ಕೌಟುಂಬಿಕ ಕಲಹ: ಪತ್ನಿ ಕೊಲೆ ಮಾಡಿ ಆತ್ಮಹತ್ಯೆಗೆ ಶರಣಾದ ಪತಿ

KannadaprabhaNewsNetwork |  
Published : Dec 17, 2025, 01:00 AM IST
12ಕೆಎಂಎನ್‌ಡಿ-2ಮಳವಳ್ಳಿ ಸಮೀಪದ ಮಾರೇಹಳ್ಳಿ ಬಳಿ ನಿರ್ಮಿಸಿದ್ದ ಹೆಲಿಪ್ಯಾಡ್‌ಗೆ ಆಗಮಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋತ್‌, ಕೇಂದ್ರ ಉಕ್ಕು ಮತ್ತು ಬೃಹತ್‌ ಕೈಗಾರಿಕೆ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಆತ್ಮೀಯವಾಗಿ ಸ್ವಾಗತಿಸಿದರು. | Kannada Prabha

ಸಾರಾಂಶ

ರಾಮನಗರ: ಕೌಟುಂಬಿಕ ಕಲಹದಿಂದಾಗಿ ವ್ಯಕ್ತಿಯೊಬ್ಬರು ತನ್ನ ಪತ್ನಿಯನ್ನು ಕೊಲೆ ಮಾಡಿ, ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಹಾಲಗಹಳ್ಳಿ ಗ್ರಾಮದಲ್ಲಿ ನಡೆದಿದೆ

ರಾಮನಗರ: ಕೌಟುಂಬಿಕ ಕಲಹದಿಂದಾಗಿ ವ್ಯಕ್ತಿಯೊಬ್ಬರು ತನ್ನ ಪತ್ನಿಯನ್ನು ಕೊಲೆ ಮಾಡಿ, ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಹಾಲಗಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ನವೀನ್ ಕುಮಾರ್ ಪತ್ನಿ ವತ್ಸಲಾ(30) ಮೇಲೆ ಹಲ್ಲೆ ನಡೆಸಿ, ಬಳಿಕ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಆನಂತರ ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಚನ್ನಪಟ್ಟಣ ತಾಲೂಕಿನ ಮೈಲನಾಯ್ಕನಹಳ್ಳಿಯ ವತ್ಸಲಾ ಅವರನ್ನು 8 ವರ್ಷದ ಹಿಂದೆ ಮದುವೆಯಾಗಿದ್ದ ನವೀನ್ ಅವರಿಗೆ, 7 ವರ್ಷದ ಪುತ್ರಿ ಇದ್ದು ರಾಮನಗರದ ಪ್ರತಿಷ್ಠಿತ ಶಾಲೆಯೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಏಕೈಕ ಪುತ್ರನಾಗಿದ್ದ ನವೀನ್ ಅವರ ತಂದೆ ತೀರಿಕೊಂಡಿದ್ದು, ವಯಸ್ಸಾದ ತಾಯಿ ಇದ್ದಾರೆ. ಇದೀಗ ಪುತ್ರಿ ಮತ್ತು ತಾಯಿಗೆ ಯಾರೂ ದಿಕ್ಕಿಲ್ಲದಂತಾಗಿದೆ.

ಬಿಡದಿಯಲ್ಲಿ ಮಾಂಸಾಹಾರದ ಹೋಟೆಲ್ ಇಟ್ಟುಕೊಂಡಿದ್ದ ನವೀನ್, ಕುಟುಂಬದೊಂದಿಗೆ ಬೆಂಗಳೂರಿನ ನಾಯಂಡಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಅನ್ಯೋನ್ಯವಾಗಿದ್ದ ದಂಪತಿ ನಡುವೆ ಸಂಸಾರದ ವಿಷಯದಲ್ಲಿ ಮನಸ್ತಾಪ ಉಂಟಾಗಿತ್ತು.

ಹೊಟೇಲ್ ವ್ಯವಹಾರದಲ್ಲಿ ನಷ್ಟ ಅನುಭವಿಸಿದ್ದ ನವೀನ್, ಕುಟುಂಬ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಪತ್ನಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ಬದಲಾದ ಪತಿಯ ಸ್ವಭಾವದಿಂದ ಬೇಸತ್ತಿದ್ದ ವತ್ಸಲಾ ಬಿಡದಿಯ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಇದಕ್ಕೆ ನವೀನ್, ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಕಂಪನಿ ಬಳಿಯೂ ಹೋಗಿ ಜಗಳವಾಡಿದ್ದರು. ಜಗಳ ವಿಕೋಪಕ್ಕೆ ಹೋದಾಗಲೆಲ್ಲಾ ವತ್ಸಲ ಅವರು, ತವರು ಮನೆಗೆ ಬಂದು ಕೆಲ ದಿನ ಇದ್ದು ಹೋಗುತ್ತಿದ್ದರು. ದಿನದಿಂದ ದಿನಕ್ಕೆ ದಂಪತಿ ನಡುವೆ ಕಲಹ ಹೆಚ್ಚುತ್ತಲೇ ಇತ್ತು.

ಪತಿ ವರ್ತನೆಗೆ ಬೇಸತ್ತ ವತ್ಸಲಾ, ಕೆಲ ದಿನಗಳ ಹಿಂದೆ ರಾಮನಗರ ಮಹಿಳಾ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರು. ಪೊಲೀಸರು ಪತಿ-ಪತ್ನಿ ಜೊತೆಗೆ ಎರಡೂ ಕಡೆಯ ಕುಟುಂಬದವರನ್ನು ಕರೆಯಿಸಿ ಅನ್ನೋನ್ಯವಾಗಿ ಬದುಕುವಂತೆ ಬುದ್ಧಿ ಹೇಳಿ, ಎನ್‌ಸಿಆ‌ರ್ ಮಾಡಿಕೊಂಡಿದ್ದರು. ಪತ್ನಿಗೆ ಕಿರುಕುಳ ನೀಡದಂತೆ ನವೀನ್ ಅವರಿಂದ ಮುಚ್ಚಳಿಕೆ ಬರೆಯಿಸಿಕೊಂಡು ಕಳಿಸಿದ್ದರು.

ಕೌಟುಂಬಿಕ ಕಲಹವು ಪೊಲೀಸ್ ಠಾಣೆ ಮೆಟ್ಟಿಲೇರಿದರೂ ದಂಪತಿ ನಡುವೆ ಹೊಂದಾಣಿಕೆ ಇರಲಿಲ್ಲ. ವತ್ಸಲಾ ಅವರು ಪುತ್ರಿ ಸಮೇತ ತವರು ಮನೆಗೆ ಹೋಗಿದ್ದರು. ಇದರ ನಡುವೆಯೇ ವತ್ಸಲಾ ಅವರು ವಿಚ್ಛೇದನ ಪಡೆಯಲು ನಿರ್ಧರಿಸಿದ್ದರು ಎನ್ನಲಾಗಿದೆ.

ಬೆಳಿಗ್ಗೆ ಪತ್ನಿಗೆ ಕರೆ ಮಾಡಿದ್ದ ನವೀನ್, ಬಿಡದಿಗೆ ಅವರನ್ನು ಕರೆಯಿಸಿಕೊಂಡು ಹಾಲಗಹಳ್ಳಿ ಮನೆಗೆ ಮಧ್ಯಾಹ್ನ 3.30ರ ಸುಮಾರಿಗೆ ಕರೆದುಕೊಂಡು ಬಂದಿದ್ದರು. ನಂತರ ಪತ್ನಿಯನ್ನು ಕೊಂದು, ತಾವೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ ಬಳಿಕ, ಶವಗಳನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತು.

ಆತ್ಮಹತ್ಯೆಗೆ ಮುಂಚೆ ಸಂಬಂಧಿಗೆ ಕರೆ ಮಾಡಿ ಮನೆಯಲ್ಲಿ ಇಬ್ಬರ ನಡುವೆ ಜಗಳ ನಡೆದಾಗ ನವೀನ್ ಅವರು ವತ್ಸಲ ಅವರ ಮೇಲೆ ಹಲ್ಲೆ ನಡೆಸಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ನಂತರ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆತ್ಮಹತ್ಯೆಗೆ ಮುಂಚೆ ತನ್ನ ಸಂಬಂಧಿಕರೊಬ್ಬರ ಮೊಬೈಲ್‌ ಸಂಖ್ಯೆಗೆ ಕರೆ ಮಾಡಿದ್ದ ನವೀನ್ ''''''''ನಂದೆಲ್ಲಾ ಮುಗೀತು. ಮರ್ಯಾದೆ ಹೋಯಿತು'''''''' ಎಂದು ದುಃಖದಿಂದ ಮಾತನಾಡಿದ್ದಾರೆ. ನವೀನ್ ಮಾತಿನ ದಾಟಿಯಿಂದ ಆತಂಕಗೊಂಡ ಸಂಬಂಧಿಕರು ಗ್ರಾಮದ ಪಕ್ಕದ ಮನೆಯವರಿಗೆ ಕರೆ ಮಾಡಿ ನವೀನ್ ಅವರ ಆಡಿದ ಮಾತುಗಳನ್ನು ತಿಳಿಸಿ ಒಮ್ಮೆ ಮನೆಗೆ ಹೋಗಿ ಬನ್ನಿ ಎಂದಿದ್ದಾರೆ. ಅದರಂತೆ ಪಕ್ಕದ ಮನೆಯವರು ಮನೆಗೆ ಬಂದು ನೋಡಿದಾಗ ವತ್ಸಲಾ ನೆಲದಲ್ಲಿ ಶವವಾಗಿ ಬಿದ್ದಿದ್ದರು. ನವೀನ್ ಪಕ್ಕದಲ್ಲೇ ನೇಣು ಹಾಕಿಕೊಂಡಿದ್ದರು. ಸ್ಥಳದಲ್ಲಿ ನವೀನ್ ಅವರು ಬರೆದಿಟ್ಟಿದ್ದ ಮರಣಪತ್ರ ಸಿಕ್ಕಿದೆ. ''''''''ಮಗಳನ್ನು ಚನ್ನಾಗಿ ನೋಡಿಕೊಳ್ಳಿ'''''''' ಎಂದು ಡೆತ್‌ನೋಟ್‌ನಲ್ಲಿ ಬರೆದಿರುವ ನವೀನ್ ಅವರು ಪತ್ನಿ ಕುರಿತು ಕೆಲ ಆರೋಪಗಳನ್ನು ಸಹ ಮಾಡಿದ್ದಾರೆನ್ನಲಾಗಿದೆ. ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾಕ್ಸ್‌.............

ಮಾದಕ ವಸ್ತು ಮಾರಾಟ: ಇಬ್ಬರ ಬಂಧನ

ರಾಮನಗರ: ನಗರದ ಹೊರವಲಯದ ರಂಗರಾಯನದೊಡ್ಡಿ ಕೆರೆ ರಸ್ತೆಯಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಇಬ್ಬರನ್ನು ಐಜೂರು ಠಾಣೆ ಪೊಲೀಸರು ಬಂಧಿಸಿ, 2.5 ಗ್ರಾಂ ತೂಕದ ಎಂಡಿಎಂಎ ಮಾದಕವಸ್ತು ಹಾಗೂ 2 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ. ನಗರದ ತೌಸಿಫ್ ಮಹಮ್ಮದ್ (26) ಮತ್ತು ನವಾಜ್ ಪಾಷಾ(25) ಬಂಧಿತರು. ಆರೋಪಿಗಳು ಕೆರೆ ರಸ್ತೆಯಲ್ಲಿ ಮಾದಕವಸ್ತು ಮಾರಾಟ ಮಾಡುತ್ತಿರುವ ಕುರಿತು ಸಿಕ್ಕ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ, ಮಾಲು ಸಮೇತ ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಬೆಂಗಳೂರಿನ ಸಿಟಿ ಮಾರ್ಕೆಟ್‌ನಲ್ಲಿರುವ ಪರಿಚಿತರೊಬ್ಬರ ಅಂಗಡಿಯೊಂದರಲ್ಲಿ ತಂದು ಮಾರಾಟ ಮಾಡುತ್ತಿದ್ದರು. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ಪ್ರತಿಕ್ರಿಯಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ