ಆಲಮಟ್ಟಿ: ಔಷಧ ವ್ಯಾಪಾರವು ಸೇವಾ ಮನೋಧರ್ಮ ವ್ಯಾಪಾರವಾಗಿದ್ದು, ಸಾರ್ವಜನಿಕರ ಆರೋಗ್ಯ ಕಾಪಾಡುವಲ್ಲಿ ಔಷಧ ವ್ಯಾಪಾರಿಗಳ ಪಾತ್ರ ಮಹತ್ವದ್ದಾಗಿದೆ. ಆದ್ದರಿಂದ ಔಷಧ ವ್ಯಾಪಾರಿಗಳು ಎಚ್ಚರಿಕೆಯಿಂದ ವಹಿವಾಟು ನಡೆಸಬೇಕು ಎಂದು ವಿಜಯಪುರದ ಸಹಾಯಕ ಔಷಧ ನಿಯಂತ್ರಕ ಆರ್. ಪರಶುರಾಮ ಹೇಳಿದರು.
ಔಷಧ ಕ್ಷೇತ್ರದಲ್ಲಿ ನಿತ್ಯವೂ ಹೊಸ ಹೊಸ ಸಂಶೋಧನೆಗಳು ನಡೆಯುತ್ತಿರುತ್ತವೆ. ಸಾಕಷ್ಟು ಬದಲಾವಣೆಗಳು ಆಗುತ್ತವೆ. ಅವುಗಳ ಬಗ್ಗೆ ಕಾರ್ಯಾಗಾರ ಏರ್ಪಡಿಸಿರುವುದರಿಂದ ಔಷಧ ವ್ಯಾಪಾರಸ್ಥರಿಗೆ ಪರಿಣತಿ ಹೊಂದಲು ಸಹಾಯವಾಗಲಿದೆ ಎಂದರು.
ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಕೆ.ಆರ್.ಎತ್ತಿನಮನಿ ಮಾತನಾಡಿ, ಆನ್ಲೈನ್ನಲ್ಲಿ ಔಷಧ ಮಾರಾಟಕ್ಕೆ ನಿರ್ಬಂಧ ವಿಧಿಸಬೇಕು. ಇದು ಜನರ ಆರೋಗ್ಯದ ಮೇಲೆ ಪರಿಣಾಮ ಉಂಟುಮಾಡಲಿದೆ ಎಂದ ಅವರು, ಔಷಧ ವ್ಯಾಪಾರಿಗಳ ಹಿತ ಕಾಪಾಡಲು ಸಂಘ ಯಾವಾಗಲೂ ಬದ್ಧವಾಗಿರುತ್ತದೆ ಎಂದರು.ಸಹಾಯಕ ಔಷಧ ನಿಯಂತ್ರಕಿ ಶ್ವೇತಾ ನಾಗಠಾಣ, ಮನೋವೈದ್ಯಶಾಸ್ತ್ರದ ಪ್ರಾಧ್ಯಾಪಕ ಡಾ.ಸಂತೋಷ ರಾಮದುರ್ಗ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಂಕಿತ ಅಧಿಕಾರಿ ಆರ್.ಎಸ್. ಬಿರಾದಾರ, ಔಷಧ ವ್ಯಾಪಾರಸ್ಥರ ಸಂಘದ ಉಪಾಧ್ಯಕ್ಷ ರಮೇಶ ಯಳಮೇಲಿ, ಗೌರವ ಕಾರ್ಯದರ್ಶಿ ಸಂಗಮೇಶ ಗುಡ್ಡೋಡಗಿ, ಡಾ ಸತೀಶ ಘಾಟಗೆ ಮತ್ತೀತರರು ಇದ್ದರು. ಉತ್ತಮ ಔಷಧ ವ್ಯಾಪಾರಿಗಳನ್ನು ಇದೇ ವೇಳೆ ಸನ್ಮಾನಿಸಲಾಯಿತು.