- ಸಚಿವ ಡಾ.ಅಜಯ್ ಧರಂಸಿಂಗ್ ಭರವಸೆ । ಕೇಂದ್ರ ಸರ್ಕಾರದ ಗಮನ ಸೆಳೆಯಲೂ ಯೋಜನೆ
ಜಿಲ್ಲೆಯಲ್ಲಿ ಶೇ.70 ಕ್ಕು ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದ್ದು, ಶೀಘ್ರವೇ ವರದಿಯನ್ನು ಸಲ್ಲಿಸಿ, ಸಿಎಂ ಜೊತೆ ಸಮಾಲೋಚನೆ ನಡೆಸಿ ರೈತರಿಗೆ ಬರ ಪರಿಹಾರ ಒದಗಿಸಲು ಕ್ರಮ ವಹಿಸುವುದಾಗಿ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಅಜಯ್ ಧರಂಸಿಂಗ್ ತಿಳಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಪರ ಸಭೆಗಳನ್ನು ನಡೆಸುವುದಷ್ಟೇ ಅಲ್ಲದೆ ಕಳೆದ 8 ದಿನಗಳ ಹಿಂದೆ ರಾಯಚೂರು ಜಿಲ್ಲೆಯ ಪ್ರತಿಯೊಂದು ತಾಲೂಕಿಗೂ ಖುದ್ದಾಗಿ ಭೇಟಿ ನೀಡಿ ಬರ ಪರಿಸ್ಥಿತಿಯನ್ನು ಪರಿಶೀಲಿಸಲಾಗಿದೆ. ರೈತರು ಎದುರಿಸುತ್ತಿರುವ ಸಮಸ್ಯೆಗಳು, ಕಷ್ಟಗಳು ಮತ್ತು ಸಂಕಷ್ಟಗಳನ್ನು ಹತ್ತಿರದಿಂದ ಆಲಿಸಿ, ವರದಿಯನ್ನು ಸಿದ್ಧಪಡಿಸಲಾಗುತ್ತಿದೆ. ಕೂಡಲೇ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.ಅನುದಾನ ಹಂಚಿಕೆ ಮತ್ತು ಅಭಿವೃದ್ಧಿ: ಡಾ. ನಂಜುಂಡಪ್ಪ ವರದಿ ಹಾಗೂ ಪ್ರೊ.ಗೋವಿಂದರಾವ್ ಸಮಿತಿ ವರದಿಯ ಕಾಂಪ್ರಹೆನ್ಸಿವ್ ಕಾಂಪೊಸಿಟ್ ಡೆವಲಪ್ಮೆಂಟ್ ಇಂಡೆಕ್ಸ್ ಆಧಾರದ ಮೇಲೆಯೇ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಅನುದಾನ ಹಂಚಿಕೆಯಾಗುತ್ತದೆ. ರಾಯಚೂರು ಜಿಲ್ಲೆಯ ವಿಶ್ವವಿದ್ಯಾಲಯಕ್ಕೆ ಅಗತ್ಯ ಅನುದಾನ ನೀಡಲಾಗಿದ್ದು, ಯಾವುದೇ ತಾರತಮ್ಯ ಮಾಡದೆ ರಾಯಚೂರು, ಕಲ್ಯಾಣ ಕರ್ನಾಟಕ ಹಾಗೂ ಇಡೀ ರಾಜ್ಯದ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು.
ಡಾ.ನಂಜುಂಡಪ್ಪ ವರದಿ ಮೇಲೆ ಅನುದಾನ ಹಂಚಿಕೆ: ಡಾ.ನಂಜುಂಡಪ್ಪ ವರದಿಯ ಆಧಾರದ ಮೇಲೆ ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ ಸಿಡಿಐ ಸೂಚ್ಯಂಕದಂತೆ ಅನುದಾನ ಹಂಚಿಕೆ ಮಾಡಲಾಗುತ್ತಿದೆ. ರಾಯಚೂರು ಹಾಗೂ ಕಲ್ಬುರ್ಗಿ ನಗರ ಮಟ್ಟದ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೆಲವು ತಾಲೂಕುಗಳಿಗೆ ಅನುದಾನ ಹಂಚಿಕೆಯಲ್ಲಿ ವ್ಯತ್ಯಾಸವಾಗಿರುವುದು ಮತ್ತು ಅನ್ಯಾಯವಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಪ್ರೊ.ಗೋವಿಂದರಾವ್ ಅವರ ವರದಿಯ ಉಲ್ಲೇಖಗಳನ್ನೂ ಪರಿಶೀಲಿಸಿ, ಗ್ರಾಮೀಣ ಹಾಗೂ ತಾಲೂಕು ಮಟ್ಟದ ಅಸಮತೋಲನವನ್ನು ಸರಿಪಡಿಸಲು ಸರ್ಕಾರಿ ಮಟ್ಟದಲ್ಲಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಬಾಕ್ಸ್
ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮ ಮಾಡುವುದಕ್ಕಿಂತ ಪೂರ್ವದಲ್ಲಿ ಪರವಾನಿಗೆ ಪಡೆದುಕೊಳ್ಳುವುದಾಗಿ ಹೊಸ ಕಾನೂನು ಮಾಡಿದ್ದು ಇದು ಕೇವಲ ಆರ್ ಎಸ್ ಎಸ್ ಗಾಗಿ ಅಂತ ಮಾಡಿಲ್ಲ ಎಂದು ಸಚಿವ ಡಾ.ಅಜಯ್ ಧರ್ಮಸಿಂಗ್ ಸ್ಪಷ್ಟಪಡಿಸಿದರು.
---
-----------------