ಸಣ್ಣ ಲಾಭಕ್ಕಾಗಿ ದೊಡ್ಡ ಮೋಸಕ್ಕೆ ಬಲಿಯಾಗಬೇಡಿ: ನ್ಯಾ. ಮಂಜುನಾಥ

KannadaprabhaNewsNetwork | Published : Dec 26, 2024 1:00 AM

ಸಾರಾಂಶ

ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ವ್ಯವಹಾರ ಸೃಷ್ಟಿಯಾಗಿದ್ದು, ಸಣ್ಣ ಲಾಭಕ್ಕಾಗಿ ದೊಡ್ಡ ಮೋಸಕ್ಕೆ ಬಲಿಯಾಗಬಾರದು.

ಕನ್ನಡಪ್ರಭ ವಾರ್ತೆ ಕುಷ್ಟಗಿ

ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ವ್ಯವಹಾರ ಸೃಷ್ಟಿಯಾಗಿದ್ದು, ಸಣ್ಣ ಲಾಭಕ್ಕಾಗಿ ದೊಡ್ಡ ಮೋಸಕ್ಕೆ ಬಲಿಯಾಗಬಾರದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಆರ್. ಮಂಜುನಾಥ ಹೇಳಿದರು.

ಪಟ್ಟಣದ ತಹಸೀಲ್ದಾರ ಕಾರ್ಯಾಲಯದಲ್ಲಿ ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ತಾಲೂಕು ಆಡಳಿತದ ಸಹಯೋಗದಲ್ಲಿ ನಡೆದ ರಾಷ್ಟ್ರೀಯ ಗ್ರಾಹಕರ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಪ್ರತಿಯೊಂದು ವಸ್ತುಗಳ ಖರೀದಿಗಾಗಿ ನಾವು ಮುಂದಾಗುತ್ತೇವೆ. ಖರೀದಿ ಮಾಡುವ ಸಮಯದಲ್ಲಿ ಅದರ ಗುಣಮಟ್ಟವನ್ನು ಅರಿತುಕೊಳ್ಳಬೇಕು. ಅಂದಾಗ ಮಾತ್ರ ಮೋಸದಿಂದ ಬಲಿಯಾಗುವುದು ತಪ್ಪುತ್ತದೆ ಎಂದರು.

ಸರ್ಕಾರಕ್ಕೆ ಕಟ್ಟುವ ತೆರಿಗೆ ಉಳಿಸುವ ದುರುದ್ದೇಶದಿಂದ ಸೇವೆ ಅಥವಾ ವಸ್ತುವನ್ನು ಪಡೆದುಕೊಳ್ಳುವ ಮೂಲಕ ವ್ಯವಹಾರ ಮಾಡುವುದು ಸರಿಯಾದ ಕ್ರಮವಲ್ಲ. ಅಧಿಕೃತವಾದ ರಸೀದಿ ಪಡೆದುಕೊಂಡಾಗ ಮಾತ್ರ ಖರೀದಿಸಿದ ವಸ್ತುವಿನಲ್ಲಿ ನ್ಯೂನ್ಯತೆಯು ಕಂಡು ಬಂದಾಗ ಗ್ರಾಹಕರ ರಕ್ಷಣಾ ವೇದಿಕೆಯಲ್ಲಿ ದಾವೆ ಹೂಡುವ ಮೂಲಕ ಪರಿಹಾರ ಕಂಡುಕೊಳ್ಳುವ ಅವಕಾಶಗಳು ಇದ್ದು ಸದುಪಯೋಗ ಪಡೆಯಬೇಕು ಎಂದರು.

ತಹಸೀಲ್ದಾರ ಅಶೋಕ ಶಿಗ್ಗಾಂವಿ ಮಾತನಾಡಿ, ಪ್ರತಿಯೊಬ್ಬರು ಪ್ರತಿಯೊಂದು ವಸ್ತುಗಳ ಖರೀದಿಗೆ ಬಿಲ್ ಪಡೆಯಲು ಮುಂದಾದಾಗ ಮಾತ್ರ ವ್ಯಾಪಾರಿಯು ಉತ್ತಮ ಗುಣಮಟ್ಟದ ವಸ್ತುಗಳ ಮಾರಾಟಕ್ಕೆ ಮುಂದಾಗುತ್ತಾರೆ ಎಂದರು.

ವಕೀಲರ ಸಂಘದ ಅಧ್ಯಕ್ಷ ಸಂಗನಗೌಡ ಪಾಟೀಲ ಮಾತನಾಡಿ, ಸಾರ್ವಜನಿಕರು ಜಾಹಿರಾತುಗಳಿಗೆ ಮಾರುಹೋಗಿ ವಸ್ತುಗಳನ್ನು ಖರೀದಿಸಬಾರದು. ಅವುಗಳ ಸಂಪೂರ್ಣವಾದ ಮಾಹಿತಿ ಪಡೆದುಕೊಂಡು ಗುಣಮಟ್ಟ ತಿಳಿದುಕೊಂಡು ವ್ಯವಹಾರ ಮಾಡಬೇಕು. ಮೋಸ ಉಂಟಾದಲ್ಲಿ ಕಾನೂನು ಸೇವಾ ಸಮಿತಿಯಲ್ಲಿ ಸೂಕ್ತ ಮಾಹಿತಿ ಪಡೆದುಕೊಂಡು ಮುಂದಿನ ಕಾನೂನು ಕ್ರಮಕ್ಕೆ ಮುಂದಾಗಬೇಕು ಎಂದರು.

ಈ ಸಂದರ್ಭ ಸಹಾಯಕ ಸರ್ಕಾರಿ ಅಭಿಯೋಜಕ ರಾಯನಗೌಡ, ಅಪರ ಸರ್ಕಾರಿ ವಕೀಲ ಪರಸಪ್ಪ ಗುಜಮಾಗಡಿ, ಆಹಾರ ಇಲಾಖೆಯ ಶಿರಸ್ತೇದಾರ ಚನ್ನಬಸಪ್ಪ, ಆಹಾರ ನಿರೀಕ್ಷಕ ರಮೇಶ ತಾಳಕೇರಿ, ಗ್ರಾಮ ಆಡಳಿತಾಧಿಕಾರಿ ಶರಣಪ್ಪ ಹುಡೇದ, ನ್ಯಾಯಾಲಯದ ಸಿಬ್ಬಂದಿ, ಕಂದಾಯ ಇಲಾಖೆಯ ಸಿಬ್ಬಂದಿ ಹಾಗೂ ಸಾರ್ವಜನಿಕರು ಇತರರಿದ್ದರು.

Share this article