ಕನ್ನಡಪ್ರಭ ವಾರ್ತೆ ಕೋಲಾರಬೆಂಗಳೂರು- ಚೆನ್ನೈ ಎಕ್ಸ್ಪ್ರೆಸ್ ಹೈವೇಯಲ್ಲಿ ವಾಹನಗಳ ವೇಗಗಳಿಗೆ ಮಿತಿ ವಿಧಿಸಲಾಗಿದೆ. ವಾಹನಗಳ ಚಾಲಕರು ಈ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸಂಸದ ಮಲ್ಲೇಶ್ಬಾಬು ಮನವಿ ಮಾಡಿದರು. ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹೈವೇಯಲ್ಲಿ ವೇಗದ ಮಿತಿ ೧೦೦ ರಿಂದ ೧೨೦ ಮಾತ್ರ ಇರುತ್ತದೆ. ಅದನ್ನು ಮೀರಿ ಚಲಾಯಿಸುವುದರಿಂದ ವಾಹನಗಳು ಚಾಲಕರ ನಿಯಂತ್ರಣ ತಪ್ಪಿ ಅಪಘಾತಗಳ ಸಂಭವಿಸುವ ಸಂಭವ ಹೆಚ್ಚು. ಆದ್ದರಿಂದ ವಾಹನಗಳ ಚಾಲಕರು ವೇಗದ ಪರಮಿತಿಯಲ್ಲಿ ಚಲಾಯಿಸಬೇಕೆಂದರು. ಚಾಲಕರಿಗೆ ಅರಿವು ಮೂಡಿಸಬೇಕು
ಹಲವಾರು ಕಡೆ ಸರ್ವಿಸ್ ರಸ್ತೆಗಳಿಲ್ಲದೆ ಅಪಘಾತಗಳಿಗೆ ಎಡೆ ಮಾಡಿಕೊಡುತ್ತಿದೆ. ಈ ಕುರಿತು ರಾಷ್ಟ್ರೀಯ ಹೆದ್ದಾರಿ ಇಲಾಖೆ ಭೂಮಿಯ ಕೊರತೆಯಿಂದಾಗಿ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಈ ಸಂಬಂಧವಾಗಿ ರಾಜ್ಯ ಕಂದಾಯ ಸಚಿವ ಕೃಷ್ಣಬೈರೇಗೌಡರ ಬಳಿ ಚರ್ಚಿಸಲಾಗುವುದು. ಕಂದಾಯ ಭೂಮಿ ಇಲ್ಲದೆ ಹೋದಲ್ಲಿ ಖಾಸಗಿಯವರಿಂದ ಭೂಮಿಯನ್ನು ಸ್ವಾಧೀನಕ್ಕೆ ಪಡೆದು ರಸ್ತೆ ವಿಸ್ತರಿಸಲು ಕ್ರಮಕೈಗೊಳ್ಳಲು ಹೈವೇ ಅಧಿಕಾರಿಗಳು ಸಿದ್ಧರಿದ್ದಾರೆ. ಹೆದ್ದಾರಿಗಳಲ್ಲಿ ಸರ್ವಿಸ್ ರಸ್ತೆಗಳು ಅತ್ಯವಶ್ಯಕವಿದೆ. ಈ ಕುರಿತು ಜಿಲ್ಲಾಧಿಕಾರಿ ಗಮನಕ್ಕೂ ತರುವುದಾಗಿ ಹೇಳಿದರು.
ಎಕ್ಸ್ ಪ್ರೆಸ್ ಹೈವೇಯ ಕಾಮಗಾರಿಗಳು ಆಂಧ್ರ ಪ್ರದೇಶದಲ್ಲೂ ಮುಗಿದಿದ್ದು, ತಮಿಳುನಾಡಿದಲ್ಲಿ ಕಾಮಗಾರಿಗಳು ಮಾಡ ಬೇಕಾಗಿದೆ. ಎರಡು ರಾಜ್ಯಗಳಲ್ಲಿ ಕಾಮಗಾರಿಗಳು ಪೂರ್ಣಗೊಂಡಲ್ಲಿ ವಾಹನಗಳ ಸಂಚಾರವು ಇನ್ನು ಹೆಚ್ಚಾಗಲಿದೆ. ಆಗ ಇನ್ನು ಹೆಚ್ಚಿನ ಅಪಘಾತಗಳ ಸಾಧ್ಯತೆಗಳಿರುವುದರಿಂದ ಹೈವೇ ಲೋಕಾರ್ಪಣೆಗೆ ಮುನ್ನ ಎಲ್ಲ ನ್ಯೂನತೆಗಳನ್ನು ಸರಿಪಡಿಸಬೇಕಾಗಿದೆ ಎಂದರು.ವಾಹನ ವೇಗಕ್ಕೆ ಮಿತಿ ಇರಲಿ
ವಾಹನಗಳ ಸಂಚಾರದಲ್ಲಿ ವೇಗದ ಮಿತಿ ಪಾಲಿಸಬೇಕಾಗಿದೆ. ಈ ಕುರಿತು ಪೊಲೀಸ್ ಇಲಾಖೆ ಸಹ ಸಂಚಾರದ ಕಾನೂನು ಸಮರ್ಪಕವಾಗಿ ಅನುಷ್ಠಾನಕ್ಕೆ ಬರುವಂತೆ ಕಾರ್ಯನಿರ್ವಹಿಸುವ ಮೂಲಕ ಸಾರ್ವಜನಿಕರಲ್ಲಿ ಅರಿವುಂಟು ಮಾಡಬೇಕಾಗಿದೆ ಎಂದು ತಿಳಿಸಿದರು.