ಕೊಪ್ಪಳ: ಒಂದೇ ಹೆಸರು ಎರಡು ಕ್ಷೇತ್ರಗಳಲ್ಲಿ ಇದ್ದರೆ, ನಿಧನದ ನಂತರವೂ ಹೆಸರು ಇರುವುದನ್ನು ಮತದಾರರ ಪರಿಷ್ಕರಣೆಯ ವೇಳೆಯಲ್ಲಿ ಪತ್ತೆ ಮಾಡಿ, ಸರಿಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಹೇಳಿದ್ದಾರೆ.
ಜನಗಣತಿಗೆ ನೇಮಕವಾದ ಅಧಿಕಾರಿಗಳು ಮತ್ತು ಸಿಬ್ಬಂದಿಯು 2002ರ ಮತ್ತು 2025ರ ಈ ಎರಡು ಮತದಾರರ ಪಟ್ಟಿಗಳನ್ನು ಇಟ್ಟುಕೊಂಡು ಮ್ಯಾಪಿಂಗ್ ಕಾರ್ಯ ಮಾಡುತ್ತಿದ್ದಾರೆ. ಜೂ. 30ರಿಂದ ಒಂದು ತಿಂಗಳ ಕಾಲ ಬಿ.ಎಲ್.ಒ. ಮನೆಮನೆಗೆ ಭೇಟಿ ಕೊಡುತ್ತಾರೆ. ಮ್ಯಾಪಿಂಗ್ ಮಾಡಿದ ಎಲ್ಲರಿಗೂ ಜನಗಣತಿ ಫಾರ್ಮ ಕೊಡಲಾಗುತ್ತದೆ. ಬಿಎಲ್ಒಗಳು ಮತದಾರರಿಗೆ ಗೈಡ್ ಮಾಡಿ, ಜನಗಣತಿ ಫಾರ್ಮ್ ತುಂಬಿಸುತ್ತಾರೆ. ಗಣತಿ ವೇಳೆಯಲ್ಲಿ, ಮತದಾರರು ನಾನು ಯಾವುದೆ ದೇಶದಲ್ಲಿ ಪೌರತ್ವ ಹೊಂದಿಲ್ಲ. ನನ್ನ ಹೆಸರು ಒಂದೇ ಕಡೆ ಇದ್ದು ಬೇರೆಡೆ ಇಲ್ಲ ಎನ್ನುವಂತಹ ಡಿಕ್ಲರೇಶನ್ ನೀಡಬೇಕು ಎನ್ನುವಂತಹ ಮಾರ್ಗಸೂಚಿ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.
ಮತದಾರರ ಪಟ್ಟಿ ಪರಿಷ್ಕರಣೆಯ ಈ ಸಂದರ್ಭದಲ್ಲಿ ಹೆಸರು ಸೇರಿಸಲು, ಹೆಸರು ತೆಗೆಯಲು ಮತ್ತು ಹೆಸರನ್ನು ತಿದ್ದುಪಡಿ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದರು. ತೀರಿಕೊಂಡ ಅಥವಾ ಬೇರೆಡೆ ಸ್ಥಳಾಂತರವಾದ ಅಥವಾ ಡುಪ್ಲಿಕೇಟ್ ಮತದಾರರು ಯಾರು ಎಂಬುದನ್ನು ಪತ್ತೆ ಹಚ್ಚಿ ಮತದಾರ ಪಟ್ಟಿಯನ್ನು ಪರಿಷ್ಕರಿಸಲಾಗುತ್ತದೆ. ಈ ಪರಿಷ್ಕರಣಾ ಕಾರ್ಯದಲ್ಲಿ ರಾಜಕೀಯ ಪಕ್ಷಗಳಿಂದ ನೇಮಕಗೊಂಡ ಬಿ.ಎಲ್.ಎ.ಗಳು ಸಹ ಭಾಗಿಯಾಗುತ್ತಾರೆ ಎಂದರು.ಕೊಪ್ಪಳ ಜಿಲ್ಲೆಯಲ್ಲಿ 2025 ಮತದಾರರ ಪಟ್ಟಿಯಲ್ಲಿ ಒಟ್ಟು 11,92,307 ಮತದಾರರ ಪೈಕಿ ಇದುವರೆಗೆ 11,34,937 ಮತದಾರರಿಗೆ ಈಗಾಗಲೇ ಮ್ಯಾಪಿಂಗ್ ಮಾಡಿದ್ದು, 57,370 ಮತದಾರರಿಗೆ ಮ್ಯಾಪಿಂಗ್ ಕಾರ್ಯ ಬಾಕಿ ಇದೆ ಎಂದು ಹೇಳಿದರು.