ಪರಶಿವಮೂರ್ತಿ ದೋಟಿಹಾಳ
ಈ ಸೇತುವೆ ದೋಟಿಹಾಳದಿಂದ ಮುದೇನೂರು ಮೂಲಕ ತಾವರಗೇರಾ ರಾಯಚೂರು ಸಂಪರ್ಕ ಕಲ್ಪಿಸುವ ಜಿಲ್ಲಾ ಮುಖ್ಯ ರಸ್ತೆಯಾಗಿದೆ. ಈ ಸೇತುವೆ ಮೇಲೆ ಹತ್ತಾರು ಗುಂಡಿಗಳು ಬಿದ್ದು ಸಂಚಾರಕ್ಕೆ ತೊಡಕಾಗಿದೆ.
ಉರುಳಿದ ಟಿಪ್ಪರ್: ಶುಕ್ರವಾರ ಬಳೂಟಗಿ ಗ್ರಾಮದಿಂದ ದೋಟಿಹಾಳ ಮಾರ್ಗವಾಗಿ ಕುಷ್ಟಗಿ ಪಟ್ಟಣಕ್ಕೆ ಹೊರಟಿರುವ ಟಿಪ್ಪರ್ ಹಳ್ಳಕ್ಕೆ ಉರುಳಿ ಬಿದ್ದಿದೆ. ಸೇತುವೆ ಮೇಲಿರುವ ಗುಂಡಿಗಳನ್ನು ತಪ್ಪಿಸುವ ಸಲುವಾಗಿ ಚಾಲಕ ಶಿವಪ್ಪ ಮದ್ನಾಳ ಅವರು ಗಾಡಿಯನ್ನು ಎಡಗಡೆ ತಿರುಗಿಸಿದ ಪರಿಣಾಮ ಅಪಘಾತ ಸಂಭವಿಸಿದೆ. ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.ರಾತ್ರಿಯ ಹೊತ್ತು ಸೇತುವೆ ಮೇಲೆ ಸಂಚಾರ ಮಾಡುವ ವಾಹನ ಸವಾರರಿಗೆ ಡಬಲ್ ಗುಂಡಿಗೆ ಇರಬೇಕು. ಸೇತುವೆಯ ತಡೆಗೋಡೆ ಕುಸಿದು ಹೋಗಿದೆ. ಕೂಡಲೇ ಹೊಸ ಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳದಿದ್ದರೆ ದೊಡ್ಡ ಅನಾಹುತವಾಗುವುದು ನಿಶ್ಚಿತ ಎಂದು ಸಾರ್ವಜನಿಕರು ಕಳವಳ ವ್ಯಕ್ತಪಡಿಸಿದ್ದಾರೆ.
ಹಳೆಯದಾದ ಸೇತುವೆ: ಸುಮಾರು 30 ವರ್ಷಗಳ ಹಿಂದೆ ನಿರ್ಮಿಸಿರುವ ಈ ಸೇತುವೆ ಮೂಲಕ ದೋಟಿಹಾಳದಿಂದ ಮುದೇನೂರು, ಮುದಗಲ್, ತಾವರಗೇರಾ, ಸಿಂಧನೂರು, ಲಿಂಗಸೂರು, ರಾಯಚೂರು, ಬಾದಾಮಿ ಸೇರಿದ್ದಂತೆ 50ಕ್ಕೂ ಹೆಚ್ಚು ಹಳ್ಳಿಗಳಿಗೆ ಹೋಗಲು ಅನುಕೂಲವಿದೆ.
₹1 ಕೋಟಿ ಅನುದಾನ: ದೋಟಿಹಾಳದ ನವನಗರ ಸೇತುವೆ ನಿರ್ಮಾಣಕ್ಕೆ ಸುಮಾರು ಒಂದು ಕೋಟಿ ರು. ಮಂಜೂರಾಗಿದ್ದು, ಆದಷ್ಟು ಬೇಗನೆ ಸೇತುವೆ ನಿರ್ಮಾಣದ ಕಾಮಗಾರಿ ಆರಂಭಿಸಬೇಕು, ಸಂಚಾರಕ್ಕೆ ಅನೂಕೂಲ ಮಾಡಿಕೊಡಬೇಕು ಎನ್ನುತ್ತಾರೆ ದೋಟಿಹಾಳದ ನಿವಾಸಿಗಳು.
ದೋಟಿಹಾಳ ನವನಗರದ ಸೇತುವೆ ಸಂಪೂರ್ಣವಾಗಿ ಶಿಥಿಲಗೊಂಡಿದೆ. ಈ ಕುರಿತು ಎಇಇ ಅವರಿಗೆ ಮಾತನಾಡಿದ್ದು, ಮಳೆಗಾಲ ಮುಗಿದ ಮೇಲೆ ಕಾಮಗಾರಿ ಆರಂಭಗೊಳಿಸುವುದು ಎಂದು ಭರವಸೆ ನೀಡಿದ್ದಾರೆ. ಕಾಯಬೇಕಿದೆ. ತಾತ್ಕಾಲಿಕವಾಗಿ ರಸ್ತೆ ಅಭಿವೃದ್ಧಿ ಮಾಡಲಾಗಿದೆ ಎಂದು ದೋಟಿಹಾಳ ಗ್ರಾಪಂ ಅಧ್ಯಕ್ಷ ಮಹೇಶ ಕಾಳಗಿ ಹೇಳಿದರು.