
ವಿಘ್ನೇಶ್ ಎಂ. ಭೂತನಕಾಡು
ಯುದ್ಧದ ನಡುವೆ ದುಬೈನಲ್ಲಿ ಸಾಕಷ್ಟು ಕನ್ನಡಿಗರು ಸಿಲುಕಿದ್ದಾರೆ. ಆದರೆ ಇಲ್ಲಿ ಯಾವುದೇ ತೊಂದರೆ ಇಲ್ಲ. ಎಲ್ಲರಿಗೂ ರಕ್ಷಣೆಯಿದೆ ಎಂದು ಕೊಡಗಿನ ಕುಂಜಿಲ ಗ್ರಾಮದ ಕುಂಡಂಡ ರಫೀಕಲಿ ಹೇಳುತ್ತಾರೆ.
ದುಬೈನಿಂದ ‘ಕನ್ನಡಪ್ರಭ’ದೊಂದಿಗೆ ಮಾತನಾಡಿರುವ ಅವರು, ಇರಾನ್, ದುಬೈ ನಲ್ಲಿರುವ ಅಮೆರಿಕಾದ ಬೇಸ್ ಕ್ಯಾಂಪ್ ಗಳ ಮೇಲೆ ದಾಳಿ ಮಾಡಿದೆ ಅಷ್ಟೇ. ಆದರೆ ಇಲ್ಲಿನ ನಾಗರಿಕರಿಗೆ ಅಥವಾ ಕಟ್ಟಡಗಳಿಗಾಗಿ ಯಾವುದೇ ಹಾನಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ವಿಶ್ವದ ಏಕೈಕ ಸೆವೆನ್ ಸ್ಟಾರ್ ಬುರ್ಜ್ ಲಾರ ಗೆ ಕೂಡ ದಾಳಿ ಮಾಡಲಾಗಿದೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ. ಆದರೆ ಅಂತಹ ಘಟನೆಗಳು ಇಲ್ಲಿ ನಡೆದಿಲ್ಲ. ಹೊರಗಿನಿಂದ ಬರುವ ಮಿಸೈಲ್ ಗಳನ್ನು ಇಲ್ಲಿನ ಸೇನೆ ಹೊಡೆದುರುಳಿಸುತ್ತಿದೆ ಎಂದು ಅಲ್ಲಿನ ಪರಿಸ್ಥಿತಿ ವಿವರಿಸಿದರು.
ಪ್ರವಾಸಿಗರ ವೆಚ್ಚ ಸರ್ಕಾರದ್ದು:
ಇಲ್ಲಿಗೆ ಬಂದಿರುವ ಪ್ರವಾಸಿಗರಿಗೆ ಇದೀಗ ವಿಮಾನ ರದ್ದಾಗಿರುವುದರಿಂದ ಹೊಟೇಲ್ ಹಾಗೂ ಊಟದ ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದು ಘೋಷಿಸಿದೆ. ಅದಲ್ಲದೆ ಇಲ್ಲಿನ ಕನ್ನಡ ಸಂಘಟನೆಗಳು ಸೇರಿ ತೊಂದರೆಗೆ ಒಳಗಾಗಿರುವ ಕನ್ನಡಿಗ ಪ್ರವಾಸಿಗರಿಗೆ ಬೇಕಾದ ವ್ಯವಸ್ಥೆಗಳನ್ನು ಮಾಡುವ ಮೂಲಕ ಧೈರ್ಯ ತುಂಬುವ ಕೆಲಸ ಮಾಡಿದ್ದೇವೆ ಎನ್ನುತ್ತಾರೆ ರಫೀಕಲಿ.ದುಬೈಗೆ ಬಂದಿರುವ ಕನ್ನಡಿಗರು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಯನ್ನು ಹಾಕಬೇಡಿ. ಇಲ್ಲಿನ ಅಧಿಕೃತ ಚಾಲನೆಗಳು ನೀಡುವ ಮಾಹಿ ಹಾಕಬೇಕು. ಇಲ್ಲಿನ ಕಾನೂನು ತೀವ್ರ ಬಿಗಿಯಾಗಿದೆ ಇದರ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಇಲ್ಲದಿದ್ದರೆ ಇಲ್ಲಿನ ಸರ್ಕಾರದ ಕ್ರಮಕ್ಕೆ ಒಳಗಾಗಬೇಕಾಗುತ್ತದೆ ಎಂದು ಹೇಳುತ್ತಾರೆ.
ಕಳೆದ 18 ವರ್ಷದಿಂದ ದುಬೈ ನಲ್ಲಿ ನೆಲೆಸಿರುವ ರಫೀಕಲಿ ಕೊಡಗು ಜಿಲ್ಲೆಯವರು.ಬಾಕ್ಸ್...
ವಿಮಾನ ಹಾರಾಟ ಇಲ್ಲ ಅಷ್ಟೇ: ಎಡಿಕೇರಿ ಪ್ರಸನ್ನಕಾರ್ಯಕ್ರಮವೊಂದಕ್ಕೆ ದುಬೈಗೆ ಆಗಮಿಸಿದ್ದೆ. ಆದರೆ ದುಬೈನಲ್ಲಿ ಏರ್ ಸ್ಟ್ರೈಕ್ ಇರುವ ಹಿನ್ನೆಲೆಯಲ್ಲಿ ನಾವು ಇಲ್ಲೇ ಸಿಲುಕಿಕೊಂಡಂತಾಗಿದೆ. ವಿಮಾನ ಹಾರಾಟ ಇಲ್ಲ ಅಷ್ಟೇ . ಉಳಿದ ವ್ಯವಸ್ಥೆ ಇದೆ ಎಂದು ಬೆಂಗಳೂರಿನ ಉದ್ಯಮಿ ಕೊಡಗು ಮೂಲದ ಎಡಿಕೇರಿ ಪ್ರಸನ್ನ ಹೇಳಿದ್ದಾರೆ.
‘ಕನ್ನಡಪ್ರಭ’ ಜೊತೆಗೆ ಮಾತನಾಡಿರುವ ಅವರು, ಇಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ. ಪರಿಸ್ಥಿತಿ ಎಂದಿನಂತೆ ಇದೆ. ಆದರೆ ವಿಮಾನ ಹಾರಾಟ ಇಲ್ಲ. ಇದರಿಂದ ನಾವೆಲ್ಲರೂ ಇಲ್ಲಿ ಸಿಲುಕಿದ್ದೇವೆ. ಇನ್ನೆರಡು ದಿನಗಳಲ್ಲಿ ವಿಮಾನ ಹಾರಾಟ ಆರಂಭವಾಗಿ ನಾವು ಭಾರತಕ್ಕೆ ಹಿಂತಿರುಗುವ ಸಾಧ್ಯತೆ ಇದೆ ಎಂದು ಹೇಳುತ್ತಾರೆ.ಇಲ್ಲಿ ಆಹಾರ, ತಂಗುವ ವ್ಯವಸ್ಥೆಗೆ ಯಾವುದೇ ಸಮಸ್ಯೆ ಇಲ್ಲ. ಎಂದಿನಂತೆಯೇ ಇದೆ. ಇಲ್ಲಿನ ಕನ್ನಡ ಸಂಘಟನೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಪ್ರವಾಸಿಗರಿಗೆ ಅಗತ್ಯ ಸೇವೆಗಳನ್ನು ನೀಡುತ್ತಿದ್ದಾರೆ ಯಾವುದೇ ಆಂತಕ ಪಡುವ ಅಗತ್ಯ ಇಲ್ಲ ಎನ್ನುತ್ತಾರೆ ಪ್ರಸನ್ನ.