ಕನ್ನಡಪ್ರಭ ವಾರ್ತೆ ಬಳ್ಳಾರಿಕೇಂದ್ರ ಸರ್ಕಾರಕ್ಕೆ ರಾಜ್ಯದಿಂದ ₹4 ಲಕ್ಷ ಕೋಟಿ ತೆರಿಗೆ ಹಣ ಪಾವತಿಯಾಗುತ್ತಿದೆ. ರಾಜ್ಯದ ಪಾಲು ಕೇವಲ ₹30 ಸಾವಿರ ಕೋಟಿ ಬರುತ್ತಿದೆ. ನಾವು ಒಕ್ಕೂಟ ವ್ಯವಸ್ಥೆಯಲ್ಲಿ ಇದ್ದೇವೆ. ಬರ ಪರಿಹಾರ ನಮ್ಮ ಹಕ್ಕು. ನ್ಯಾಯಸಮ್ಮತವಾಗಿ ನೀಡಬೇಕಿದೆ ಎಂದು ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ತಿಳಿಸಿದರು.
ಮಧ್ಯಂತರ ಬೆಳೆ ಹಾನಿ ಪರಿಹಾರಕ್ಕೆ ಈಗಾಗಲೇ ₹343 ಕೊಟಿ ಬಿಡುಗಡೆಯಾಗಿದೆ. ಅದೇ ರೀತಿ ಶೀಘ್ರ ಬರ ಪರಿಹಾರ ಹಣ ಕೂಡ ರೈತರ ಖಾತೆಗೆ ನೇರವಾಗಿ ಸೇರಲಿದೆ. ಅದಕ್ಕೆ ಪೂರಕವಾಗಿ ಶೇ. 100ರಷ್ಟು ರೈತರ ವಿವರ ಫ್ರುಟ್ಸ್ ಐಡಿಗೆ ದಾಖಲಿಸುವ, ಕೆವೈಸಿ ನೋಂದಾಯಿಸುವ ಕಾರ್ಯ ಅಭಿಯಾನದ ಸ್ವರೂಪದಲ್ಲಿ ಮಾಡಲಾಗುತ್ತಿದೆ ಎಂದರು.ರಾಜ್ಯದಲ್ಲಿ ಕೃಷಿ ಹಾಗೂ ಜಲಾನಯನ ಇಲಾಖೆ ಮೂಲಕ 1.43 ಕೊಟಿ ರೈತರಿಗೆ ಒಟ್ಟಾರೆ ₹5388 ಕೋಟಿ ಸೌಲಭ್ಯ ತಲುಪಿದಂತಾಗುತ್ತದೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಸೇರಿದಂತೆ ವಿವಿಧ ಯೋಜನೆಗಳ ಮೂಲ ₹75 ಸಾವಿರ ಕೋಟಿ ಆರ್ಥಿಕ ನೆರವು ರಾಜ್ಯದ ಜನಸಾಮಾನ್ಯರಿಗೆ ನೇರವಾಗಿ ತಲುಪುತ್ತಿದೆ. ಇದು ಸಾಮಾಜಿಕ ಸಬಲೀಕರಣ ಸರ್ಕಾರದ ಮೂಲ ಆಶಯ ಎಂದರು.
ವಿಮೆ ನೋಂದಣಿ ಹೆಚ್ಚಿಸಲು ಸೂಚನೆ:ಜಿಲ್ಲೆಯಲ್ಲಿ ಬೆಳೆ ವಿಮೆ ನೋಂದಣಿ ತುಂಬಾ ಕಡಿಮೆ ಇದ್ದು, ಇನ್ನು ಮುಂದೆ ಬೆಳೆ ವಿಮೆ ಅನುಕೂಲಗಳ ಬಗ್ಗೆ ಪ್ರತಿ ಗ್ರಾಮದಲ್ಲಿ ಜಾಗೃತಿ ಮೂಡಿಸಿ ನೋಂದಣಿ ಹೆಚ್ಚಿಸಿ ಎಂದರು.ಬೆಳೆ ವಿಮೆ ಸೌಲಭ್ಯ ಕುರಿತು ಜಿಲ್ಲೆಯ ಎಲ್ಲ ತಾಲೂಕಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕರಪತ್ರಗಳ ಮೂಲಕ ಸಾಕಷ್ಟು ಪ್ರಚಾರ ನೀಡಬೇಕು ಹಾಗೂ ರೈತರು ಬೆಳೆವಿಮೆ ನೋಂದಣಿಗೆ ಮನವೊಲಿಸಬೇಕು. ಇದರಿಂದ, ಬೆಳೆಹಾನಿಗೊಳಗಾದಗ ಸರ್ಕಾರದಿಂದ ನೆರವು ಸಿಗಲಿದೆ ಎಂದರು.ರಾಜ್ಯದಲ್ಲಿ ಈ ಬಾರಿ ₹200 ಕೋಟಿ ವೆಚ್ಚದಲ್ಲಿ 32000 ಕೃಷಿಹೊಂಡ ನಿರ್ಮಾಣ ಮಾಡಲಾಗುವುದು. ಟೈಲ್ಯಾಂಡ್ಗಳಲ್ಲಿ ಕೃಷಿ ಹೊಂಡ ನಿರ್ಮಾಣಕ್ಕೆ ಆದ್ಯತೆ ನೀಡಿ. ಅಲ್ಲದೆ ಇಂತಹ ಪ್ರದೇಶಗಳ ರೈತರಿಗೂ ಬೆಳೆ ಪರಿಹಾರ ಒದಗಿಸಲು ಇರುವ ತೊಡಕು ಬಗೆಹರಿಸಿ ಎಂದರು.
ಬರ ಪರಿಸ್ಥಿತಿ ವೀಕ್ಷಣೆ:
ಹಲಕುಂದಿಯ ಮರೀಗೌಡ, ಮಲ್ಲಿಕಾರ್ಜುನ ಹಾಗೂ ಶಿವಪ್ಪ ಎಂಬ ರೈತರ ಸೂರ್ಯಕಾಂತಿ, ತೊಗರಿ ಬೆಳೆ ಜಮೀನುಗಳಿಗೆ ಭೇಟಿ ನೀಡಿ, ಹಾನಿಯಾದ ಬೆಳೆಯನ್ನು ಪರಿಶೀಲಿಸಿದ ಸಚಿವರು, ಬೆಳೆವಿಮೆ ಮಾಡಿಸಿಕೊಂಡಿರುವಿರಾ ಎಂದು ವಿಚಾರಿಸಿದರು.ಬೆಳೆವಿಮೆ ಮಾಡಿಸಿಕೊಂಡರೆ ಬೆಳೆ ಹಾನಿಯಾದಾಗ ಹಾಗೂ ಬರ ನಷ್ಟ ಹೊಂದಿದಾಗ ಸರ್ಕಾರದಿಂದ ನೆರವು ಸಿಗಲಿದೆ. ಆದ್ದರಿಂದ ಪ್ರತಿಯೊಬ್ಬ ರೈತನು ಬೆಳೆ ವಿಮೆಗೆ ನೋಂದಾಯಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.