ಇತ್ತೀಚಿನ ದಿನಗಳಲ್ಲಿ ಪುಸ್ತಕಗಳನ್ನು ಓದುವ ಅಭ್ಯಾಸ ಕಡಿಮೆಯಾಗುತ್ತಿದೆ. ಓದುವ ಬದಲಾಗಿ ಮೊಬೈಲ್ ನಲ್ಲಿ ರೀಲ್ಸ್ ಮಾಡುತ್ತಾ, ನೋಡುತ್ತಾ ಕಾಲ ಕಳೆದರೆ ಯಾವೊಂದು ಲಾಭವಾಗುವುದಿಲ್ಲ. ನಮ್ಮ ಮೆದುಳು ಕೂಡಾ ಹರಿತವಾಗುವುದಿಲ್ಲ. ಮೊಬೈಲ್ ಗೀಳಿನಿಂದಾಗಿ ಮಕ್ಕಳಲ್ಲಿ ಕ್ರಿಯಾಶೀಲತೆ ಕಡಿಮೆಯಾಗುತ್ತಿದೆ.
ಕನ್ನಡಪ್ರಭ ವಾರ್ತೆ ಕುದೂರು
ಮಕ್ಕಳು ಚಿಕ್ಕಂದಿನಿಂದಲೇ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳದೇ ಹೋದರೆ ಭವಿಷ್ಯದಲ್ಲಿ ತೊಂದರೆಯಾಗುತ್ತದೆ. ಇದರಿಂದ ವಿದ್ಯಾರ್ಥಿಗಳು ನಿಶ್ಚಿತ ಗುರಿ ಮುಟ್ಟಲಾಗುವುದಿಲ್ಲ ಎಂದು ಪ್ರಾಚಾರ್ಯ ಕಾಂತರಾಜು ಅಭಿಪ್ರಾಯಪಟ್ಟರು.
ಕುದೂರು ಗ್ರಾಮದ ಶ್ರೀಮಹಂತೇಶ್ವರ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಪುಸ್ತಕಗಳನ್ನು ಓದುವ ಅಭ್ಯಾಸ ಕಡಿಮೆಯಾಗುತ್ತಿದೆ. ಓದುವ ಬದಲಾಗಿ ಮೊಬೈಲ್ ನಲ್ಲಿ ರೀಲ್ಸ್ ಮಾಡುತ್ತಾ, ನೋಡುತ್ತಾ ಕಾಲ ಕಳೆದರೆ ಯಾವೊಂದು ಲಾಭವಾಗುವುದಿಲ್ಲ. ನಮ್ಮ ಮೆದುಳು ಕೂಡಾ ಹರಿತವಾಗುವುದಿಲ್ಲ. ಮೊಬೈಲ್ ಗೀಳಿನಿಂದಾಗಿ ಮಕ್ಕಳಲ್ಲಿ ಕ್ರಿಯಾಶೀಲತೆ ಕಡಿಮೆಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕನ್ನಡದ ಉಪನ್ಯಾಸಕ ತಾಯಣ್ಣ ಮಾತನಾಡಿ, ವಯಸ್ಸಿನಿಂದ ಯಾರೂ ದೊಡ್ಡವರಾಗುವುದಿಲ್ಲ. ಬದಲಾಗಿ ಜ್ಞಾನ ಮತ್ತು ಸಂಸ್ಕಾರಗಳಿಂದ ದೊಡ್ಡವರೆನಿಸಿಕೊಳ್ಳುತ್ತಾರೆ. ಇದು ಸ್ಪರ್ಧಾತ್ಮಕ ಜಗತ್ತು. ಇಲ್ಲಿ ಗೆದ್ದವರಿಗೆ ಮಾತ್ರ ಹೊಗಳಿಕೆ, ಸನ್ಮಾನ ಸತ್ಕಾರಗಳೆಲ್ಲಾ. ಆದ್ದರಿಂದ ಗೆಲುವಿನ ಪಯಣಕ್ಕೆ ಎಲ್ಲರೂ ಶ್ರಮಿಸಬೇಕು. ಜೀವನದ ಲೆಕ್ಕವಿರದ ದಾರಿಗಳಲ್ಲಿ ಪ್ರತಿಯೊಬ್ಬರಿಗೂ ಗೆಲುವು ಇದ್ದೇ ಇರುತ್ತದೆ ಎಂದು ಹೇಳಿದರು
ಸಂಸ್ಕೃತ ಶಿಕ್ಷಕ ರಮೇಶ್ ಮಾತನಾಡಿ, ಬಡತನ ಎನ್ನುವುದು ನಮ್ಮನ್ನು ಗಟ್ಟಿಗೊಳಿಸಲು ಭಗವಂತ ಕೊಟ್ಟ ವರ ಎಂದು ಭಾವಿಸಬೇಕು. ಅದರಿಂದ ಅನುಭವ ಗಟ್ಟಿಯಾದ ನಂತರ ಬೇಕೂ ಎಂದರೂ ನಮಗೆ ಬಡತನ ನಮ್ಮ ಬಳಿ ಇರುವುದಿಲ್ಲ. ಏಕೆಂದರೆ ಗೆಲುವು ಮತ್ತು ಸಾಧನೆ ನಮ್ಮ ಬಳಿ ಇರುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯಿನಿ ಸಾವಿತ್ರಿಬಾಯಿ ವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.