ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಇತಿಹಾಸ ಹಿಂದೆ ನೂರಾರು ಜನರ ತ್ಯಾಗ, ಬಲಿದಾನ, ಸಾವಿರಾರು ಹೋರಾಟಗಳ ರಕ್ತಚರಿತ್ರೆ ಇದೆ. ಅಲ್ಲದೇ, ಶ್ರೀ ರಾಮ ಮಂದಿರ ಕನಸು ನನಸಾಗಲಿ ಎಂಬ ಕಾರಣಕ್ಕೆ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರು ಪ್ರಪಂಚದಾದ್ಯಂತ ಭಗವದ್ಗೀತೆಯ ಪ್ರಸಾರ ಮಾಡಿದರು. ಕೋಟಿ ಗೀತ ಲೇಖನ ಯಜ್ಞ ಆಂದೋಲನ ನಡೆಸುತ್ತಿದ್ದಾರೆ. ಹೀಗೆ ಅನೇಕರು ರಾಮ ಮಂದಿರದ ವಿಷಯದಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಇವರೆಲ್ಲರ ಶ್ರಮದಿಂದಾಗಿ ಇಂದು ಹಿಂದುಗಳ ಶತಮಾನದ ಕನಸು ಸಾಕಾರಗೊಳ್ಳುತ್ತಿದೆ ಎಂದು ಪುತ್ತಿಗೆ ಮಠದ ದಿವಾನರಾದ ಗೋಪಾಲಾಚಾರ್ ಹೇಳಿದ್ದಾರೆ.
ಪ್ರಧಾನಿಯಾಗಿದ್ದ ಪಿ.ವಿ.ನರಸಿಂಹರಾವ್, ಉತ್ತರಪ್ರದೇಶದ ಅಂದಿನ ಮುಖ್ಯಮಂತ್ರಿ ಕಲ್ಯಾಣ್ಸಿಂಗ್, ವಿಎಚ್ಪಿ ನಾಯಕರಾಗಿದ್ದ ಅಶೋಕ್ ಸಿಂಘಾಲ್ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಮಂದಿರವಲ್ಲೇ ಕಟ್ಟುವೆವು ಎಂಬುದು ಘೋಷಣೆ ಈಗ ಸಾಕಾರಗೊಂಡಿದೆ. ಕನಸು ನನಸಾಗುತ್ತಿದೆ ಎಂದರು.
ನಾವೆಲ್ಲರೂ ಸ್ಮರಣೆ ಮಾಡಬೇಕಾದ ಮುಖ್ಯ ವ್ಯಕ್ತಿ ಅಶೋಕ್ ಸಿಂಘಾಲ್. ಅವರಿಗೂ ಪುತ್ತಿಗೆ ಶ್ರೀಗಳಿಗೂ ನಂಟಿತ್ತು. ಧರ್ಮೋತ್ಥಾನ ಹಾಗೂ ರಾಮಮಂದಿರ ನಿರ್ಮಾಣದ ಬಗ್ಗೆ ಇವರಿಬ್ಬರೂ ಬಹಳಷ್ಟು ಚರ್ಚೆ ನಡೆಸಿದ್ದರು. ಶ್ರೀಗಳು ಗೀತೆ ಬರೆಯಲು ಪುಸ್ತಕ ಹಂಚುತ್ತಿದ್ದಾರೆ ಎಂದು ಹೇಳಿದರು.ಡಾ.ರವಿಕಿರಣ್ ಮಾತನಾಡಿ, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗುವ ಸಂಬಂಧ ಗಟ್ಟಿಯಾದ ನಿರ್ಣಯ ಕೈಗೊಂಡಿದ್ದು ಕರ್ನಾಟಕದಲ್ಲಿ. ಹಿಂದುಗಳು ಎಂದಿಗೂ ಸೋಲೊಪ್ಪಿಕೊಂಡವರಲ್ಲ. ಅವ್ಯಾಹತವಾಗಿ ಹಲವು ವರ್ಷಗಳ ಹೋರಾಟ ನಡೆಸಿದ ಪ್ರತೀಕವಾಗಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಿ ಪ್ರತಿಷ್ಠಾಪನೆಗೆ ಸಜ್ಜಾಗಿದೆ ಎಂದರು.
ಇದೇ ಸಂದರ್ಭ ಅಯೋಧ್ಯೆಯ ಕರಸೇವೆಯಲ್ಲಿ ಭಾಗವಹಿಸಿದ್ದ ಆರ್.ಕೆ. ಸಿದ್ದರಾಮಣ್ಣ, ಕೆ.ಸಿ.ನಟರಾಜ ಭಾಗವತ್, ಪ್ರೊ. ಪಿ.ವಿ. ಕೃಷ್ಣಭಟ್, ಎಸ್.ಎನ್. ಹಾಲೇಶ್, ಬೆಲಗೂರು ಮಂಜುನಾಥ್, ಸುರೇಶ್, ಕೆ.ಎಸ್. ಈಶ್ವರಪ್ಪ, ಡಿ.ಎಚ್. ಶಂಕರಮೂರ್ತಿ, ವಿಜಯೇಂದ್ರ, ಎಸ್.ಎನ್. ಚನ್ನಬಸಪ್ಪ, ಬಾ.ಸು. ಅರವಿಂದ, ಚಿತ್ರಕೂಟ ಶ್ರೀನಿವಾಸ್, ನಾಗರಾಜ್, ಎಸ್.ಪದ್ಮನಾಭ ಭಟ್ ಸೇರಿದಂತೆ ಅನೇಕರನ್ನು ಗೌರವಿಸಲಾಯಿತು.
ವಿಎಚ್ಪಿ ಜಿಲ್ಲಾಧ್ಯಕ್ಷ ಜೆ.ಆರ್. ವಾಸುದೇವ್, ಬಜರಂಗದಳ ವಿಭಾಗದ ಸಂಚಾಲಕ ರಾಜೇಶ್ ಗೌಡ, ಆರ್ಎಸ್ಎಸ್ ಜಿಲ್ಲಾ ಸಂಘಚಾಲಕ ಬಿ.ಎ. ರಂಗನಾಥ, ನಗರ ಸಂಘ ಚಾಲಕ ಲೋಕೇಶ್ವರ ಕಾಳೆ, ಸಂಪರ್ಕ ಪ್ರಮುಖ್ ಡಾ.ರವಿಕಿರಣ್, ವಿಭಾಗ ಕಾರ್ಯವಾಹ ಗಿರೀಶ್ ಕಾರಂತ್, ಶಿವಮೊಗ್ಗ ವಿಭಾಗ ಪ್ರಚಾರಕ್ ನವೀನ್ ಸುಬ್ರಹ್ಮಣ್ಯ ಮತ್ತಿತರರು ಇದ್ದರು.
- - - -31ಎಸ್ಎಂಜಿಕೆಪಿ03:ಶಿವಮೊಗ್ಗದ ಮೈಲಾರೇಶ್ವರ ದೇವಸ್ಥಾನದಲ್ಲಿ ಶನಿವಾರ ಆಯೋಧ್ಯೆ ರಾಮಲಲ್ಲಾ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಪವಿತ್ರ ಮಂತ್ರಾಕ್ಷತೆ ವಿತರಣೆಗೆ ಚಾಲನೆ ನೀಡುವ ಸಂಬಂಧ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್, ವಿಎಚ್ಪಿ ಹಾಗೂ ಸಂಘ ಪರಿವಾರದ ವಿವಿಧ ಸಂಘಟನೆಗಳಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಇದೇ ಸಂದರ್ಭ ಅಯೋಧ್ಯೆಯ ಕರಸೇವೆಯಲ್ಲಿ ಭಾಗವಹಿಸಿದ್ದ ಗಣ್ಯರನ್ನು ಸನ್ಮಾನಿಸಲಾಯಿತು.