ಕನ್ನಡಪ್ರಭ ವಾರ್ತೆ ಸಿರಿಗೆರೆ
ಹೊಳಲ್ಕೆರೆ ಕ್ಷೇತ್ರದ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದ, ಜಿಲ್ಲೆಯ ಪ್ರಮುಖ ಅಣೆಕಟ್ಟೆ ವಾಣಿವಿಲಾಸ ಸಾಗರದಿಂದ ಹೊಳಲ್ಕೆರೆ ಕ್ಷೇತ್ರಕ್ಕೆ ನೀರು ತರುವ ಯೋಜನೆ ಇದೆ ಎಂದು ಹೊಳಲ್ಕೆರೆ ಶಾಸಕ ಡಾ. ಎಂ. ಚಂದ್ರಪ್ಪ ಹೇಳಿದರು.ಬಿ.ದುರ್ಗ ಗ್ರಾಮದ ಸಮೀಪ ಹಳ್ಳಕ್ಕೆ 2 ಕೋಟಿ ರು.ವೆಚ್ಚದಲ್ಲಿ ನೂತನ ಚೆಕ್ ಡ್ಯಾಂ ಮತ್ತು ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಕಾಮಗಾರಿ ಮತ್ತು 1 ಕೋಟಿ ರು. ವೆಚ್ಚದಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ಸಲ್ಲಿಸಿ ಮಾತನಾಡಿದರು.
ಡ್ಯಾಂನ ಮಧ್ಯಭಾಗದಲ್ಲಿ ಪಿಲ್ಲರ್ ಅಳವಡಿಸಿ ನೀರೆತ್ತಲು ಮೋಟಾರನ್ನು ಕೂರಿಸಲಾಗುವುದು. ಇದಕ್ಕೆ 60 ಲಕ್ಷ ರು. ವೆಚ್ಚ ಆಗುತ್ತಿದೆ. ಒಟ್ಟಾರೆ ಯೋಜನೆಗೆ 367 ಕೋಟಿ ರು. ಖರ್ಚು ಮಾಡಲಾಗುವುದು ಎಂದರು.ಸೂಳೆಕೆರೆಯಿಂದ ಈಗ ಕ್ಷೇತ್ರದ ಬಹುಭಾಗದ ಜನರಿಗೆ ನೀರು ಲಭ್ಯವಾಗುತ್ತಿದೆ. ಆದರೆ ಕೆಲ ಸಂದರ್ಭದಲ್ಲಿ ಕಲುಷಿತ ನೀರು ಕೂಡ ಪೂರೈಕೆ ಆಗುತ್ತಿದೆ. ಇದರಿಂದ ಮುಕ್ತಿ ಸಿಗಬೇಕೆಂದರೆ ವಾಣಿ ವಿಲಾಸ ಅಣೆಕಟ್ಟೆಯ ಕುಡಿಯುವ ನೀರಿನ ಯೋಜನೆಯಿಂದ ಸಾಧ್ಯ ಎಂದರು. ಕ್ಷೇತ್ರದ ತುಂಬಾ ಅಭಿವೃದ್ಧಿಯ ಪರ್ವವೇ ನಡೆದಿದೆ. ಎಲ್ಲಾ ಹಳ್ಳಿಗಳಲ್ಲಿಯೂ ರಸ್ತೆ, ಕುಡಿಯುವ ನೀರು, ವಿದ್ಯುತ್ ಸೌಲಭ್ಯ ಕಲ್ಪಿಸಲಾಗಿದೆ. ತಾಲ್ಲೂಕು ಕೇಂದ್ರದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾಗಿದೆ. ಗುಣಮಟ್ಟದ ಆರೋಗ್ಯ ಚಿಕಿತ್ಸೆ ಎಲ್ಲರಿಗೂ ಸಿಗಬೇಕೆಂಬುದು ನನ್ನ ಮನದಾಳದ ಅಪೇಕ್ಷೆ ಎಂದರು.
ನನಗೆ ಯಾವುದೇ ಧರ್ಮ ಮತ್ತು ಜಾತಿಯ ಬಗ್ಗೆ ತಾರತಮ್ಯ ಇಲ್ಲ. ಕ್ಷೇತ್ರದ ಎಲ್ಲರನ್ನೂ ಸಮಾನಭಾವದಿಂದ ಒಟ್ಟಿಗೆ ಕರೆದುಕೊಂಡು ಹೋಗಬೇಕೆನ್ನುವುದು ನನ್ನ ಆಶಯ. ಅದಕ್ಕೆ ಅನುಗುಣವಾಗಿ ನಿರ್ವಂಚನೆಯಿಂದ ಕೆಲಸ ಮಾಡುತ್ತೇನೆ ಎಂದರು.ರುದ್ರಗೌಡ್ರು, ಡಿ.ಸಿ.ಮೋಹನ್, ಸ್ವಾಮಿ, ಮಹಾಂತೇಶ್, ಷಣ್ಮುಖಪ್ಪ, ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ಗಳಾದ ಆನಂದಪ್ಪ, ನವೀನ್ ಹಾಗೂ ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.