ಹಳಕಟ್ಟಿ ಇಲ್ಲದಿದ್ದರೆ ಓದಲು ವಚನಗಳೇ ಸಿಗುತ್ತಿರಲಿಲ್ಲ

KannadaprabhaNewsNetwork | Updated : Jul 03 2025, 12:43 PM IST
ಚಿತ್ರದುರ್ಗ ಎರಡನೇ ಪುಟದ ಲೀಡ್  | Kannada Prabha

ಚಿತ್ರದುರ್ಗ ಬಸವಕೇಂದ್ರ ಮುರುಘಾಮಠದಲ್ಲಿ ಬುಧವಾರ ಆಯೋಜಿಸಿದ್ದ ವಚನ ಸಂರಕ್ಷಣಾ ದಿನಾಚರಣೆಯಲ್ಲಿ ಡಾ.ಬಸವಕುಮಾರ ಸ್ವಾಮೀಜಿ ಮಾತನಾಡಿದರು.

 ಚಿತ್ರದುರ್ಗ :  ಫಕೀರಪ್ಪ ಗುರುಪಾದಪ್ಪ ಹಳಕಟ್ಟಿ ಇಲ್ಲದಿದ್ದರೆ ಬಸವಾದಿ ಶರಣರ ವಚನಗಳು ಕರುನಾಡಿನ ಜನತೆಗೆ ಓದಲು ಲಭ್ಯವಾಗುತ್ತಿರಲಿಲ್ಲವೆಂದು ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್ ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ಹೇಳಿದರು.

ಬಸವಕೇಂದ್ರ ಮುರುಘಾಮಠದ ಅನುಭವನ ಮಂಟಪದಲ್ಲಿ ಬುಧವಾರ ಆಯೋಜಿಸಿದ್ದ ವಚನ ಪಿತಾಮಹ ಫ.ಗು.ಹಳಕಟ್ಟಿಯವರ 145 ನೇ ಜಯಂತ್ಯುತ್ಸವ ಹಾಗೂ ವಚನ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು ತಾವು ನೋವುಂಡರೂ ಸಹ ಛಲ ಬಿಡದೆ ಚದುರಿ ಹೋಗಿದ್ದ ಸಾವಿರಾರು ವಚನಗಳನ್ನು ಹುಡುಕಿ ಹೆಕ್ಕಿ ಪ್ರಕಟಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ನೂರಾರು ವಚನಕಾರರ ಹತ್ತು ಸಾವಿರಕ್ಕೂ ಹೆಚ್ಚು ವಚನಗಳನ್ನು ಬೆಳಕಿಗೆ ತಂದಿದ್ದಾರೆ ಎಂದರು.

ಫ.ಗು.ಹಳಕಟ್ಟಿಯವರ ಅವಿರತ ಶ್ರಮದ ಫಲವಾಗಿ ನಾವು ಇಂದು ಶರಣರ ವಚನಗಳನ್ನು ಕಾಣುತ್ತಿದ್ದೇವೆ. ನಾವೆಲ್ಲ ಅವರ ಜೀವನ ಸಾಧನೆಯ ಬಗ್ಗೆ ಅರಿತುಕೊಂಡು ನಮ್ಮ ಬದುಕು ಸಾರ್ಥಕಪಡಿಸಿಕೊಳ್ಳಬೇಕು. ಒಮ್ಮೆ ಬಿ.ಎಂ.ಶ್ರೀಕಂಠಯ್ಯನವರು ವಿಜಯಪುರಕ್ಕೆ ಭೇಟಿ ನೀಡಿದಾಗ ಎಲ್ಲರೂ ಅವರನ್ನು ಪ್ರಸಿದ್ಧ ಗೋಳಗುಮ್ಮಟ ನೋಡಲು ಆಹ್ವಾನಿಸುತ್ತಾರೆ. ಆದರೆ ಬಿ.ಎಂ.ಶ್ರೀರವರು ತಾವು ವಚನ ಗುಮ್ಮಟವನ್ನು ಕಟ್ಟಿದ ಫ.ಗು.ಹಳಕಟ್ಟಿಯವರನ್ನು ಮೊದಲು ನೋಡುವುದಾಗಿ ಹೇಳಿದರು. ಯಾವ ಸಂಘ-ಸಂಸ್ಥೆ, ಮಠ ಮಾನ್ಯಗಳು, ಸಮಾಜಗಳು ಮಾಡದ ಮಹತ್ಕಾರ್ಯವನ್ನು ಫ.ಗು.ಹಳಕಟ್ಟಿಯವರು ಮಾಡಿದ್ದಾರೆ. ಬಸವ ಜಯಂತಿಗೆ ನೀಡುವಷ್ಟೇ ಪ್ರಾಶಸ್ತ್ಯ ್ಯ ಫ.ಗು.ಹಳಕಟ್ಟಿಯವರ ಜಯಂತಿಗೂ ನೀಡಿ ಇಡೀ ಕರ್ನಾಟಕ ಆಚರಣೆ ಮಾಡಬೇಕು ಎಂದರು.

ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಸರ್ಕಾರ ಘೋಷಿಸಿದೆ. ಬಸವಣ್ಣನವರನ್ನು ಭಾರತದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲು ಲಿಂಗಾಯಿತ ಮಠಾಧಿಪತಿಗಳ ಒಕ್ಕೂಟ ಜೂನ್ 30 ರಂದು ನಡೆಸಿದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಸಂಬಂಧ ಬಸವ ಸಂಸ್ಕೃತಿ ಅಭಿಯಾನ ಸೆ. 1ರಿಂ ಅ. 1ರವರೆಗೆ ರಾಜ್ಯದಾದ್ಯಂತ ಆಯೋಜಿಸಲಾಗಿದೆ ಎಂದರು.

ಲೇಖಕ ಗಣೇಶ ಅಮೀನಗಡ ಮಾತನಾಡಿ, 1956ರಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಹಾಗೂ ಫ.ಗು.ಹಳಕಟ್ಟಿಯವರಿಗೆ ಕರ್ನಾಟಕ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡುವಂತಹ ಸಂದರ್ಭದಲ್ಲಿ ಔತಣಕೂಟದಲ್ಲಿ ಅಂದಿನ ಗೃಹಮಂತ್ರಿ ಸದಾಶಿವ ಒಡೆಯರ್ ಫ.ಗು.ಹಳಕಟ್ಟಿಯವರಿಗೆ ಕೋಟ್ ತೆಗೆದು ಭೋಜನ ಮಾಡಲು ಸಲಹೆ ಮಾಡಿದಾಗ ನಿರಾಕರಿಸುತ್ತಾರೆ. ತಮ್ಮ ಅಂಗಿ ಹರಿದಿದೆ, ಆ ಕಾರಣ ತಾವು ಕೋಟ್ ತೆಗೆಯಲು ಮುಜುಗರವಾಗುತ್ತೆಂದು ಹೇಳುತ್ತಾರೆ. ಹೀಗೆ ಫ.ಗು.ಹಳಕಟ್ಟಿಯವರು ತಮ್ಮ ಸರ್ವಸ್ವವನ್ನು ವಚನಗಳ ಉಳಿವಿಗಾಗಿ ಮುಡುಪಾಗಿಟ್ಟಿದ್ದರು ಎಂದರು.

ಫ.ಗು.ಹಳಕಟ್ಟಿಯವರದು ಸರಳ ಜೀವನ. ಬಾಡಿಗೆ ಮನೆಯಲ್ಲಿ ತಮ್ಮ ಜೀವನ ಸವೆಸಿದರು. ವಚನ ಸಾಹಿತ್ಯ ಸಂರಕ್ಷಣೆಯ ಜೊತೆಗೆ ಹತ್ತಾರು ಸಮಾಜಮುಖಿ ಕಾರ್ಯಗಳನ್ನು ಮಾಡಿದರು.

ವಿಜಯಪುರದಲ್ಲ್ಲಿ ಬಿಎಲ್‌ಡಿಎ ಶಿಕ್ಷಣ ಸಂಸ್ಥೆ ಸ್ಥಾಪನೆ, ಜನತಾ ಶಿಕ್ಷಣ ಸಂಫ ಸ್ಥಾಪನೆ ಮಾಡಿ ಶಿಕ್ಷಣ ಕ್ಷೇತ್ರಕ್ಕೆ ಮಹತ್ತರ ಕೊಡುಗೆ ನೀಡಿದರು. ಸಿದ್ಧೇಶ್ವರ ಸಹಕಾರ ಸಂಘ ಸ್ಥಾಪಿಸಿ ಸಹಕಾರ ಕ್ಷೇತ್ರದ ಕಡೆಗೂ ತಮ್ಮ ಗಮನ ಹರಿಸಿದರು. ಶಿಕ್ಷಣ ವಂಚಿತ ಜಿಲ್ಲೆಯನ್ನು ಅಕ್ಷರವಂತರ ಜಿಲ್ಲೆಯನ್ನಾಗಿ ಮಾಡಿದರು. ತಾವು ನಗರ ಪಾಲಿಕೆಯಲ್ಲಿ ಶಿಕ್ಷಣ ಸಮಿತಿಯಲ್ಲಿದ್ದ ಕಾಲಾವಧಿಯಲ್ಲಿ ಹೆಚ್ಚು ಕನ್ನಡ ಶಾಲೆಗಳನ್ನು ತೆರೆದು ಕನ್ನಡದಲ್ಲಿ ಶಿಕ್ಷಣಕ್ಕೆ ಒತ್ತು ನೀಡಿದರು. ಆ ಮೂಲಕ ಕನ್ನಡದ ಮಕ್ಕಳು ವಚನಗಳನ್ನು ಓದಲಿ ಎಂಬುದು ಅವರ ಆಶಯವಾಗಿತ್ತು ಎಂದರು

 ನಿಪ್ಪಾಣಿಯ ಮಲ್ಲಿಕಾರ್ಜುನ ಸ್ವಾಮಿಗಳು, ಮುರುಘೇಂದ್ರ ಸ್ವಾಮಿಗಳು, ಬಾಪೂಜಿ ವಿದ್ಯಾಸಂಸ್ಥೆಯ ಕೆ.ಎಂ.ವೀರೇಶ್, ಅಖಿಲ ಭಾರತೀಯ ವೀರಶೈವ ಸಮಾಜದ ಜಿಲ್ಲಾಧ್ಯಕ್ಷ ಮಹಡಿ ಶಿವಮೂರ್ತಿ, ಲೇಖಕ ಆನಂದ್ ಕುಮಾರ್, ಶಿವಸಿಪಿ ಸಮಾಜದ ಜಯದೇವ ಮೂರ್ತಿ, ಹೇಮರೆಡ್ಡಿ ಸಮಾಜದ ನಾಗರಾಜ ಸಂಗಂ, ಜಂಗಮ ಸಮಾಜದ ಷಡಾಕ್ಷರಯ್ಯ, ಅ.ಭಾ.ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ಪಿ.ಎನ್.ಸಿದ್ದಪ್ಪ, ಬಂಜಾರ ಸಮಾಜದ ರಾಜಾನಾಯ್ಕ್, ಹೇಮರೆಡ್ಡಿ ಸಮಾಜದ ಶಿವಾನಂದಪ್ಪ, ಕದಳೀ ವೇದಿಕೆಯ ಜಯಲಕ್ಷ್ಮಿ, ಬಂಜಾರ ಸಮಾಜದ ಡಾ.ಕೆ ಮಂಜುನಾಥ್ ನಾಯ್ಕ್, ಜಾಗತಿಕ ಲಿಂಗಾಯಿತ ಮಹಾಸಭಾದ ಬಸವರಾಜ ಕಟ್ಟಿ, ಮುಸ್ಲಿಂ ಸಮಾಜದ ಸಾದಿಕ್, ಕಮ್ಮಾರ ಸಮಾಜದ ಹನುಮಂತಪ್ಪ, ಪಂಚಮಸಾಲಿ ಸಮಾಜದ ಮಂಜಣ್ಣ, ಕುಂಚಿಟಿಗ ಸಮಾಜದ ಕುಬೇರಪ್ಪ, ನಾಯಕ ಸಮಾಜದ ಸುರೇಶ್ ನಾಯಕ, ರಕ್ಷಣಾ ವೇದಿಕೆಯ ಕೋದಂಡರಾಮ, ಸವಿತಾ ಸಮಾಜದ ಶ್ರೀನಿವಾಸ್, ಮಾದಾರ ಸಮಾಜದ ತಿಪ್ಪೇಸ್ವಾಮಿ, ಉಪ್ಪಾರ ಸಮಾಜದ ಮೂರ್ತಿ, ಪುಟ್ಟಸ್ವಾಮಿ, ಸಿದ್ದೇಶ್, ಗೌಳಿ ಸಮಾಜದ ರುದ್ರಪ್ಪ ಇದ್ದರು. ಜಮುರಾ ಕಲಾವಿದ ಉಮೇಶ್ ಪತ್ತಾರ್ ಪ್ರಾರ್ಥಿಸಿದರು.

Read more Articles on