ಡಿ.ಎಸ್.ಸುರೇಶ್ ಅಭಿಮತ । ಸಾಮಾಜಿಕ ಹೋರಾಟಗಾರ ಡಾ.ಆರ್.ದೇವಾನಂದ್ ಅವರಿಗೆ ನುಡಿನಮನ ಕಾರ್ಯಕ್ರಮ
ಸಾಮಾಜಿಕ ಹೋರಾಟಗಾರ ಡಾ. ಆರ್.ದೇವಾನಂದ್ ಅವರು ಮೌಲ್ಯಾಧಾರಿತ ಜೀವನ ನಡೆಸಿದವರು ಎಂದು ಚಿಕ್ಕಮಗಳೂರು ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ, ಮಾಜಿ ಶಾಸಕ ಡಿ.ಎಸ್.ಸುರೇಶ್ ಹೇಳಿದ್ದಾರೆ.
ಶನಿವಾರ ತಾಲೂಕು ಬಿಜೆಪಿಯಿಂದ ಪಕ್ಷದ ಕಾರ್ಯಾಲಯದಲ್ಲಿ ನಡೆದ ಸಾಮಾಜಿಕ ಹೋರಾಟಗಾರ, ಪ್ರಗತಿಪರ ಕೃಷಿಕ, ಪಕ್ಷದ ಮುಖಂಡ ಡಾ.ಆರ್.ದೇವಾನಂದ್ ಅವರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.ಡಾ.ಆರ್.ದೇವಾನಂದ್ ವ್ಯಕ್ತಿಯಲ್ಲ ಒಂದು ಶಕ್ತಿಯಾಗಿದ್ದರು. ಎಲ್ಲರನ್ನೂ ಅವರು ಅಣ್ಣ ಎಂದೇ ಕರೆಯುತ್ತಿದ್ದರು. ಅಡಕೆ ಬೆಳೆಗಾರರ ಪರವಾಗಿ ಹೋರಾಟ ಮಾಡಿದ ಡಾ.ಆರ್.ದೇವಾನಂದ್ ಮೂರು ಬಾರಿ ಮ್ಯಾಮ್ ಕೋಸ್ ಗೆ ನಿರ್ದೇಶಕರಾಗಿ ಆಯ್ಕೆಯಾಗಿ ಸೇವೆ ಸಲ್ಲಿಸಿದ್ದರು. ತಾವು 2 ಬಾರಿ ಶಾಸಕರಾಗಿ ಆಯ್ಕೆಯಾಗಲು ಡಾ.ದೇವಾನಂದ್ ಕೊಡುಗೆ ಅಪಾರ. ಭದ್ರಾ ಮೇಲ್ದಂಡೆ ಯೋಜನೆ ಹೋರಾಟ, ಪೆಟ್ರೋಲಿಯಂ ಕ್ಷೇತ್ರ ಹೀಗೆ ಹಲವಾರು ಹೋರಾಟದಲ್ಲಿ ಡಾ.ಆರ್.ದೇವಾನಂದ್ ಗಣನೀಯ ಸೇವೆ ಸಲ್ಲಿಸಿದ್ದಾರೆ. ಅವರ ಕುಟುಂಬಕ್ಕೆ ಅವರ ಅಗಲುವಿಕೆಯ ನೋವು ಭರಿಸುವ ಶಕ್ತಿ ಭಗವಂತ ಕರುಣಿಸಲಿ ಎಂದು ಹೇಳಿದರು.
ಪುರಸಭೆ ಸದಸ್ಯ ಟಿ.ಎಂ.ಬೋಜರಾಜ್ ಮಾತನಾಡಿ 3-4 ದಶಕಗಳ ಕಾಲ ದೇವಾನಂದ್ ಸಾರ್ವಜನಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳ ಚಟುವಟಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದವರು. ಪಕ್ಷ ಸಂಘಟನೆಯಲ್ಲೂ ಪ್ರಮುಖ ಪಾತ್ರ ವಹಿಸಿದ್ದರು ಎಂದು ತಿಳಿಸಿದರು.
ಸಂತೋಷ್, ವಸಂತಕುಮಾರ್, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜೇಶ್ವರಿ ರಾಜಶೇಖರ್, ಪಕ್ಷದ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
27ಕೆಟಿಆರ್.ಕೆ.1ಃ ತರೀಕೆರೆಯಲ್ಲಿ ತಾಲೂಕು ಬಿಜೆಪಿಯಿಂದ ನಡೆದ ಸಾಮಾಜಿಕ ಹೋರಾಟಗಾರ ಡಾ.ಆರ್.ದೇವಾನಂದ್ ಅವರ ನುಡಿನಮನ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಡಿ.ಎಸ್.ಸುರೇಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಟಿ.ಎಲ್.ರಮೇಶ್, ಪುರಸಭೆ ಸದಸ್ಯ ಟಿ.ಎಂ.ಬೋಜರಾಜ್, ತಾ.ಬಿಜೆಪಿ ಅಧ್ಯಕ್ಷ ಪ್ರತಾಪ್ ಗರಗದಹಳ್ಳಿ ಮತ್ತಿತರರು ಭಾಗವಹಿಸಿದ್ದರು.