ಹಾಸ್ಯದ ಜತೆಗೆ ಸಂದೇಶ ಪ್ರಧಾನ ಕನ್ನಡ ಸಿನಿಮಾ ನಿರ್ಮಾಣಕನ್ನಡಪ್ರಭ ವಾರ್ತೆ ಮಂಗಳೂರುಎಂ.ಎನ್.ಆರ್. ಪ್ರೊಡಕ್ಷನ್ ಸಂಸ್ಥೆಯಡಿ ನಿರ್ಮಾಣಗೊಳ್ಳಲಿರುವ ‘ವಾದಿರಾಜ ವಾಲಗ ಮಂಡಳಿ’ ಕನ್ನಡ ಚಿತ್ರಕ್ಕೆ ಶುಕ್ರವಾರ ಉರ್ವ ಮಾರಿಯಮ್ಮನ ಸಾನಿಧ್ಯದಲ್ಲಿ ಚಿತ್ರದ ನಿರ್ಮಾಪಕ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಮುಹೂರ್ತ ನಡೆಸಿಕೊಟ್ಟರು.ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ.ಎಂ.ಎನ್. ರಾಜೇಂದ್ರ ಕುಮಾರ್, ಕನ್ನಡ ಕಲಾವಿದರಿಗೆ ವಿಶೇಷ ಗೌರವ, ಅವಕಾಶವನ್ನು ನೀಡುವ ಉದ್ದೇಶದಿಂದ ಈ ಸಿನಿಮಾ ಮಾಡುತ್ತಿದ್ದೇವೆ. ಇದು ಸಂಪೂರ್ಣವಾಗಿ ಹಾಸ್ಯಪ್ರಧಾನದ ಜತೆಗೆ ಕುಟುಂಬ ಸಮೇತರು ಬಂದು ನೋಡುವ ಸಿನಿಮಾವಾಗಿದೆ. ಮನುಷ್ಯನ ದೈನಂದಿನ ಜೀವನದಲ್ಲಿ ಚಿಂತೆ, ಸಮಸ್ಯೆಗಳು ಇರುವಾಗ ಈ ಚಿತ್ರದಲ್ಲಿರುವ ಹಾಸ್ಯದ ಮೂಲಕ ಮನಸ್ಸಿಗೆ ನೆಮ್ಮದಿ ನೀಡುವ ಜತೆಗೆ ಅವನ ಜೀವನಕ್ಕೆ ಒಳ್ಳೆಯ ಹಾದಿ ಸೃಷ್ಟಿಯ ಅವಕಾಶ ಸಿಗುತ್ತದೆ ಎನ್ನುವ ಭರವಸೆಯಿದೆ ಎಂದರು.ಸಿನಿಮಾದ ನಿರ್ದೇಶಕ ಶಶಿರಾಜ್ ಕಾವೂರು ಮಾತನಾಡಿ, ಕನ್ನಡ ಸಿನಿಮಾಕ್ಕೆ ಒಳ್ಳೆಯ ಕೊಡುಗೆ ಕೊಡಬೇಕು ಎನ್ನುವ ಉದ್ದೇಶದಿಂದ ಹಲವು ಸಿನಿಮಾಗಳಲ್ಲಿ ಹಾಡುಗಳು ಬರೆದ ಅನುಭವವಿತ್ತು. ಅದರ ಜತೆಗೆ ಹಲವು ತುಳು ಸಿನಿಮಾಗಳಿಗೆ ಚಿತ್ರಕತೆ, ಸಂಭಾಷಣೆ, ಸಹ ನಿರ್ದೇಶನದ ಅನುಭವದ ಹಿನ್ನೆಲೆಯಲ್ಲಿ ಕನ್ನಡದಲ್ಲಿ ನನ್ನ ಮೊದಲ ಸಿನಿಮಾ ನಿರ್ದೇಶನಕ್ಕೆ ಇಳಿಯುತ್ತಿದ್ದೇನೆ. ಕನ್ನಡ ಚಿತ್ರರಂಗದ ಎಲ್ಲ ಪ್ರೇಕ್ಷಕರು ಈ ಚಿತ್ರವನ್ನು ಇಷ್ಟಪಡುತ್ತಾರೆ ಎನ್ನುವ ನಂಬಿಕೆಯಿದೆ. ವಾದಿರಾಜ ವಾಲಗ ಮಂಡಳಿ ಸಿನಿಮಾದ ಕತೆಯನ್ನು 8 ವರ್ಷಗಳ ಹಿಂದೆಯೇ ಮಾಡಿದ್ದು, ಈಗ ಇದು ತೆರೆಗೆ ಬರುವ ಯೋಗ ಬಂದಿದೆ. ಎಂಎನ್ಆರ್ ಪ್ರಾಡಕ್ಷನ್ನಲ್ಲಿ ಈ ಸಿನಿಮಾ ಬರುತ್ತಿದೆ ಎಂದರು.ಹಾಸ್ಯದ ಜತೆಗೆ ಸಂದೇಶ ಪ್ರಧಾನ ಸಿನಿಮಾ:
ಈ ಸಿನಿಮಾ ಉತ್ತಮ ಕಥಾ ಹಂದರದಿಂದ ಸಂಪೂರ್ಣ ಹಾಸ್ಯ ಪ್ರಧಾನವಾಗಿದ್ದು, ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ಕೂಡಾ ನೀಡುತ್ತದೆ. ಸಿನಿಮಾದಲ್ಲಿ ನವೀನ್ ಡಿ ಪಡೀಲ್, ಲಕ್ಷ್ಮಣ ಕುಮಾರ್ ಮಲ್ಲೂರು, ಪ್ರಕಾಶ ತೂಮಿನಾಡು. ದೀಪಕ್ ರೈ ಪಾಣಾಜೆ, ಪುಷ್ಪರಾಜ್ ಬೊಳ್ಳೂರ್, ಮೈಮ್ ರಾಮದಾಸ್, ಶೋಭರಾಜ್ ಪಾವೂರು, ತನ್ವಿ ರಾವ್, ವೇನ್ಯ ರೈ, ಚೈತ್ರಾ ಶೆಟ್ಟಿ, ಕೀರ್ತನಾ ಮುಂತಾದವರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ.ಹಲವು ಕನ್ನಡ, ತಮಿಳು ಹಿಟ್ ಸಿನಿಮಾಗಳ ಛಾಯಾಚಿತ್ರಗಾರ ಎಸ್. ಚಂದ್ರಶೇಖರನ್, ಕ್ಯಾಮೆರಾದ ಹಿಂದೆ ತಮ್ಮ ಕೈಚಳಕ ತೋರಿಸಲಿದ್ದಾರೆ. ಚಿತ್ರಕ್ಕೆ ಸಂಗೀತ ಮಣಿಕಾಂತ ಕದ್ರಿಯವರದ್ದಾಗಿದೆ. ಸಹ ನಿರ್ಮಾಪಕರಾಗಿ ಜಯಪ್ರಕಾಶ ತುಂಬೆ ಹಾಗೂ ಕಾರ್ಯಕಾರಿ ನಿರ್ಮಾಪಕರಾಗಿ ನಟ ಸಂತೋಷ್ ಶೆಟ್ಟಿಸಹಕರಿಸಲಿದ್ದಾರೆ. ಚಿತ್ರದಲ್ಲಿ ಬರುವ ‘ಮೆಹಂದಿ’ ದೃಶ್ಯದಲ್ಲಿ ನವೋದಯ ಸ್ವಸಹಾಯ ಸಂಘದ ಸದಸ್ಯರು ನಟನೆ ಮಾಡಲಿದ್ದಾರೆ.ಸಿನಿಮಾಕ್ಕೆ ಒಂದೇ ಹಂತದಲ್ಲಿ 40 ದಿನಗಳ ಕಾಲ ಕಾಸರಗೋಡು, ಮಂಗಳೂರು, ಉಡುಪಿ, ಕುಂದಾಪುರ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಮುಹೂರ್ತ ಸಂದರ್ಭ ಡಾ.ಎಂ.ಎನ್.ಆರ್ ಅವರ ಧರ್ಮಪತ್ನಿ ಅರುಣಾ ರಾಜೇಂದ್ರಕುಮಾರ್, ಎಸ್ಸಿಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ನಿರ್ದೇಶಕರಾದ ಟಿ.ಜಿ.ರಾಜರಾಮ ಭಟ್ , ದೇವಿಪ್ರಸಾದ್ ಶೆಟ್ಟಿ ಬೆಳಪು , ಶಶಿಕುಮಾರ್ ರೈ ಬಾಲ್ಯೋಟ್ಟು , ಎಸ್.ಬಿ.ಜಯರಾಮ ರೈ , ಜೈರಾಜ್ ಬಿ. ರೈ , ಅಶೋಕ್ ಕುಮಾರ್ ಶೆಟ್ಟಿ, ಸದಾಶಿವ ಉಳ್ಳಾಲ, ರಾಜೇಶ್ ರಾವ್ , ಮುಖ್ಯಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್ , ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟಿ ಸುನಿಲ್ ಕುಮಾರ್ ಬಜಗೋಳಿ, ಉದ್ಯಮಿ ಪುಷ್ಪರಾಜ್ ಜೈನ್ , ಸಿರಾಜ್ ಅಹಮ್ಮದ್ , ಜಯಪ್ರಕಾಶ್ ತುಂಬೆ, ಪ್ರಕಾಶ್ ಪಾಂಡೇಶ್ವರ್, ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ , ನಟ ನವೀನ್ ಡಿ. ಪಡೀಲ್, ಛಾಯಾಚಿತ್ರಗಾರ ಎಸ್. ಚಂದ್ರಶೇಖರನ್, ಸಂತೋಷ್ ಶೆಟ್ಟಿ, ಲಕ್ಷ್ಮಣಕುಮಾರ್ ಮಲ್ಲೂರು, ಅಥರ್ವ ಪ್ರಕಾಶ್, ಚೇತನ್ ರೈ ಮಾಣಿ, ರಂಜನ್ ಬೋಳೂರು, ಪುಷ್ಪರಾಜ್ ಬೊಳ್ಳಾರ್, ಪ್ರಕಾಶ ತೂಮಿನಾಡ್ ಮತ್ತಿತರರು ಇದ್ದರು.