ಸರ್ಕಾರಿ ಶಾಲೆಗಳಿಗೆ ಕಾಣಿಕೆ, ಸೇವೆ ಸಲ್ಲಿಕೆಯಾಗಲಿ-ಶಾಸಕ ಮಾನೆ

KannadaprabhaNewsNetwork | Published : Aug 31, 2024 1:36 AM

ದೇವಸ್ಥಾನಗಳಿಗೆ ಸಲ್ಲಿಸುವ ಕಾಣಿಕೆ, ಸೇವೆಯನ್ನು ಸರ್ಕಾರಿ ಶಾಲೆಗಳಿಗೂ ಸಹ ಸಲ್ಲಿಸಬೇಕಿದೆ. ಆಗ ಮಾತ್ರ ಭಗವಂತನನ್ನು ಖುಷಿ ಪಡಿಸಲು ಸಾಧ್ಯವಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ಹಾನಗಲ್ಲ: ದೇವಸ್ಥಾನಗಳಿಗೆ ಸಲ್ಲಿಸುವ ಕಾಣಿಕೆ, ಸೇವೆಯನ್ನು ಸರ್ಕಾರಿ ಶಾಲೆಗಳಿಗೂ ಸಹ ಸಲ್ಲಿಸಬೇಕಿದೆ. ಆಗ ಮಾತ್ರ ಭಗವಂತನನ್ನು ಖುಷಿ ಪಡಿಸಲು ಸಾಧ್ಯವಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ತಾಲೂಕಿನ ಆಡೂರು ಗ್ರಾಮದಲ್ಲಿ ಶುಕ್ರವಾರ ನಡೆದ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ ಉದ್ಘಾಟಿಸಿ ಅವರು ಮಾತನಾಡಿದರು.

ಒಂದೇ ವರ್ಷದಲ್ಲಿ ಸರ್ಕಾರದ ಒಂದೇ ಒಂದು ರುಪಾಯಿ ನೆರವು ಇಲ್ಲದೇ ಸಹೃದಯಿ ದಾನಿಗಳ ನೆರವು ಹಾಗೂ ವೈಯಕ್ತಿಕವಾಗಿ ತಾಲೂಕಿನ ೭೫ ಶಾಲೆಗಳಿಗೆ ಒಂದು ಕೋಟಿ ರು. ವೆಚ್ಚದಲ್ಲಿ ಮೂಲಸೌಕರ್ಯ ಕಲ್ಪಿಸಲಾಗಿದೆ. ಮುಂದಿನ ವರ್ಷ ಕನಿಷ್ಠ ಎರಡು ಕೋಟಿ ರು. ವೆಚ್ಚದಲ್ಲಿ ಮೂಲಸೌಕರ್ಯ ಕಲ್ಪಿಸುವ ಉದ್ದೇಶವಿದ್ದು, ಇದಕ್ಕೆ ಪ್ರತಿಯೊಬ್ಬರ ಸಹಕಾರವೂ ಬೇಕಿದೆ. ನಾವು ದುಡಿದ ಹಣದಲ್ಲಿ ಸ್ವಲ್ಪ ಭಾಗ ಭಗವಂತನಿಗೆ ಸಮರ್ಪಿಸುವ ರೂಢಿ ಹೊಂದಿದಂತೆ ಸರ್ಕಾರಿ ಶಾಲೆಗಳಿಗೆ ಮೂಲಸೌಕರ್ಯ ಕಲ್ಪಿಸಿ ಕಲಿಕೆಗೆ ಪೂರಕವಾದ ವಾತಾವರಣ ಸೃಷ್ಟಿಸಲು ಕಳಕಳಿ ಪ್ರದರ್ಶಿಸಬೇಕಿದೆ ಎಂದರು. ಪ್ರತಿಭೆ ಇದ್ದರೂ ವೇದಿಕೆ, ಅವಕಾಶದ ಕೊರತೆಯಿಂದ ಸಮಾಜದ ಮುಖ್ಯವಾಹಿನಿಗೆ ತಲುಪಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಇದೀಗ ಅಂಥ ವಾತಾವರಣವಿಲ್ಲ. ಸಾಕಷ್ಟು ಅವಕಾಶಗಳಿದ್ದು, ಸದ್ಬಳಕೆ ಮಾಡಿಕೊಂಡು ಉತ್ತಮ ಭವಿಷ್ಯರೂಪಿಸಿಕೊಳ್ಳಲು ಮುಂದಾಗುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ಬಿಇಒ ವಿ.ವಿ. ಸಾಲಿಮಠ ಮಾತನಾಡಿ, ಪ್ರತಿಭೆಗಳ ಪ್ರದರ್ಶನಕ್ಕೆ ಪ್ರತಿಭಾ ಕಾರಂಜಿ ಅತ್ಯಂತ ಸೂಕ್ತ ವೇದಿಕೆಯಾಗಿದೆ. ವಿದ್ಯಾರ್ಥಿಗಳಲ್ಲಿ ಒಂದಲ್ಲ, ಒಂದು ಪ್ರತಿಭೆ ಇದ್ದೆ ಇರುತ್ತದೆ. ಶಾಲಾ ಹಂತಗಳಲ್ಲಿ ಶಿಕ್ಷಕರು ಗುರುತಿಸಿ, ಮಾರ್ಗದರ್ಶನ ನೀಡಬೇಕಿದೆ. ಸ್ಪರ್ಧೆಗೆ ಒಡ್ಡಿಕೊಳ್ಳುವ ಮನೋಭಾವನೆ ವಿದ್ಯಾರ್ಥಿಗಳಲ್ಲಿ ಬೆಳೆದರೆ ಭವಿಷ್ಯದಲ್ಲಿನ ಸ್ಪರ್ಧೆ, ಸವಾಲುಗಳನ್ನೂ ಎದುರಿಸಲು ಸಾಧ್ಯವಾಗಲಿದೆ ಎಂದರು.ಗ್ರಾಪಂ ಅಧ್ಯಕ್ಷ ಮಾರ್ತಾಡಂಪ್ಪ ಬಾರ್ಕಿ, ಮಾಜಿ ಅಧ್ಯಕ್ಷ ನಾಗಪ್ಪ ಪೋಲೇಶಿ, ಉಪಪ್ರಾಚಾರ್ಯ ಮೋಹನ ನಾಯ್ಕ, ಬಾಬು ನಿಕ್ಕಂ, ಸೋಮಣ್ಣ ಗೋಣಗೇರ, ಬಾಬುಲಾಲ್ ನಾಯ್ಕರ್, ನಾಗರಾಜ ಸಿಂಗಾಪೂರ, ಶೇಕಪ್ಪ ಸಂಗೂರ, ನಾಗಪ್ಪ ಅಂಬಿಗೇರ, ಬಸವರಾಜ ದುಮ್ಮನವರ, ಶಬ್ಬೀರ ಆಲೂರ, ಸಂತೋಷ ಹೋತನಹಳ್ಳಿ, ರಫೀಕ್ ಉಪ್ಪುಣಸಿ ಇದ್ದರು.