ಧಾರವಾಡ: ಕರ್ನಾಟಕದ ಸಾಂಸ್ಕೃತಿಕ ಹಾಗೂ ಸಾಹಿತ್ಯ ಪರಂಪರೆ ಗೌರವಿಸುವ ಉದ್ದೇಶದಿಂದ ಭಾರತೀಯ ಅಂಚೆ ಇಲಾಖೆಯು ಶಾಶ್ವತ ರೇಖಾ ಚಿತ್ರಿತ ರದ್ಧತಿ ಮುದ್ರೆ(Permanent Pictorial Cancellations–PPCs) ಬಿಡುಗಡೆಗೊಳಿಸುತ್ತಿದೆ ಎಂದು ಕರ್ನಾಟಕ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ರಾಜೇಂದ್ರ ಕುಮಾರ್ ಹೇಳಿದರು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ದ.ರಾ. ಬೇಂದ್ರೆ ನಿವಾಸದ ಶಾಶ್ವತ ರೇಖಾಚಿತ್ರಿತ ರದ್ಧತಿ ಮುದ್ರೆ ಬಿಡುಗಡೆ ಬಹಳ ವಿರಳ ಮತ್ತು ಅನನ್ಯ ಎಂದ ಅವರು, ಧಾರವಾಡ ವೃತ್ತದಿಂದ ಮೂರು ರೇಖಾಚಿತ್ರಿತ ರದ್ಧತಿ ಮೋಹರುಗಳನ್ನು ಬಿಡುಗಡೆಗೊಳಿಸಿದೆ. ಆದಿಕವಿ ಪಂಪ, ಉಣಕಲ್ ಹಾಗೂ ಡಾ.ದ.ರಾ. ಬೇಂದ್ರೆ ನಿವಾಸದ್ದಾಗಿದೆ ಎಂಬ ಮಾಹಿತಿ ನೀಡಿದರು.
ಡಾ. ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಡಾ. ಡಿ.ಎಂ. ಹಿರೇಮಠ, ಬೇಂದ್ರೆಯವರ ನಿವಾಸವನ್ನು ಶಾಶ್ವತ ರೇಖಾಚಿತ್ರಿತ ಮೋಹರಿಗೆ ಆಯ್ಕೆ ಮಾಡಿರುವುದಕ್ಕೆ ಭಾರತೀಯ ಅಂಚೆ ಇಲಾಖೆಯ ಕಾರ್ಯ ಶ್ಲಾಘನೀಯ ಎಂದರು.ಉತ್ತರ ಕರ್ನಾಟಕ ವಲಯದ ಪೋಸ್ಟ್ ಮಾಸ್ಟರ್ ಜನರಲ್ ಕರ್ನಲ್ ಸುಶೀಲ್ಕುಮಾರ್ ಮಾತನಾಡಿ, ಇಂತಹ ಪ್ರಮುಖ ವ್ಯಕ್ತಿಗಳ ಮತ್ತು ಸ್ಮಾರಕಗಳ ಶಾಶ್ವತ ರೇಖಾಚಿತ್ರಿತ ರದ್ಧತಿಗಳ ದಾಖಲೆಗಳು ಬಹುಪ್ರಾಮುಖ್ಯತೆ ಹೊಂದಿವೆ. ಇವು ಭಾರತೀಯ ಅಂಚೆ ವ್ಯವಸ್ಥೆ ಮೂಲಕ ಅಂಚೆ- ಚೀಟಿ ಪ್ರೇಮಿಗಳಿಗೆ ಮತ್ತು ಸಾರ್ವಜನಿಕರಿಗೆ ಸ್ಮರಣಿಕೆಯಾಗಿ ಉಳಿಯಬಲ್ಲವಾಗಿವೆ ಎಂದರು.
ಬೇಂದ್ರೆ ಟ್ರಸ್ಟ್ ಸದಸ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಸೊಲಗಿ ಇದ್ದರು. ಡಾ. ದ.ರಾ. ಬೇಂದ್ರೆ ನಿವಾಸದ ಶಾಶ್ವತ ರೇಖಾಚಿತ್ರ ಅಂಚೆ ಮೋಹರು ನಾರಾಯಣಪುರ ಉಪ ಅಂಚೆ ಕಚೇರಿಯಲ್ಲಿ ಲಭ್ಯವಿರುತ್ತದೆ. ಸಾರ್ವಜನಿಕರು ಹಾಗೂ ಅಂಚೆ ಚೀಟಿ ಪ್ರೇಮಿಗಳು ಈ ವಿಶಿಷ್ಟ ಅವಕಾಶ ಸದುಪಯೋಗಪಡಿಸಿಕೊಳ್ಳಲು ಧಾರವಾಡ ವಿಭಾಗ ಹಿರಿಯ ಅಂಚೆ ಅಧೀಕ್ಷಕ ವೈಭವ ವಾಘಮಾರೆ ಕೋರಿದರು. ಅಂಚೆ ಕಚೇರಿಗಳ ಉಪಅಧೀಕ್ಷಕ ಎಸ್. ವಿಜಯನರಸಿಂಹ ಪ್ರಾಸ್ತಾವಿಕ ಮಾತನಾಡಿದರು. ಶಾಂಭವಿ ದೇಗಾವಿಮಠ ಪ್ರಾರ್ಥಿಸಿದರು. ಸಿದ್ದಲಿಂಗಪ್ಪ ಯಾವಗಲ್ ನಿರೂಪಿಸಿದರು. ಷಣ್ಮುಖ ಶಿರಹಟ್ಟಿ ವಂದಿಸಿದರು.ಟ್ರಸ್ಟ್ ವ್ಯವಸ್ಥಾಪಕ ಪ್ರಕಾಶ ಬಾಳಿಕಾಯಿ, ಡಾ. ಶಶಿಧರ ನರೇಂದ್ರ, ಸುಕುಮಾರ ನಾಯ್ಕ್, ಪ್ರೊ. ಎನ್.ಆರ್. ಬಾಳಿಕಾಯಿ, ಸುರೇಶ ಗುದಗನವರ, ದೀಪಕ ಆಲೂರ ಸೇರಿದಂತೆ ಹಲವರಿದ್ದರು.