ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಇಲ್ಲಿನ ಡಾ.ವಿಜಯ ಹಂಚಿನಾಳರ ಅನೂಪ ಆಸ್ಪತ್ರೆಗೆ ಬುಧವಾರ ಕಾಂಗ್ರೆಸ್ ಮುಖಂಡರೊಡನೆ ತೆರಳಿ ಡಾ.ವಿಜಯ ಹಂಚಿನಾಳರನ್ನು ಸನ್ಮಾನಿಸಿ ಮಾತನಾಡಿದ ಅವರು, ಯಾವುದೇ ಫಲಾಪೇಕ್ಷೆ ಇಲ್ಲದೇ ಅಸಂಖ್ಯ ಹೃದ್ರೋಗಿಗಳ, ಮಧುಮೇಹಿಗಳ ಸೇವೆ ನೀಡುವ ಮೂಲಕ ವೃತ್ತಿ ಬದುಕಲ್ಲಿ ಯಾವುದೇ ಕಪ್ಪು ಚುಕ್ಕೆಯಿಲ್ಲದೇ ಸಂತೃಪ್ತ ಸೇವೆ ಸಲ್ಲಿಸುವ ಮೂಲಕ ಡಾ.ವಿಜಯ ಹಂಚಿನಾಳ ಸುತ್ತಲಿನ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ವೈದ್ಯಕೀಯ ಲೋಕದ ದಿಗ್ಗಜರಾದರೂ ಸಂಯಮತೆ, ದಕ್ಷತೆ ಮತ್ತು ವಿನಯವಂತಿಕೆ ಪ್ರತೀಕವೇ ಡಾ.ಹಂಚಿನಾಳ ಎಂಬಂತೆ ರೋಗಿಗಳ ಸೇವೆಯಲ್ಲಿದ್ದಾರೆಂದರು.
ಬನಹಟ್ಟಿಯ ಧುರೀಣ ಭೀಮಶಿ ಮಗದುಮ ಮಾತನಾಡಿ, ಹೃದ್ರೋಗಿಗಳಿಗೆ ತಕ್ಷಣದಲ್ಲಿ ಜೀವರಕ್ಷಕ ಅತ್ಯಾಧುನಿಕ ಸೌಲಭ್ಯಗಳುಳ್ಳ ಯಂತ್ರಗಳನ್ನು ಬಳಸಿ ವಿಶ್ವದರ್ಜೆಯ ಚಿಕಿತ್ಸೆ ದೊರೆತಲ್ಲಿ ನಮ್ಮ ಭಾಗದ ರೋಗಿಗಳು ದೂರದ ಮೀರಜ್, ಬೆಳಗಾವಿಗೆ ತೆರಳುವ ಸಂದರ್ಭದಲ್ಲಿ ಆಗುತ್ತಿದ್ದ ಸಾವುಗಳನ್ನು ತಡೆಗಟ್ಟಲು ತಮ್ಮ ಪುತ್ರ ಡಾ.ಅನೂಪರನ್ನು ಹೃದ್ರೋಗ ತಜ್ಞರನ್ನಾಗಿಸಿ, ಹಣ ಗಳಿಕೆಯೇ ಪ್ರಧಾನವಾಗದೇ ನಮ್ಮ ಪ್ರದೇಶದಲ್ಲೇ ಉನ್ನತ ವೈದ್ಯಕೀಯ ಸೇವೆ ನೀಡುವ ತುಡಿತದಿಂದ ಹೃದ್ರೋಗ ಶಸ್ತ್ರಕ್ರಿಯೆ ಸೇರಿದಂತೆ ಎಲ್ಲ ಸ್ತರದ ಸೌಲಭ್ಯ ನೀಡುವ ಮೂಲಕ ವೈದ್ಯಕೀಯ ಲೋಕದ ಧನ್ವಂತರಿಯಾಗಿದ್ದಾರೆಂದರು.ಹಿರಿಯ ನ್ಯಾಯವಾದಿ ಹರ್ಷವರ್ಧನ ಪಟವರ್ಧನ ಮಾತನಾಡಿ, ಡಾ.ಅನೂಪ ಮಹಾನಗರಗಳಲ್ಲಿದ್ದರೆ ಕೋಟ್ಯಂತರ ಹಣ ಗಳಿಕೆ ಅವಕಾಶವಿದ್ದರೂ ತಮ್ಮ ತಂದೆಯವರ ಆಶಯದಂತೆ ಹೃದ್ರೋಗಿಗಳ ಸೇವೆಗೆ ಕಂಕಣಬದ್ಧರಾಗಿ ನಿಂತಿರುವುದು ನಮ್ಮ ಭಾಗದ ಜನತೆಯ ಪುಣ್ಯವೇ ಸರಿ ಎಂದರು. ಈ ಸಂದರ್ಭದಲ್ಲಿ ರವೀಂದ್ರ ಬಾಡಗಿ ಸೇರಿದಂತೆ ರಬಕವಿ, ಬನಹಟ್ಟಿ, ಮಹಾಲಿಂಗಪುರ ಸುತ್ತಲಿನ ಧುರೀಣರು ಉಪಸ್ಥಿತರಿದ್ದರು.