಸಂಗ್ರಹರಕ್ತದಾನ ಶಿಬಿರದಲ್ಲಿ ಒಟ್ಟು 3200 ಯೂನಿಟ್ ರಕ್ತ ಸಂಗ್ರಹಿಸಲಾಗಿದ್ದು, ಇದು ಇಂದು ಇಂಡಿಯಾ ಬುಕ್ ಆಫ್ ರೆರಾರ್ಡ್ನಲ್ಲಿ ದಾಖಲಾಗಿದೆ. ಈ ಹಿಂದೆ ದೆಹಲಿಯಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ 2962 ಯೂನಿಟ್ ರಕ್ತ ಸಂಗ್ರಹಣೆಯಾಗಿ ದಾಖಲೆ ನಿರ್ಮಿಸಿತ್ತು. ಆ ದಾಖಲೆಯನ್ನು ಇಂದಿನ ರಕ್ತದಾನ ಶಿಬಿರ ಮುರಿದು ಹೊಸ ದಾಖಲೆ ಸೃಷ್ಟಿಸಿದೆ.
ಈ ಸಂದರ್ಭದಲ್ಲಿ ಡಾ.ಎಂ.ಸಿ.ಬಾಲಾಜಿ, ಜಿಲ್ಲಾ ಎಸ್ಪಿ ಕುಶಾಲ್ ಚೌಕ್ಸೆ, ಜಿಲ್ಲಾ ಹೆಚ್ಚುವರಿ ಎಸ್ಪಿ ಖಾಸಿಂ, ಡಿವೈಎಸ್ಪಿ ಪಿ.ಮುರಳೀಧರ್, ತಹಶೀಲ್ದಾರ್ ಸುದರ್ಶನ್ ಯಾದವ್, ಇಒ ಎಸ್.ಆನಂದ್, ನಗರಸಭಾ ಅಧ್ಯಕ್ಷ ಜಗನ್ನಾಥ್ ಮತ್ತಿತರರು ಇದ್ದರು.