ಡಾ. ಫ.ಗು. ಹಳಕಟ್ಟಿ ಅಪರೂಪದ ವ್ಯಕ್ತಿ: ಎಸ್.ಆರ್. ಪಾಟೀಲ

KannadaprabhaNewsNetwork | Published : Jul 2, 2025 11:50 PM
ಕಾರ್ಯಕ್ರಮದಲ್ಲಿ ಬಸವಶಾಂತಲಿಂಗ ಸ್ವಾಮೀಜಿ ಉದ್ಘಾಟಿಸಿದರು. | Kannada Prabha

ಡಾ. ಫ.ಗು. ಹಳಕಟ್ಟಿಯವರು ವಕೀಲರಾಗಿ, ಶಿಕ್ಷಣ, ಸಹಕಾರ, ಕೃಷಿ, ವಚನ ಸಾಹಿತ್ಯ ಮೊದಲಾದ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರ ಮೂಲಕ ಸದೃಢ ಸಮಾಜ ನಿರ್ಮಾಣಕ್ಕೆ ತಮ್ಮದೆ ಆದ ಕೊಡುಗೆ ನೀಡಿದ್ದಾರೆ.

ಹಾವೇರಿ: ವಚನ ಪಿತಾಮಹ ಎಂದೇ ಹೆಸರುವಾಸಿಯಾದ ಡಾ. ಫ.ಗು. ಹಳಕಟ್ಟಿಯವರು ಕನ್ನಡ ನಾಡು ಕಂಡ ಅಪರೂಪದ ವ್ಯಕ್ತಿ. ಇವರು ವಚನ ಸಾಹಿತ್ಯವನ್ನು ಸಂಗ್ರಹಿಸಿ ತಮ್ಮ ಸ್ವಂತ ಖರ್ಚಿನಲ್ಲಿ ಮುದ್ರಣ ಮಾಡಿ ಪ್ರಕಟಿಸಿ ವಚನ ಸಾಹಿತ್ಯವನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಆರ್. ಪಾಟೀಲ ತಿಳಿಸಿದರು.ನಗರದ ಗಾಂಧಿ ಭವನದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬಸವೇಶ್ವರ ಬಿಇಡಿ ಕಾಲೇಜಿನ ಸಹಯೋಗದಲ್ಲಿ ಆಯೋಜಿಸಿದ್ದ ಡಾ. ಫ. ಗು ಹಳಕಟ್ಟಿಯವರ ಜನ್ಮದಿನ, ವಚನ ಸಂರಕ್ಷಣಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಡಾ. ಫ.ಗು. ಹಳಕಟ್ಟಿಯವರು ವಕೀಲರಾಗಿ, ಶಿಕ್ಷಣ, ಸಹಕಾರ, ಕೃಷಿ, ವಚನ ಸಾಹಿತ್ಯ ಮೊದಲಾದ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರ ಮೂಲಕ ಸದೃಢ ಸಮಾಜ ನಿರ್ಮಾಣಕ್ಕೆ ತಮ್ಮದೆ ಆದ ಕೊಡುಗೆ ನೀಡಿದ್ದಾರೆ ಎಂದರು.ಉಪನ್ಯಾಸಕ ಶೇಖರ ಭಜಂತ್ರಿ ಅವರು, ಡಾ. ಫ.ಗು. ಹಳಕಟ್ಟಿಯವರ ಜೀವನ ಚರಿತ್ರೆ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದರು. ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಸ್.ಎಫ್.ಎನ್. ಗಾಜಿಗೌಡ್ರ, ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಎಂ. ಮೈದೂರ, ನಗರಸಭೆ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಆರ್.ವಿ. ಚಿನ್ನಕಟ್ಟಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಲಿಂಗಯ್ಯ ಬಿ. ಹಿರೇಮಠ, ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷ ಮಾರುತಿ ಶಿಡ್ಲಾಪೂರ, ಬಸವೇಶ್ವರ ಬಿಇಡಿ ಕಾಲೇಜಿನ ಪ್ರಾಚಾರ್ಯ ಮಂಜುನಾಥ ವಡ್ಡರ ಇತರರು ಉಪಸ್ಥಿತರಿದ್ದರು.ವಚನ ಪಿತಾಮಹ ಎಂದೇ ಖ್ಯಾತರಾದ ಡಾ. ಫ.ಗು. ಹಳಕಟ್ಟಿ

ಸವಣೂರು: ಪಟ್ಟಣದ ವಿ.ಕೃ. ಗೋಕಾಕ ಸಭಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ ಡಾ. ಫ.ಗು. ಹಳಕಟ್ಟಿ ಜಯಂತಿ ಕಾರ್ಯಕ್ರಮವನ್ನು ವಚನ ಸಾಹಿತ್ಯ ಸಂರಕ್ಷಣಾ ದಿನವನ್ನಾಗಿ ಅತ್ಯಂತ ಸರಳ ಮತ್ತು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರೇಡ್- 2 ತಹಸೀಲ್ದಾರ್ ಗಣೇಶ ಸವಣೂರ, ಡಾ. ಫ.ಗು. ಹಳಕಟ್ಟಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಡಾ. ಹಳಕಟ್ಟಿಯ ವಚನ ಸಾಹಿತ್ಯಕ್ಕೆ ನೀಡಿದ ಮಹತ್ತರ ಕೊಡುಗೆಗಳನ್ನು ಸ್ಮರಿಸಿ, ಅವರ ಕೃತಿಗಳು, ಜೀವನ ವೈಖರಿ ಮತ್ತು ಸಮಾಜ ಸುಧಾರಣೆಯ ಕಾರ್ಯಗಳ ಕುರಿತು ಪ್ರಶಂಸಿದರು.ಫ.ಗು. ಹಳಕಟ್ಟಿಯವರ ವಚನ ಪಿತಾಮಹ ಎಂದು ಪ್ರಖ್ಯಾತರಾದವರು. ಸಂಶೋಧಕರು, ಸಾಹಿತ್ಯ ಪ್ರಚಾರಕರು ಮತ್ತು ಸಂಪಾದಕರು ಆಗಿ ಸೇವೆ ಸಲ್ಲಿಸಿದ್ದವರು ಎಂದರು.

ಈ ಸಂದರ್ಭದಲ್ಲಿ ಸಿಡಿಪಿಒ ಉಮಾ ಕೆ.ಎಸ್., ಸಾಹಿತ್ಯ ಪ್ರೇಮಿಗಳಾದ ಪರಶುರಾಮ ಈಳಗೇರ, ಬಾಬನಸಾಬ ರಾಯಚೂರು, ಶಿರಸ್ತೇದಾರರಾದ ಎಸ್.ಎಸ್. ಪಾಟೀಲ, ಎಸ್.ಎಸ್. ನಾಯ್ಕರ್ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿ ಇದ್ದರು.

ಅಸಮಾಧಾನ: ವಚನ ಪರಂಪರೆಯ ಮಹಾಪುರುಷರ ಜಯಂತಿಗಳನ್ನು ಎಲ್ಲ ಇಲಾಖೆಗಳಿಂದ ಸಹಭಾಗಿತ್ವದೊಂದಿಗೆ ಆಚರಿಸಬೇಕಾಗಿತ್ತು. ಆದರೆ ತಾಲೂಕಿನಲ್ಲಿ ವಿವಿಧ ಮಹನೀಯರ ಜಯಂತಿ, ಪುಣ್ಯತಿಥಿಗಳನ್ನು ಕೇವಲ ಕಂದಾಯ ಇಲಾಖೆ ಮಟ್ಟದಲ್ಲಿ ಮಾತ್ರ ಆಚರಿಸಲಾಗುತ್ತಿರುವುದು ವಚನ ಸಾಹಿತ್ಯಾಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.