ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ತಾಲೂಕು ಹಿರೀಸಾವೆ ಹೋಬಳಿಯ ಉಳ್ಳಾವಳ್ಳಿ ಗ್ರಾಮದ ಕಲಾವಿದರ ತಂಡ ನಾಟಕಗಳ ಪ್ರದರ್ಶನದಲ್ಲಿ ಪ್ರಸಿದ್ಧಿ ಪಡೆದಿದ್ದು ತನ್ನದೇ ಆದ ಮಹತ್ವವನ್ನು ಇಂದಿಗೂ ಉಳಿಸಿಕೊಂಡಿದೆ. ಪೂರ್ವಜರನ್ನು ಹಿಂಬಾಲಿಸಿ ತಂದೆ ನಂತರ ಮಕ್ಕಳು, ಮನೆಗೊಬ್ಬರಂತೆ ಕಲಾವಿದರು ಹುಟ್ಟಿಕೊಂಡಿರುವುದು ಹೆಮ್ಮೆಯ ವಿಚಾರ ಎಂಬುದು ಗ್ರಾಮಸ್ಥರಲ್ಲಿ ಹಿರಿಮೆ ಮೂಡಿಸಿದೆ. ಒಂದು ಶತಮಾನಕ್ಕೂ ಹಿಂದಿನ ಪರಂಪರೆಯನ್ನು ಇಂದಿಗೂ ಸಹ ಭಕ್ತಿಭಾವದಿಂದ ಸೌಹಾರ್ದತೆಯ ಸಂಕೇತವಾಗಿ ಕಲಾ ಪ್ರದರ್ಶನವನ್ನು ಶ್ರೀ ಭೈರವೇಶ್ವರ ಕೃಪಾ ಪೋಷಿತ ನಾಟಕ ಮಂಡಳಿ ಮಾಡಿಕೊಂಡುಬರುತ್ತಿದೆ.
ಹಿರಿಯರ ಮಾರ್ಗದರ್ಶನದಲ್ಲಿ ೩೦ ಕ್ಕೂ ಹೆಚ್ಚು ಯುವಕರ ತಂಡ ಬಣ್ಣ ಹಾಕುತ್ತಿದೆ. ದಿ. ರಂಗಶೆಟ್ಟಿ, ದಿ. ಕೃಷ್ಣೇಗೌಡ, ದಿ.ಸೀನಪ್ಪ, ದಿ. ತಿಮ್ಮೇಗೌಡ, ದಿ. ಬಸವರಾಜು, ದಿ. ಚಂದ್ರು ಅವರು ಈಗಿನ ಯುವ ಕಲಾವಿದರಿಗೆ ಸ್ಫೂರ್ತಿಯಾಗಿದ್ದಾರೆ. ಮಾರ್ಚ್ ತಿಂಗಳ ೧೫ರಂದು ಗ್ರಾಮದೇವತೆ ಶ್ರೀ ಭೈರವೇಶ್ವರ ಸ್ವಾಮಿಯ ಹಬ್ಬ ಹಾಗೂ ಜಾತ್ರಾ ಮಹೋತ್ಸವ ನಡೆಯಲಿದೆ. ಕಳಶೋತ್ಸವ, ಕೆಂಡ ಕೊಂಡೋತ್ಸವ ಮುಗಿದು ನಂತರ ಗ್ರಾಮದೊಳಗೆ ಜಗಮಗಿಸುವ ಬೆಳಕಿನಲ್ಲಿ ಬಂದೂರು ಡ್ರಾಮಾ ಸೀನರಿಯಲ್ಲಿ ನಾಟಕ ಪ್ರದರ್ಶನ ನಡೆಯುತ್ತದೆ.ಗ್ರಾಮದ ರೈತರು, ಯುವಕರು, ಕಾರ್ಮಿಕರು, ವ್ಯಾಪಾರಸ್ಥರು, ಆಟೋ, ಕಾರು ಚಾಲಕರು, ವಿದ್ಯಾರ್ಥಿಗಳು, ಬಣ್ಣ ಹಚ್ಚಿ ಕಲಾ ಪ್ರದರ್ಶನ ಮಾಡಲಿದ್ದಾರೆ. ಇವರೆಲ್ಲ ಕಲಾವಿದರಾಗಿ ರೂಪಾಂತರವಾದ ನಂತರ ಪಾತ್ರಗಳನ್ನು ತನ್ನೊಳಗೆ ಆವಾಹನೆ ಮಾಡಿಕೊಂಡು ನಾಟಕ ಪ್ರದರ್ಶಿಸುವ ಶಿಸ್ತುಬದ್ಧತೆ ಸಿನಿಮಾ ಕಲಾವಿದರನ್ನು ನಾಚಿಸುವಂತಿರುತ್ತದೆ.
ಮಾರ್ಚ್ ೧೫ರಂದು ನಮ್ಮ ಗ್ರಾಮದಲ್ಲಿ ಶ್ರೀ ಭೈರವೇಶ್ವರ ಸ್ವಾಮಿಯ ಹಬ್ಬ ಹಾಗೂ ಜಾತ್ರಾ ಮಹೋತ್ಸವ ನಡೆಯಲಿದೆ. ಪ್ರಯುಕ್ತ ಶ್ರೀ ಭೈರವೇಶ್ವರ ಕೃಪಾಪೋಷಿತ ನಾಟಕ ಮಂಡಳಿ ವತಿಯಿಂದ ಗ್ರಾಮಸ್ಥರ ಸಹಕಾರದೊಂದಿಗೆ ಕುರುಕ್ಷೇತ್ರ ಅಥವಾ ಧರ್ಮರಾಜ್ಯ ಸ್ಥಾಪನೆ ಎಂಬ ಪೌರಾಣಿಕ ನಾಟಕವನ್ನು ಯುವಕರು ಅದ್ಭುತವಾಗಿ ಪ್ರದರ್ಶನ ಮಾಡಲಿದ್ದು ಕಲಾಭಿಮಾನಿಗಳು ಪಾಲ್ಗೊಂಡು ಪ್ರೋತ್ಸಾಹ ನೀಡಬೇಕು ಎಂದು ದಿಡಗ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಎಚ್. ಕೆ. ಯೋಗೇಶ್ ತಿಳಿಸಿದ್ದಾರೆ.