ಸ್ವಾರ್ಥವೇ ತುಂಬಿರುವ ಇಂದಿನ ಸಮಾಜದಲ್ಲಿ ಉಳ್ಳವರು ಹಾಗೂ ಶ್ರೀಮಂತರು ಸಮಾಜಮುಖಿಯಾಗಿ ಆಲೋಚಿಸಿ ಭವಿಷ್ಯದ ಮಕ್ಕಳಿಗೆ ಸಹಾಯ ಮಾಡಬೇಕಿದೆ. ಜಿ.ನಾಗರಾಜು ತೆರೆಮರೆಯಲ್ಲಿ ಸಹಸ್ರಾರು ಮಕ್ಕಳಿಗೆ ನೆರವು ನೀಡುತ್ತಿದ್ದಾರೆ. ಪ್ರಚಾರವಿಲ್ಲದೆ ಮಾಡುವ ಇಂತಹ ದಾನಿಗಳು ನೀಡುವ ಕೊಡುಗೆಗೆ ನಿಜವಾದ ಅರ್ಥ ಸಿಗಬೇಕು ಎಂದರೆ ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಬೇಕು.
ಕಿಕ್ಕೇರಿ: ಸರ್ಕಾರಿ ಶಾಲೆಗಳ ಬಲವರ್ಧನೆಗೆ ಪ್ರತಿಯೊಬ್ಬರೂ ಕೈಜೋಡಿಸಿ ಕೆಲಸ ಮಾಡಬೇಕು ಎಂದು ಎಳನೀರು ವರ್ತಕ ಮಾದಾಪುರ ಯೋಗೇಶ್ ತಿಳಿಸಿದರು.
ಮಾದಾಪುರ ಗ್ರಾಪಂ ವ್ಯಾಪ್ತಿಯ ಸುತ್ತಮುತ್ತಲ ಸರ್ಕಾರಿ ಶಾಲೆಗಳ 500ಕ್ಕೂ ಹೆಚ್ಚು ಮಕ್ಕಳಿಗೆ ಬೆಂಗಳೂರಿನ ಹೊಸಕೋಟೆಯ ಸಮಾಜ ಸೇವಕರಾದ, ಉದ್ಯಮಿ ಪುಷ್ಪಾ ಜಿ.ನಾಗರಾಜು ಕೊಡುಗೆಯಾಗಿ ನೀಡಿದ 5 ಲಕ್ಷ ರು.ಗಳಷ್ಟು ಮೌಲ್ಯದ ಶಾಲಾ ಬ್ಯಾಗ್, ನೋಟ್ ಪುಸ್ತಕಗಳು, ಶಾಲಾ ಪರಿಕರ ಒಳಗೊಂಡಿರುವ ಪ್ರತಿ ವಿದ್ಯಾರ್ಥಿಗೆ 1 ಸಾವಿರ ರು. ಮೌಲ್ಯದ ಪಠ್ಯ ಸಾಮಗ್ರಿ ವಿತರಿಸಿ ಮಾತನಾಡಿದರು.
ಸ್ವಾರ್ಥವೇ ತುಂಬಿರುವ ಇಂದಿನ ಸಮಾಜದಲ್ಲಿ ಉಳ್ಳವರು ಹಾಗೂ ಶ್ರೀಮಂತರು ಸಮಾಜಮುಖಿಯಾಗಿ ಆಲೋಚಿಸಿ ಭವಿಷ್ಯದ ಮಕ್ಕಳಿಗೆ ಸಹಾಯ ಮಾಡಬೇಕಿದೆ. ಜಿ.ನಾಗರಾಜು ತೆರೆಮರೆಯಲ್ಲಿ ಸಹಸ್ರಾರು ಮಕ್ಕಳಿಗೆ ನೆರವು ನೀಡುತ್ತಿದ್ದಾರೆ. ಪ್ರಚಾರವಿಲ್ಲದೆ ಮಾಡುವ ಇಂತಹ ದಾನಿಗಳು ನೀಡುವ ಕೊಡುಗೆಗೆ ನಿಜವಾದ ಅರ್ಥ ಸಿಗಬೇಕು ಎಂದರೆ ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಬೇಕು ಎಂದರು.
ಸರ್ಕಾರಿ ಶಾಲೆಯಲ್ಲಿ ಎಲ್ಲ ಸೌಲಭ್ಯವಿದೆ. ದಾನಿಗಳ ಸಹಕಾರ ಕೂಡ ಇದೆ. ಈ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಜ್ಞಾನಾರ್ಜನೆಯನ್ನು ಮಕ್ಕಳು ಹೊಂದಿದರೆ ಮಾತ್ರ ಈ ದಾನಕ್ಕೆ ಗೌರವ ಸಮರ್ಪಣೆಯಾಗಲಿದೆ ಎಂದರು.
ಸಮಾಜ ಸೇವಕ, ಎಳನೀರು ವರ್ತಕ ಯೋಗೇಶ್ ಹಾಗೂ ಮಾನಸ ಯೋಗೇಶ್ ಅವರನ್ನು ಗೌರವಿಸಲಾಯಿತು.
ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಎಸ್ಡಿಎಂಸಿ ಅಧ್ಯಕ್ಷ ಯೋಗೇಶ್, ಮುಖಂಡರಾದ ಚಂದ್ರಶೇಖರ್, ಡಾ.ರಾಮಕೃಷ್ಣೇಗೌಡ, ಗ್ರಾಪಂ ಸದಸ್ಯೆ ವೀಣಾ ಅಶೋಕ್, ಕರ್ನಾಟಕ ಹಿತ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಪ್ರಶಾಂತ್, ಮುಖ್ಯ ಶಿಕ್ಷಕರಾದ ನಂಜುಂಡಯ್ಯ, ಶಿಕ್ಷಕರಾದ ಜ್ಯೋತಿ, ಮಂಗಳಾ, ದೇವರಾಜು, ಸೋಮಶೇಖರ್, ಗ್ರಾಪಂ ವ್ಯಾಪ್ತಿಯ ಎಲ್ಲಾ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.