ಕಾರವಾರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ ಅವರಿಗೆ ಉತ್ತರ ಕನ್ನಡ ಜಿಲ್ಲೆಯ ಹೊರಗಿನವರಾಗಿದ್ದು, ಜಿಲ್ಲೆಯ ಜನತೆಗೆ ಪರಿಚಯಿಸಿಕೊಳ್ಳುವುದೇ ದೊಡ್ಡ ಚಿಂತೆಯಾಗಿದೆ. ಬಿಜೆಪಿಯ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಸಂಸದ ಅನಂತಕುಮಾರ ಹೆಗಡೆ ಪ್ರಚಾರಕ್ಕೆ ಬರದಿದ್ದರೆ ಏನು ಎನ್ನುವುದು ಸಮಸ್ಯೆಯಾಗಿದೆ.
6 ಬಾರಿ ಗೆದ್ದು ಈ ಬಾರಿ ಟಿಕೆಟ್ ವಂಚಿತರಾದ ಸಂಸದ ಅನಂತಕುಮಾರ ಹೆಗಡೆ ಟಿಕೆಟ್ ತಪ್ಪುತ್ತಿದ್ದಂತೆ ಯಾರ ಸಂಪರ್ಕಕ್ಕೂ ಸಿಗದೆ ಇದ್ದಾರೆ. ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರೂ ಸಂಸದರನ್ನು ಭೇಟಿಯಾಗುವ ಪ್ರಯತ್ನ ಫಲಿಸಿಲ್ಲ. ಕ್ಷೇತ್ರದಲ್ಲಿ ಅನಂತಕುಮಾರ ಅವರ ಬೆಂಬಲಿಗರ ಸಂಖ್ಯೆ ಸಾಕಷ್ಟಿದೆ. ಅನಂತಕುಮಾರ ಪ್ರಚಾರಕ್ಕೆ ಬಂದರೆ ಗೆಲುವು ಸುಲಭವಾಗಲಿದೆ ಎನ್ನುವುದು ಕಾಗೇರಿ ಅವರ ಲೆಕ್ಕಾಚಾರ. ಆದರೆ ಅವರು ಪ್ರಚಾರಕ್ಕೆ ಬರಲಿದ್ದಾರೆಯೇ, ಇಲ್ಲವೇ ಎನ್ನುವುದು ಸ್ಪಷ್ಟವಾಗದೆ ಇರುವುದು ಕಾಗೇರಿ ಅವರಿಗೆ ತಲೆನೋವಾಗಿದೆ. ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಅವರಂತೂ ಬಿಜೆಪಿ ಪರವಾಗಿ ಪ್ರಚಾರಕ್ಕೆ ಬರುವ ಸಾಧ್ಯತೆ ಕಾಣಿಸುತ್ತಿಲ್ಲ.
ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ಒಂದೊಂದು ಸಮಸ್ಯೆ ಎದುರಿಸುತ್ತಿದ್ದಾರೆ. ಖಾನಾಪುರದಲ್ಲಿ ಡಾ. ಅಂಜಲಿ ಒಮ್ಮೆ ಗೆದ್ದು ಒಮ್ಮೆ ಸೋತಿದ್ದಾರೆ. ಕಾಗೇರಿ ಸತತ ಆರು ಬಾರಿ ಗೆದ್ದು 2023ರಲ್ಲಿ ಸೋತಿದ್ದಾರೆ. ಇಬ್ಬರೂ ಒಮ್ಮೆ ಸೋತ ಅಭ್ಯರ್ಥಿಗಳೇ ಆಗಿರುವುದು ವಿಶೇಷ.ಹಾಗೆ ನೋಡಿದರೆ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಇಡಿ ಜಿಲ್ಲೆಯ ಪರಿಚಯವೂ ಇದೆ. ಶಿಕ್ಷಣ ಸಚಿವರಾಗಿ ಹಾಗೂ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದರಿಂದ ಲೋಕಸಭಾ ಕ್ಷೇತ್ರದಲ್ಲೂ ಅವರ ಹೆಸರು ಪರಿಚಿತವಾಗಿದೆ. ಅಂಜಲಿ ನಿಂಬಾಳ್ಕರ್ ಉತ್ತರ ಕನ್ನಡ ಜಿಲ್ಲೆಯಲ್ಲಿ ಹೊಸದಾಗಿ ಪರಿಚಯಿಸಿಕೊಳ್ಳಬೇಕಾಗಿದೆ.
ಇಬ್ಬರೂ ಅಭ್ಯರ್ಥಿಗಳು ಪ್ರಚಾರಕಾರ್ಯದಲ್ಲಿ ಬಿರುಸಿನಿಂದ ಪಾಲ್ಗೊಂಡಿದ್ದಾರೆ. ಭೌಗೋಳಿಕವಾಗಿ ವಿಸ್ತಾರವಾಗಿರುವ ಈ ಕ್ಷೇತ್ರಾದ್ಯಂತ ಸಂಚರಿಸಿ ಮತದಾರರನ್ನು ತಲುಪುವುದೂ ಒಂದು ಸವಾಲೇ ಸರಿ.