ಚಳವಳಿಗಳಿಗೆ ಪ್ರೇರಣೆ ಆಗಿದ್ದ ಡಾ.ರಾಜ್‌ ಸಿನಿಮಾಗಳು

KannadaprabhaNewsNetwork | Published : Dec 12, 2023 12:45 AM

ಸಾರಾಂಶ

ಕಾರ್ಯಕ್ರಮ ಉದ್ಘಾಟಿಸಿದ ಪ್ರಾಂಶುಪಾಲ ಡಾ. ಜಿ.ಆರ್. ಹೆಗಡೆ ಮಾತನಾಡಿ, 1915ರಿಂದ ಆರಂಭವಾದ ಕನ್ನಡ ಸಾಹಿತ್ಯ ಪರಿಷತ್ತು ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದೆ. ರಾಜ್ಯ, ಜಿಲ್ಲೆ, ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಸಾಹಿತ್ಯ ಪರ ಕಾರ್ಯಕ್ರಮ ಆಯೋಜಿಸಿತ್ತಿದೆ. ದತ್ತಿ ಉಪನ್ಯಾಸ ಕಾರ್ಯಕ್ರಮಗಳ ಮೂಲಕ ಸಾಹಿತ್ಯದ ಅಭಿರುಚಿಯನ್ನು ಜನರಲ್ಲಿ ಬೆಳೆಸುತ್ತಿದೆ ಎಂದು ಶ್ಲಾಘಿಸಿದರು.

ಕನ್ನಡಪ್ರಭ ವಾರ್ತೆ, ಶಿಕಾರಿಪುರ

ಸಮಾಜದ ಜನರನ್ನು ದಾರಿ ತಪ್ಪಿಸುವಂತಹ ಪಾತ್ರದಲ್ಲಿ ಡಾ.ರಾಜಕುಮಾರ್ ಎಂದಿಗೂ ನಟಿಸಲಿಲ್ಲ. ಮೌಲ್ಯಯುತವಾದ ಅವರ ನಟನೆ ಪ್ರತಿಯೊಬ್ಬರಲ್ಲಿ ಗಾಢ ಪ್ರಭಾವ ಬೀರಿದೆ ಎಂದು ಸಾಗರ ಲೇಖಕ ಸರ್ಫ್ರಾಜ್ ಚಂದ್ರಗುತ್ತಿ ಅಭಿಪ್ರಾಯಪಟ್ಟರು.

ಸೋಮವಾರ ಪಟ್ಟಣದ ಕುಮದ್ವತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ಹಾಗೂ ಕುಮದ್ವತಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಭಾಷಾ ವಿಭಾಗ ಆಯೋಜಿಸಿದ್ದ ಡಾ.ರಾಜ್ ಕುಮಾರ್ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ.ರಾಜ್ ಕುಮಾರ್ ಹಾಗೂ ಕನ್ನಡ ಸಂಸ್ಕೃತಿ ವಿಷಯ ಕುರಿತು ಅವರು ಮಾತನಾಡಿದರು.

ರಾಜ್ಯದಲ್ಲಿ ನಡೆದ ಚಳವಳಿಗಳ ಹಿಂದೆ ಡಾ.ರಾಜ್ ಕುಮಾರ್ ನಟಿಸಿದ ಸಿನಿಮಾಗಳು ಪ್ರೇರಣೆ ಆಗಿದ್ದವು. ಗೋಕಾಕ್ ಚಳವಳಿ ನೇತೃತ್ವವನ್ನು ಡಾ.ರಾಜ್ ಕುಮಾರ್ ವಹಿಸಿ, ನಾಡಿಗಾಗಿ ಹೋರಾಟ ನಡೆಸಿದ್ದರು. ಅವರ ಜೀವನದಲ್ಲಿ ಕಪ್ಪುಚುಕ್ಕೆ ಇಲ್ಲ, ತಮ್ಮ ಬದುಕನ್ನು ಕನ್ನಡತನ ಹಾಗೂ ಕನ್ನಡ ಸಂಸ್ಕೃತಿಗಾಗಿ ಅರ್ಪಿಸಿದ್ದರು. ರಾಜ್ ಕುಮಾರ್ ಸಮಾಜದ ಜನರಿಗೆ ಮಾದರಿಯಾಗಿ ಕಾಣುತ್ತಾರೆ. ರಾಜ್ ಕುಮಾರ್ ಜಾಹೀರಾತು ಸಂಸ್ಕೃತಿಯಿಂದ ದೂರವಿದ್ದಿದ್ದು ಗಮನೀಯ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಪ್ರಾಂಶುಪಾಲ ಡಾ. ಜಿ.ಆರ್. ಹೆಗಡೆ ಮಾತನಾಡಿ, 1915ರಿಂದ ಆರಂಭವಾದ ಕನ್ನಡ ಸಾಹಿತ್ಯ ಪರಿಷತ್ತು ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದೆ. ರಾಜ್ಯ, ಜಿಲ್ಲೆ, ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಸಾಹಿತ್ಯ ಪರ ಕಾರ್ಯಕ್ರಮ ಆಯೋಜಿಸಿತ್ತಿದೆ. ದತ್ತಿ ಉಪನ್ಯಾಸ ಕಾರ್ಯಕ್ರಮಗಳ ಮೂಲಕ ಸಾಹಿತ್ಯದ ಅಭಿರುಚಿಯನ್ನು ಜನರಲ್ಲಿ ಬೆಳೆಸುತ್ತಿದೆ ಎಂದು ಶ್ಲಾಘಿಸಿದರು.

ಇದೇ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಶಿವರಂಜನಿ ಸುದರ್ಶನ್ ಹಾಗೂ ಹಿರಿಯ ಸದಸ್ಯ ಚೋರಡಿ ಗಿಡ್ಡಪ್ಪ ರಾಜ್ ಕುಮಾರ್ ಕುರಿತು ಸ್ವರಚಿತ ಕವನ ವಾಚಿಸಿದರು.

ಕುಮದ್ವತಿ ಪ್ರಥಮ ದರ್ಜೆ ಕಾಲೇಜು ಕನ್ನಡ ವಿಭಾಗ ಮುಖ್ಯಸ್ಥ ಕೋಟೋಜಿರಾವ್, ವಾಣಿಜ್ಯ ವಿಭಾಗ ಮುಖ್ಯಸ್ಥ ಕೆ.ಸಿ. ರವೀಂದ್ರ, ವಿಜ್ಞಾನ ವಿಭಾಗ ಮುಖ್ಯಸ್ಥ ಟಿ.ಆರ್. ಪರಶುರಾಮ್, ಉಪನ್ಯಾಸಕರಾದ ಕಾರ್ತಿಕ್, ಬಾಲಾಜಿ, ಅಕ್ಷತಾ, ಮನೋಜ್, ಅಕ್ಷಯ ರಾವ್, ಕಸಾಪ ಸದಸ್ಯ ಎಸ್.ಎನ್. ನರಸಿಂಹಸ್ವಾಮಿ ಉಪಸ್ಥಿತರಿದ್ದರು.

- - -

ಬಾಕ್ಸ್‌ ರಾಜ್‌ ಸಿನಿಮಾಗಳಲ್ಲಿ ಉತ್ತಮ ಸಂದೇಶಅಧ್ಯಕ್ಷತೆ ವಹಿಸಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಚ್.ಎಸ್. ರಘು ಮಾತನಾಡಿ, ಯುವಪೀಳಿಗೆ ರಾಜ್‌ಕುಮಾರ್ ಸಿನಿಮಾದಲ್ಲಿದ್ದ ಸಾಮಾಜಿಕ ಕಳಕಳಿ ಬಗ್ಗೆ ತಿಳಿದುಕೊಳ್ಳಬೇಕು. 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ರಾಜ್‌ಕುಮಾರ್ ನಟಿಸುವ ಮೂಲಕ ಸಮಾಜಕ್ಕೆ ಉತ್ತಮ ಮೌಲ್ಯ ಹಾಗೂ ಸಂದೇಶ ಸಾರುವ ಕಾರ್ಯ ಮಾಡಿದ್ದರು ಎಂದ ಅವರು, ವಿದ್ಯಾರ್ಥಿಗಳ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರದ ಬಗ್ಗೆ ಅಭಿರುಚಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

- - - -11ಕೆಎಸ್‌.ಕೆಪಿ2:

ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಲೇಖಕ ಸರ್ಫ್ರಾಜ್ ಚಂದ್ರಗುತ್ತಿ ಉದ್ಘಾಟಿಸಿದರು.

Share this article