ಕೊಟ್ಟೂರು: ಹೊರ ದೇಶದಲ್ಲಿ ಉತ್ತಮ ಉದ್ಯೋಗ ದೊರಕಿಸಿಕೊಳ್ಳಬೇಕೆಂಬ ಕಾರಣಕ್ಕಾಗಿ ರಾಷ್ಟ್ರದ ಹಲವರು ಉನ್ನತ ವಿದ್ಯಾಭ್ಯಾಸ ಕಲಿಯತೊಡಗಿರುವುದು ಸರಿಯಲ್ಲ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಹೊರದೇಶದವರನ್ನು ಹೊರ ದಬ್ಬುವ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ರಾಷ್ಟ್ರದ ಪ್ರತಿಯೊಬ್ಬ ಪ್ರತಿಭಾವಂತರು ಹೆಚ್ಚು ಗಮನ ಹರಿಸಬೇಕಿದೆ ಎಂದು ಸಾಹಿತಿ ಕುಂ. ವೀರಭದ್ರಪ್ಪ ಹೇಳಿದರು.
ಪೋಷಕರು ಮಕ್ಕಳನ್ನು ಉನ್ನತ ಸ್ಥಾನದಲ್ಲಿ ನೋಡಬೇಕೆಂಬ ಕಾರಣಕ್ಕಾಗಿ ಮಗು ಇದ್ದಾಗಲೇ ತಮ್ಮ ಸಂಪರ್ಕ ಕಡಿತಗೊಳಿಸಿ ಬೇರೆಡೆಗೆ ಕಳುಹಿಸುತ್ತಿದ್ದಾರೆ. ಇದರಿಂದಾಗಿ ಆ ಮಕ್ಕಳು ತಂದೆ ತಾಯಿಯೊಂದಿಗೆ ಹೊಂದಿಕೊಂಡು ಮುಂದೆ ಸಾಗಬೇಕಿದ್ದವರು ತಮ್ಮ ಪೋಷಕರನ್ನು ವೃದ್ಧಾಶ್ರಮಕ್ಕೆ ಸೇರ್ಪಡಿಸಿ ಹೊರದೇಶಕ್ಕೆ ಹೋಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಮಹಾದೇವ ಇಂಟರ್ನ್ಯಾಶನಲ್ ಸ್ಕೂಲ್ ತನ್ನ ಉನ್ನತೀಕರಣದ ಧ್ಯೇಯೋದ್ದೇಶಗಳು ದೇಶೀಯ ಸಂಸ್ಕೃತಿಯನ್ನು ಮಕ್ಕಳಲ್ಲಿ ಪ್ರತಿಬಿಂಬಿಸುವ ಕೆಲಸ ಕಾರ್ಯಗಳಿಗೆ ಒತ್ತು ನೀಡಿ ತರಬೇತಿ ನೀಡುತ್ತಿರುವುದು ನಿಜಕ್ಕೂ ಸಾರ್ಥಕ ಕೆಲಸ ಇದಕ್ಕಾಗಿ ಸ್ಕೂಲಿನ ಸ್ಥಾಪಕರಾದ ಬಸಾಪುರ ಪಂಪಾಪತಿ ದಂಪತಿಯನ್ನು ಅಭಿನಂದಿಸುವೆ ಎಂದರು.ಕನ್ನಡ ಅತಿಹೆಚ್ಚು ಸೌಕ್ಯ ಸಂತೋಷ ತರುವ ಭಾಷೆಯಾಗಿದೆ. ಈ ಭಾಷೆಯ ಜೊತೆಗೆ ಇಂಗ್ಲೀಷನ್ನು ಕಲಿಯಬೇಕು. ಇಂಗ್ಲೀಷ್ ಕಲಿತ ತಕ್ಷಣ ಐಟಿಬಿಟಿಗೆ ತೆರಳಬೇಕೆಂಬ ಸೀಮಿತವನ್ನು ಯಾರೊಬ್ಬರು ಮಾಡಿಕೊಳ್ಳಬಾರದು ಎಂದರು.
ಸ್ಕೂಲಿನ ವ್ಯವಸ್ಥಾಪಕ ಅಧ್ಯಕ್ಷ ಮಧುಸೂದನ್, ಸರೋಜ ಪಂಪಾಪತಿ, ಅರವಿಂದ ಬಸಾಪುರ, ಶಿಕ್ಷಕ ಕೊಟ್ರೇಶ್, ಸಂದೀಪ್, ಸಮೀರ್ ಮುಖ್ಯ ಅತಿಥಿಗಳಾಗಿ ಭಾಗವಹಸಿದ್ದರು. ಸಂಗೀತ ಸಿತಾರ ನಿರೂಪಿಸಿದರು. ಸ್ಕೂಲಿನ ವಾರ್ಷಿಕೋತ್ಸವದ ಅಂಗವಾಗಿ ಮಧ್ಯರಾತ್ರಿವರೆಗೂ ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.