ಒಳಚರಂಡಿ, ರಸ್ತೆ ಪುನರ್ ನಿರ್ಮಾಣ

KannadaprabhaNewsNetwork |  
Published : Jun 10, 2025, 09:35 AM ISTUpdated : Jun 10, 2025, 09:36 AM IST
ಹುಬ್ಬಳ್ಳಿಯ ಬೈರಿದೇವರಕೊಪ್ಪ ವ್ಯಾಪ್ತಿಯ ವೀರ ಸಂಗೊಳ್ಳಿ ರಾಯಣ್ಣ ನಗರದಲ್ಲಿ ಶಾಸಕ ಮಹೇಶ ಟೆಂಗಿನಕಾಯಿ, ಹುಡಾ ಅಧ್ಯಕ್ಷ ಶಾಕೀರ ಸನದಿ ನೇತೃತ್ವದಲ್ಲಿ ಸಭೆ ನಡೆಸಲಾಯಿತು. | Kannada Prabha

ಸಾರಾಂಶ

ನಮ್ಮ ಬಡಾವಣೆಯ ಸಾಮರ್ಥ್ಯಕ್ಕೆ ಅನುಗುಣವಾಗಿ ಅಳವಡಿಸಿದ್ದ ಒಳಚರಂಡಿ ಲೈನ್ ಗೆ ಅಕ್ಕಪಕ್ಕದ ಬಡಾವಣೆಗಳ ಒಳಚರಂಡಿ ಜೋಡಿಸಿದ್ದರಿಂದ ಒತ್ತಡ ತಾಳದೇ ಒಡೆಯುತ್ತಿವೆ. ದರ್ಗಾ ತೆರವು ವೇಳೆ ಮಾರ್ಗ ಬದಲಿಸಿ ನಮ್ಮ ಬಡಾವಣೆಯ ಮೂಲಕ ಎಲ್ಲ ವಾಹನಗಳನ್ನು ಓಡಿಸಿದ್ದರಿಂದ ರಸ್ತೆಗಳೆಲ್ಲ ಹಾಳಾಗಿವೆ. ನಿರ್ವಹಣೆ ಕೊರತೆಯಿಂದ ಚರಂಡಿಗಳು ಹಾಳಾಗಿವೆ ಎಂದು ಮನವರಿಕೆ ಮಾಡಿದರು.

ಹುಬ್ಬಳ್ಳಿ: ಬೈರಿದೇವರಕೊಪ್ಪ ವ್ಯಾಪ್ತಿಯ ವೀರ ಸಂಗೊಳ್ಳಿ ರಾಯಣ್ಣ ನಗರದ ಬಹುದಿನದ ಬೇಡಿಕೆಗಳಾದ ಒಳಚರಂಡಿ, ರಸ್ತೆಗಳ ಪುನರ್ ನಿರ್ಮಾಣಕ್ಕೆ ಕೊನೆಗೂ ಮಹಾನಗರ ಪಾಲಿಕೆ ಮತ್ತು ನಗರಾಭಿವೃದ್ಧಿ ಪ್ರಾಧಿಕಾರ ಒಪ್ಪಿಕೊಂಡಿದ್ದು, ಮುಂದಿನ 6 ತಿಂಗಳಲ್ಲಿ ಕಾಮಗಾರಿ ಆರಂಭಿಸುವುದಾಗಿ ಭರವಸೆ ನೀಡಿವೆ.

ಸೋಮವಾರ ಶಾಸಕ ಮಹೇಶ್ ಟೆಂಗಿನಕಾಯಿ, ಹುಡಾ ಅಧ್ಯಕ್ಷ ಶಾಕೀರ್ ಸನದಿ ಮತ್ತು ಪಾಲಿಕೆ ಸದಸ್ಯ ಮಲ್ಲಿಕಾರ್ಜುನ ಗುಂಡೂರ ನೇತೃತ್ವದಲ್ಲಿ ಪಾಲಿಕೆ ಮತ್ತು ಹುಡಾ ಅಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಯಿತು.

ಸಂಗೊಳ್ಳಿ ರಾಯಣ್ಣ ನಗರದ ಹಿತಾಭಿವೃದ್ಧಿ ಸಂಘದ ಅಧ್ಯಕ್ಷ ಎಂ. ಶಿವಣ್ಣ ಅವರು, ನಮ್ಮ ಬಡಾವಣೆಯ ಸಾಮರ್ಥ್ಯಕ್ಕೆ ಅನುಗುಣವಾಗಿ ಅಳವಡಿಸಿದ್ದ ಒಳಚರಂಡಿ ಲೈನ್ ಗೆ ಅಕ್ಕಪಕ್ಕದ ಬಡಾವಣೆಗಳ ಒಳಚರಂಡಿ ಜೋಡಿಸಿದ್ದರಿಂದ ಒತ್ತಡ ತಾಳದೇ ಒಡೆಯುತ್ತಿವೆ. ದರ್ಗಾ ತೆರವು ವೇಳೆ ಮಾರ್ಗ ಬದಲಿಸಿ ನಮ್ಮ ಬಡಾವಣೆಯ ಮೂಲಕ ಎಲ್ಲ ವಾಹನಗಳನ್ನು ಓಡಿಸಿದ್ದರಿಂದ ರಸ್ತೆಗಳೆಲ್ಲ ಹಾಳಾಗಿವೆ. ನಿರ್ವಹಣೆ ಕೊರತೆಯಿಂದ ಚರಂಡಿಗಳು ಹಾಳಾಗಿವೆ ಎಂದು ಮನವರಿಕೆ ಮಾಡಿದರು.

ಈ ವಿಷಯವಾಗಿ ಹಲವು ಬಾರಿ ಮನವಿ, ಸಭೆ ನಡೆಸಿದರೂ ಪ್ರಯೋಜನವಾಗಿಲ್ಲ. ಪಾಲಿಕೆ ಹಸ್ತಾಂತರ ಮಾಡುವ ಮುನ್ನವೇ ಈ ಸಮಸ್ಯೆ ‌ಬಗೆಹರಿಸಿ ಹಸ್ತಾಂತರ ಮಾಡಬೇಕು ಎಂದು ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಹುಡಾ ಆಯುಕ್ತ ಬಿರಾದಾರ ಅವರು, ಹುಡಾ ಈ ವರೆಗೆ 32 ಬಡಾವಣೆಗಳನ್ನು ನಿರ್ಮಾಣ ಮಾಡಿದೆ. ಆದರೆ, ಬರೋಬ್ಬರಿ ₹8.5 ಕೋಟಿ ವ್ಯಯಿಸಿದ್ದು ಈ ಬಡಾವಣೆಗೆ ಮಾತ್ರ. ಆದಾಗ್ಯೂ ಶಾಸಕರು ವಿಶೇಷ ಪ್ರಯತ್ನದಿಂದ ನಿಮ್ಮ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದರು.

ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಇಲ್ಲಿನ ನಿವಾಸಿಗಳು ವಿಮಾನ ನಿಲ್ದಾಣಕ್ಕಾಗಿ ತಮ್ಮ ಮನೆ, ಆಸ್ತಿ ತ್ಯಾಗ ಮಾಡಿದ್ದಾರೆ. ಹಾಗಾಗಿ ಇವರ ಬೇಡಿಕೆಗಳನ್ನು ಶೀಘ್ರದಲ್ಲಿ ಈಡೇರಿಸಬೇಕು. ಒಳಚರಂಡಿ, ರಸ್ತೆ, ಗಟಾರುಗಳನ್ನು ರಿಪೇರಿ ಮಾಡದೇ ಕಾಲಮಿತಿಯಲ್ಲಿ ಪುನರ್ ನಿರ್ಮಾಣ ಮಾಡಿ ಎಂದು ತಾಕೀತು ಮಾಡಿದರು.

ಹುಡಾ ಅಧ್ಯಕ್ಷ ಶಾಕೀರ್ ಸನದಿ ಅವರು, ಬಡಾವಣೆಯಲ್ಲಿನ ಎಲ್ಲ ಗಾರ್ಡನ್ ಗಳನ್ನು ಅಭಿವೃದ್ಧಿಪಡಿಸಿ, ಅಲ್ಲಿ ವಾಕಿಂಗ್ ಪಾತ್ ನಿರ್ಮಾಣ, ಹಿರಿಯರ ಜಿಮ್, ಮಕ್ಕಳ ಆಟಿಗೆ , ಹೈಮಾಸ್ಕ್ ಲೈಟ್ ಅಳವಡಿಸುವುದಾ ಮತ್ತು ಒಂದು ಬಸ್ ಶೆಲ್ಟರ್ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದರು.

ಬಡಾವಣೆಯಲ್ಲಿ ಬೀದಿ ದೀಪ ಮತ್ತು ಮೇಲಿಂದ ಮೇಲೆ ಕರೆಂಟ್ ಕಟ್ ಆಗುವ ಸಮಸ್ಯೆಗೆ ಶೀಘ್ರ ಮುಕ್ತಿ ನೀಡುವುದಾಗಿ ಹೆಸ್ಕಾಂ ಅಧಿಕಾರಿಗಳು ವಾಗ್ದಾನ ಮಾಡಿದರು.

ಪಾಲಿಕೆಯ ವಲಯ ಅಧಿಕಾರಿ ರಮೇಶ್ ನೂಲ್ಪಿ, ಬಡಾವಣೆಯ ಸಿ.ಎಸ್. ಹವಾಲದಾರ, ರಾಜು ವಿಜಾಪುರ, ಮಲ್ಲಿಕಾರ್ಜುನ ಸಿದ್ದಣ್ಣವರ, ಕೃಷ್ಣಾ ಶೆಟ್ಟಿ ಸೇರಿದಂತೆ ಸಂಘದ ಪದಾಧಿಕಾರಿಗಳು, ಹಿರಿಯರು ಸಭೆಯಲ್ಲಿ ಭಾಗವಹಿಸಿ ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಶಾಸಕರಿಗೆ, ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!