ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಕಲಾವಿದರ ಕುಟುಂಬದಲ್ಲಿ ಜನಿಸಿ ರಂಗಭೂಮಿಯಲ್ಲಿ ತನ್ನ ಪ್ರತಿಭೆ ತೋರಿಸಿ ಚಲನಚಿತ್ರದಲ್ಲಿ ಮಿಂಚಿ ದೇಶದ ಪ್ರತಿಷ್ಠಿತ ದಾದಾಸಾಹೇಬ ಫಾಲಕೆ ಪ್ರಶಸ್ತಿ ಪುರಷ್ಕೃತರಾದ ಡಾ.ರಾಜಕುಮಾರ್ ಕಲಾದೇವಿ ಆರಾಧಕರಾಗಿದ್ದಾರೆಂದು ವಿಧಾನ ಪರಿಷತ್ ಶಾಸಕ ಪಿ.ಎಚ್. ಪೂಜಾರ ಹೇಳಿದರು.ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡ ಡಾ.ರಾಜಕುಮಾರ್ ಅವರ 97ನೇ ಜನ್ಮದಿನಾಚರಣೆ ಹಾಗೂ ಡಾ.ರಾಜ್ ಗೀತೆಗಳ ಗಾಯನ ಸ್ಪರ್ಧೆಗೆ ಚಾಲನೆ ಮಾತನಾಡಿದ ಅವರು ಸಿರಿವಂತ, ಬಡವ, ಬಲ್ಲಿದ, ರಾಜ-ಮಹಾರಾಜರ ಅಭಿನಯಗಳಲ್ಲಿ ಜೀವ ತುಂಬುವ ಕಾರ್ಯ ಮಾಡಿದ ರಾಜ್ ಕೇವಲ ಕಲಾವಿದನಾಗಿರಲಿಲ್ಲ. ಮಾನವೀಯತೆಯ ಮೌಲ್ಯಗಳುಳ್ಳ ವ್ಯಕ್ತಿಯಾಗಿದ್ದು, ತನ್ನ ಜೀವತಾವಧಿವರೆಗೂ ಕನ್ನಡ ಭಾಷೆ ಹೊರತು ಪಡಿಸಿ ಬೇರೆ ಯಾವ ಭಾಷೆಯಲ್ಲಿ ನಟಿಸಿರಲಿಲ್ಲ ಎಂದು ಹೇಳಿದರು.
ಕನ್ನಡ ಭಾಷೆಗೆ ಪ್ರಾತಿನಿತ್ಯ ಕೊಡುವ ನಿಟ್ಟಿನಲ್ಲಿ ಗೋಕಾಕ್ ಚಳುವಳಿ ನಡೆಸುವಲ್ಲಿ ಪ್ರಮುಖರಾಗಿದ್ದರು. ತಮ್ಮ ಈಡೀ ಕಲಾ ಜೀವನದಲ್ಲಿ ಸರಳ ಹಾಗೂ ಆದರ್ಶ ವಿಷಯಗಳನ್ನೊಳಗೊಂಡ ಹಾಗೂ ಪ್ರೇಕ್ಷಕರಿಗೆ ಮತ್ತು ಜನರಿಗೆ ಮಾದರಿಯಾಗುವಂತಹ ಪಾತ್ರ ನಿರ್ವಹಿಸಿ ಎಲ್ಲ ಕಲಾವಿದರ ಮನದ ಆರಾದ್ಯ ದೈವರಾಗಿದ್ದರು. ಕೇವಲ 3ನೇ ತರಗತಿ ಕಲಿತ ರಾಜ್ಕುಮಾರ ಅವರ ಕಲೆಗೆ ಗೌರವ ಡಾಕ್ಟರೇಟ್ ಅರಿಸಿ ಬರುವದಲ್ಲದೇ ರಣದೀರ ಕಂಠಿರವ, ಪದ್ಮವಿಭೂಷಣ, ಪದ್ಮಭೂಷಣ, ಪದ್ಮಶ್ರೀ ಸೇರಿದಂತೆ ಅನೇಕ ಬಿರುದುಗಳನ್ನು ಪಡೆದುಕೊಂಡಿದ್ದಾರೆ ಎಂದರು.ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ ಮಾತನಾಡಿ, ರಾಜಕುಮಾರ್ ಕಲೆಯ ಜೊತೆಗೆ ಉತ್ತಮ ಹಾಡುಗಾರರಾಗಿದ್ದರು. ಅದ್ಬುತವಾದ ಕಂಠಸಿರಿಯಿಂದ ಹಾಗೂ ಸ್ಪಷ್ಟ ಕನ್ನಡ ಶಬ್ದ ಪ್ರಯೋಗದಲ್ಲಿ ಪರಿಣಿತರಾಗಿದ್ದರು. ಇವರು ನಟಿಸಿದ ಪ್ರತಿಯೊಂದ ಚಿತ್ರಗಳು ಸಮಾಜಕ್ಕೊಂದು ಸಂದೇಶ ನೀಡುತ್ತಿದ್ದವು. ಆದ್ದರಿಂದ ರಾಜ್ಕುಮಾರ ಒಬ್ಬ ಮಾದರಿ ವ್ಯಕ್ತಿಯಾಗಿ ಎಲ್ಲರ ಮನದಲ್ಲಿ ನೆಲೆಯೂರಿದ್ದರು.
ಡಿಎಸ್ಪಿ ಮಂಜುನಾಥ ಗಂಗಲ್ ಮಾತನಾಡಿ, ಎಸ್.ಎಂ.ಕೃಷ್ಣ ಮುಖ್ಯಮಂತ್ರಿ ಇದ್ದ ಸಂದರ್ಭದಲ್ಲಿ ರಾಜ್ಕುಮಾರ್ ಅವರನ್ನು ವೀರಪ್ಪನ್ ಅಪಹರಿಸಿದ ಅಂದು ಟಿವಿ ಮಾಧ್ಯಮಗಳು ಅಷ್ಟೊಂದು ಪ್ರಚಲಿತದಲ್ಲಿರಲಿಲ್ಲ. ಅಷ್ಟಾದರೂ ಅಣ್ಣಾರವರ ಅಪಹರಣ ನಾಡಿನಾದ್ಯಂತ ಕಾಡ್ಗಿಚ್ಚಿನಂತೆ ಹರಡಿತ್ತು. ಆ ಸಂದರ್ಭದಲ್ಲಿ ನಾನು ಕರ್ತವ್ಯ ನಿರ್ವಹಿಸುತ್ತಿರುವಾಗ ಅಭಿಮಾನಿಗಳ ಆಕ್ರೋಶ, ಪ್ರತಿಭಟನೆಗಳು ವ್ಯಕ್ತವಾಗಿದ್ದವು. ಆ ಸಂದರ್ಭದಲ್ಲಿ ಡಾ.ರಾಜ್ ಅವರ ಸರಳ ಸಜ್ಜನಿಕೆ, ಸ್ವಭಾವದ ಬಗ್ಗೆ ಜನರಿಗೆ ತಿಳಿಸಿ ಹೇಳಿದಾಗ ಅಭಿಮಾನಿಗಳು ಶಾಂತರಾಗಿದ್ದರು ಎಂದರು.ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಭಾರಿ ಸಹಾಯಕ ನಿರ್ದೇಶಕಿ ಕಸ್ತೂರಿ ಪಾಟೀಲ, ರಾಜೇಶ್ವರಿ ದೇಶಪಾಂಡೆ, ವಿನಾಯಕ ದಂಡಗಿ, ರಾಮಚಂದ್ರ ಪೂಜಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಡಾ.ರಾಜ್ಕುಮಾರ ಗೀತೆಗಳ ಗಾಯನ ಸ್ಪರ್ಧಾ ವಿಜೇತರು:ಜಿಲ್ಲಾಡಳಿತ, ಜಿಪಂ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಡಾ.ರಾಜಕುಮಾರ ಜನ್ಮ ದಿನಾಚರಣೆ ಅಂಗವಾಗಿ ಏ.24 ರಂದು ಡಾ.ರಾಜ್ ಗೀತೆಗಳ ಗಾಯನ ಸ್ಪರ್ಧೆ ನಡೆಸಲಾಯಿತು.
ಸ್ಪರ್ಧೆಯಲ್ಲಿ ಅಂಜಲಿ ಕೋವಳ್ಳಿ (ಪ್ರಥಮ), ಜಗದೀಶ ಭಜಂತ್ರಿ (ದ್ವಿತೀಯ) ಹಾಗೂ ಮಹಾಲಿಂಗ ಮೇಗಾಡಿ (ತೃತೀಯ) ಸ್ಥಾನ ಪಡೆದುಕೊಂಡಿದ್ದಾರೆ. ಸಮಾಧಾನಕರ ಬಹುಮಾನವನ್ನು ಮಹಾಂತೇಶ ಪಟ್ಟಣಶೆಟ್ಟಿ, ಬಸಪ್ಪ ಕಳ್ಳಿಗುಡ್ಡ, ಕಾವ್ಯ ಕೋವಳ್ಳಿ, ಶರಣಪ್ಪ ಜಾಲಿಹಾಳ, ಮಂಜುನಾಥ ಮುಸರಿ, ದುಂಡಪ್ಪ ಗೌಡರ, ರಾಜೇಶ್ವರಿ ಗೌಡರ ಪಡೆದುಕೊಂಡಿದ್ದಾರೆಂದು ಜಿಲ್ಲಾ ವಾರ್ತಾಧಿಕಾರಿ ಕಸ್ತೂರಿ ಪಾಟೀಲ ತಿಳಿಸಿದ್ದಾರೆ.