ಬರ: ಸಾಲ ವಸೂಲಾತಿಗೆ ನೋಟಿಸ್‌ ನೀಡುವಂತಿಲ್ಲ

KannadaprabhaNewsNetwork | Updated : Nov 09 2023, 01:02 AM IST

ಸಾರಾಂಶ

ರೈತರಿಗೆ ಸಾಲ ತುಂಬುವಂತೆ ಒತ್ತಾಯಿಸಿ ನೋಟಿಸ್‌ ನೀಡಿದರೆ ಅಂತಹ ಬ್ಯಾಂಕ್‌ಗಳ ವಿರುದ್ಧ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಅಲ್ಲದೆ, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಎಚ್ಚರಿಕೆ ನೀಡಿದರು.

ಕನ್ನಡಪ್ರಭ ವಾರ್ತೆ ಧಾರವಾಡ

ರೈತರಿಗೆ ಸಾಲ ತುಂಬುವಂತೆ ಒತ್ತಾಯಿಸಿ ನೋಟಿಸ್‌ ನೀಡಿದರೆ ಅಂತಹ ಬ್ಯಾಂಕ್‌ಗಳ ವಿರುದ್ಧ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಅಲ್ಲದೆ, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಎಚ್ಚರಿಕೆ ನೀಡಿದರು.

ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ನೂತನ ಸಭಾಂಗಣದಲ್ಲಿ ಬುಧವಾರ ಬ್ಯಾಂಕರ್ಸ್‌ಗಳ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಮಿತಿ ಸಭೆ ಮತ್ತು ಜಿಲ್ಲಾ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇಡೀ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರ ಪೀಡಿತ ಎಂದು ಸರ್ಕಾರ ಘೋಷಿಸಿದೆ. ರೈತರಿಗೆ ಸಾಲ ತುಂಬುವಂತೆ ಒತ್ತಾಯಿಸಿ, ಯಾವುದೇ ನೋಟಿಸ್ ನೀಡುವಂತಿಲ್ಲ. ಈ ಕುರಿತು ಈಗಾಗಲೇ ಸೂಚನೆ ನೀಡಲಾಗಿದೆ. ರಾಜ್ಯ ಮಟ್ಟದ ಬ್ಯಾಂಕರ್ಸ್ ಸಮಿತಿಯು ಎಲ್ಲ ಬ್ಯಾಂಕ್‌ಗಳಿಗೆ ತಿಳಿಸಿದೆ. ಆದರೂ ಕೆಲವು ಬ್ಯಾಂಕ್ ಮ್ಯಾನೇಜರ್ ಅವರು ರೈತರಿಗೆ ನೋಟಿಸ್ ನೀಡುತ್ತಿವೆ. ಈ ಕುರಿತು ದೂರುಗಳು ಬಂದಿವೆ. ಯಾವುದಾದರೂ ಬ್ಯಾಂಕ್‌ಗಳು ನೋಟಿಸ್‌ ನೀಡಿದರೆ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದರು.

ಸರ್ಕಾರ ಇಡೀ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಿದೆ. ರೈತರು ಬೆಳೆಸಾಲವನ್ನು ಕಾಲಮಿತಿಯಲ್ಲಿ ಪುನರ್ ರಚಿಸಬೇಕು ಎಂದರು.

ವಿಳಂಬ ಸಲ್ಲದು:

ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಇಲಾಖೆ ಶಿಫಾರಸು ಬಂದ ತಕ್ಷಣ ವಿಳಂಬವಿಲ್ಲದೆ ಸಾಲ ಮಂಜೂರಿ ಆಗಬೇಕು. ಪ್ರತಿ ಬ್ಯಾಂಕ್‌ಗಳಿಗೆ ನೀಡಿದ ಗುರಿಯ ಪ್ರಗತಿಯನ್ನು ಪ್ರತಿಯೊಬ್ಬರು ಸಾಧಿಸಬೇಕು ಎಂದರು.

ಕೇಂದ್ರ ಸರ್ಕಾರದ ಯೋಜನೆಗಳ ಅನುಷ್ಠಾನದಲ್ಲಿ ನಿಧಾನ ಮಾಡಬಾರದು. ಸರ್ಕಾರದ ಸಾಲ ಸೌಲಭ್ಯ, ಸಹಾಯಧನ ಫಲಾನುಭವಿಗಳಿಗೆ ಸಕಾಲದಲ್ಲಿ ಸಿಗುವಂತೆ ಮಾಡುವುದು ಎಲ್ಲ ಬ್ಯಾಂಕ್ ವ್ಯಸ್ಥಾಪಕರ ಜವಾಬ್ದಾರಿ ಆಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಕೆವಿಜಿಬಿ ಬ್ಯಾಂಕ್ ಶಾಖೆಗಳು ಹೆಚ್ಚಾಗಿವೆ. ಸಿಡಿ ರೇಶಿಯೋ ಪ್ರಮಾಣ ಶೇ. 44ರಷ್ಟಿದೆ. ಇದು ಅತ್ಯಂತ ಕಡಿಮೆ ಇದ್ದು, ಜಿಲ್ಲಾ ಅಗ್ರಣೀಯ ಬ್ಯಾಂಕ್ ವ್ಯವಸ್ಥಾಪಕರು ಕೆವಿಜಿಬಿ ಬ್ಯಾಂಕ್ ಹಿರಿಯ ಅಧಿಕಾರಿಗಳ, ಶಾಖಾ ವ್ಯವಸ್ಥಾಪಕರ ಪ್ರತ್ಯೇಕ ಸಭೆ ಜರುಗಿಸಿ, ಈ ಕುರಿತು ಪ್ರಗತಿಗಾಗಿ ಕ್ರಮ ವಹಿಸಬೇಕೆಂದು ನಿರ್ದೇಶಿಸಿದರು.

ಜಿಲ್ಲೆಯಲ್ಲಿ ಬರಗಾಲ ಇರುವುದರಿಂದ ಬ್ಯಾಂಕ್ ಅಧಿಕಾರಿಗಳು ಸಾರ್ವಜನಿಕರೊಂದಿಗೆ ಸಹನೆ ಮತ್ತು ಕಾಳಜಿಯಿಂದ ವರ್ತಿಸಬೇಕು. ಸಾಲ ವಸೂಲಾತಿ, ಹೊಸ ಸಾಲ ವಿತರಣೆ, ಸಬ್ಸಿಡಿ, ಪರಿಹಾರ ಹಣ ಜಮೆ ಸೇರಿದಂತೆ ವಿವಿಧ ಕಾರ್ಯಚಟುವಟಿಕೆಗಳ ಕುರಿತು ಕಾಲಕಾಲಕ್ಕೆ ಸರ್ಕಾರ, ರಾಜ್ಯ ಮಟ್ಟದ ಬ್ಯಾಂಕರ್ಸ್ ಸಮಿತಿ ಮತ್ತು ಜಿಲ್ಲಾ ಬ್ಯಾಂಕರ್ಸ್ ಸಲಹಾ ಸಮಿತಿ ನೀಡುವ ಸಲಹೆ, ಮಾರ್ಗಸೂಚಿಗಳನ್ನು ಜಿಲ್ಲೆಯ ಎಲ್ಲ ಬ್ಯಾಂಕ್ ಶಾಖೆಗಳು ಪಾಲಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಅಗ್ರಣೀಯ ಬ್ಯಾಂಕ್ ವ್ಯವಸ್ಥಾಪಕ ಪ್ರಭುದೇವ್ ಎನ್.ಜಿ. ಮಾತನಾಡಿ, ಜಿಲ್ಲೆಯ ಎಲ್ಲ ಬ್ಯಾಂಕ್‌ಗಳು ಗುರಿಗೆ ಅನುಗುಣವಾಗಿ ಕೆಲಸ ಮಾಡುತ್ತಿವೆ. ಸಬ್ಸಿಡಿ ಹಣವನ್ನು ಸಂಬಂಧಿಸಿದ ಫಲಾನುಭವಿಗಳ ಖಾತೆಗೆ ಬಿಡುಗಡೆಯಾದ ತಕ್ಷಣ ಜಮೆ ಮಾಡಬೇಕ ಎಂದು ಹೇಳಿದರು.

ನಬಾರ್ಡ್ ಡಿಡಿಎಂ ಮಯೂರ ಕಾಂಬಳೆ ಮಾತನಾಡಿ, 2023-24ರಲ್ಲಿನ ಪಿಎಲ್.ಪಿಯ ₹14,400 ಕೋಟಿ ಗುರಿ ಇದೆ. ಇದರಲ್ಲಿ ಸೆಪ್ಟೆಂಬರ್ 2023ರ ವರೆಗೆ ₹6642ರಷ್ಟು ಸಾಧಿಸಲಾಗಿದೆ. 2024-25ನೇ ಸಾಲಿಗೆ ₹14557 ಕೋಟಿ ಗುರಿ ಹೊಂದಲಾಗಿದೆ ಎಂದರು.

ರಿಸರ್ವ್ ಬ್ಯಾಂಕ್ ಪ್ರತಿನಿಧಿ ಈಲ್ಲಾ ಸಾಹೂ ಮಾತನಾಡಿ, ಆದಷ್ಟು ಬೇಗ ಕೃಷಿ ಸಾಲ ಪುನರ್ ರಚನೆ ಮಾಡಿ, ಬರಗಾಲದ ಸೌಲಭ್ಯಗಳನ್ನು ಕೃಷಿಕರಿಗೆ ತಲುಪಿಸಬೇಕು ಎಂದು ಹೇಳಿದರು. ಬ್ಯಾಂಕ್ ಆಪ್ ಬರೋಡಾ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಶ್ರೀಹರಿ ವೇದಿಕೆಯಲ್ಲಿ ಇದ್ದರು.

ಸಭೆಯಲ್ಲಿ ಧಾರವಾಡ ಜಿಲ್ಲಾ ನಬಾರ್ಡ್ ರೂಪಿಸಿರುವ 2024-25ನೇ ಸಾಲಿನ ಪೋಟೇಷನಲ್‌ ಲಿಂಕ್ಡ್‌ ಕ್ರೆಡಿಟ್ ಪ್ಲಾನ್ ಬಿಡುಗಡೆಗೊಳಿಸಲಾಯಿತು.

ಸಭೆಯಲ್ಲಿ ಜಿಲ್ಲೆಯ ವಿವಿಧ ಬ್ಯಾಂಕ್‌ಗಳ ಮುಖ್ಯಸ್ಥರು, ವಿವಿಧ ನಿಗಮ, ಮಂಡಳಿ, ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ನಗರಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸಿದ್ದರು.

Share this article