ಇಂದಿನಿಂದ ಮಡಿಕೇರಿಯಲ್ಲಿ ದಸರಾ ಸಂಭ್ರಮ

KannadaprabhaNewsNetwork |  
Published : Sep 22, 2025, 01:02 AM IST
ಚಿತ್ರ : ಮಡಿಕೇರಿಯಲ್ಲಿ ದೀಪಾಲಂಕಾರ.  | Kannada Prabha

ಸಾರಾಂಶ

ಮಡಿಕೇರಿ ದಸರಾ ಜನೋತ್ಸವಕ್ಕೆ ಸೋಮವಾರ ಸಂಜೆ ನಗರದ ಪಂಪಿನ ಕರೆಗೆಯ ಬಳಿ ನಾಲ್ಕು ಶಕ್ತಿ ದೇವತೆಗಳ ಕರಗಗಳು ಸಂಚಾರ ಆರಂಭಿಸುವ ಮೂಲಕ ಚಾಲನೆ ದೊರಕಲಿದೆ.

ಪಂಪಿನ ಕೆರೆಯಿಂದ ನಾಲ್ಕು ಶಕ್ತಿ ದೇವತೆಗಳ ಕರಗ ಸಂಚಾರ ಆರಂಭ । ನಾಳೆಯಿಂದ ಗಾಂಧಿ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ವಿಘ್ನೇಶ್ ಎಂ. ಭೂತನಕಾಡು

ಕನ್ನಡಪ್ರಭ ವಾರ್ತೆ ಮಡಿಕೇರಿ

ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಮಡಿಕೇರಿ ದಸರಾ ಜನೋತ್ಸವಕ್ಕೆ ಸೋಮವಾರ ಸಂಜೆ ನಗರದ ಪಂಪಿನ ಕರೆಗೆಯ ಬಳಿ ನಾಲ್ಕು ಶಕ್ತಿ ದೇವತೆಗಳ ಕರಗಗಳು ಸಂಚಾರ ಆರಂಭಿಸುವ ಮೂಲಕ ಚಾಲನೆ ದೊರಕಲಿದೆ.

ಮೈಸೂರು ದಸರಾ ಜಂಬೂಸವಾರಿಗೆ ಖ್ಯಾತಿ ಗಳಿಸಿದ್ದರೆ, ಮಡಿಕೇರಿ ದಸರಾ ದಶ ಮಂಟಪಗಳ ಶೋಭಾಯಾತ್ರೆ ಪ್ರಮುಖ ಆಕರ್ಷಣೆಯಾಗಿದೆ. ಇದರಿಂದಲೇ ವಿಜಯದಶಮಿಯಂದು ಕೊಡಗಿಗೆ ದಸರಾ ವೀಕ್ಷಿಸಲು ಲಕ್ಷಾಂತರ ಜನರು ಸೇರುತ್ತಾರೆ. ದಸರಾ ಅಂಗವಾಗಿ ಕಾಫಿ ದಸರಾ, ಬಹುಭಾಷಾ ಕವಿಗೋಷ್ಠಿ, ಮಕ್ಕಳ ದಸರಾ, ಮಹಿಳಾ ದಸರಾ, ಜಾನಪದ ದಸರಾ, ಯುವ ದಸರಾ ಸೇರಿದಂತೆ ಹಲವು ಕಾರ್ಯಕ್ರಮಗಳು ಮಡಿಕೇರಿಯ ಗಾಂಧಿ ಮೈದಾನದಲ್ಲಿ ಆಯೋಜಿತಗೊಂಡಿದೆ.

ಮಡಿಕೇರಿಯ ನಾಲ್ಕು ಶಕ್ತಿ ದೇವತೆಗಳಾದ ಕುಂದೂರುಮೊಟ್ಟೆ ಚೌಟಿ ಮಾರಿಯಮ್ಮ, ದಂಡಿನ ಮಾರಿಯಮ್ಮ, ಕಂಚಿ ಕಾಮಾಕ್ಷಿ ಹಾಗೂ ಕೋಟೆ ಮಾರಿಯಮ್ಮ ದೇವತೆಗಳ ಕರಗವು ನಗರದ ಪಂಪಿನ ಕೆರೆಯಲ್ಲಿ ಪೂಜೆ ಸಲ್ಲಿಸಿ ಕರಗ ಸಂಚಾರವನ್ನು ಆರಂಭಿಸಲಿದೆ. ಒಂಬತ್ತು ದಿನಗಳ ಕಾಲ ಕೂಡ ನಗರ ಪ್ರದಕ್ಷಿಣೆ ಕರಗ ಸಂಚರಿಸಲಿದೆ. ಈ ಬಾರಿ ಮಡಿಕೇರಿ ದಸರಾ ಉತ್ಸವಕ್ಕೆ ಸರ್ಕಾರದಿಂದ ರು.1.50 ಕೋಟಿ ಅನುದಾನ ಘೋಷಣೆಯಾಗಿದ್ದು, ಅದ್ದೂರಿಯಾಗಿ ದಸರಾ ಉತ್ಸವ ನಡೆಯಲಿದೆ. ಮಡಿಕೇರಿ ನಗರ ದಸರಾ ಸಮಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ಸೆ.23ರಿಂದ ಅ.2ರ ವರೆಗೆ ನಗರದ ಗಾಂಧಿ ಮೈದಾನದಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

ವಿಜಯದಶಮಿಯಂದು ನಗರದ ಸುಮಾರು 10 ದೇವಾಲಯಗಳ ಮಂಟಪಗಳ ಶೋಭಾಯಾತ್ರೆ ಝಗಮಗಿಸಲಿದೆ. ಒಂದೊಂದು ಮಂಟಪ ಕೂಡ ಲಕ್ಷಾಂತರ ರು. ಖರ್ಚು ಮಾಡಿ ದೇವರ ಕಥಾ ಸಾರಾಂಶವನ್ನು ಅಳವಡಿಸಿರುತ್ತದೆ. ಇದರಲ್ಲಿ ಉತ್ತಮ ಪ್ರದರ್ಶನ ತೋರಿದ ಮಂಟಪಕ್ಕೆ ಪ್ರಶಸ್ತಿ ಕೂಡ ನೀಡಲಾಗುತ್ತದೆ. ಇರುಳನ್ನು ಬೆಳಕಾಗಿಸುವ ದಸರೆ ಎಂದು ಮಡಿಕೇರಿ ದಸರಾ ಹೆಸರು ಮಾಡಿದೆ. ಐತಿಹಾಸಿಕ ಮಡಿಕೇರಿ ದಸರಾಕ್ಕೆ ಸುಮಾರು ಇನ್ನೂರಕ್ಕೂ ಅಧಿಕ ವರ್ಷ ಇತಿಹಾಸವಿದೆ. ಕೊಡಗಿನಲ್ಲಿ ರಾಜರ ಆಳ್ವಿಕೆಯ ಕಾಲದಲ್ಲಿ ಮಡಿಕೇರಿ ಜನರನ್ನು ಸಾಂಕ್ರಾಮಿಕ ರೋಗವೊಂದು ಕಾಡಿತ್ತು. ಇದರಿಂದ ಅಪಾರ ಸಾವು ನೋವು ಉಂಟಾಗಿತ್ತು. ಈ ಸಂದರ್ಭ ರಾಜರು ನಗರದ ನಾಲ್ಕು ಶಕ್ತಿ ದೇವೆತಗಳನ್ನು ಮಡಿಕೇರಿಯಲ್ಲಿ ಪ್ರತಿಷ್ಠಾಪಿಸಿ ಕರಗಹೊರಡಿಸಿ ಪೂಜಿಸುತ್ತಿದ್ದರು. ಈ ದೇವತೆಗಳ ಕರಗಗಳು ನಗರ ಪ್ರದಕ್ಷಿಣ ನಡೆಸಿದ ನಂತರ ಸಾಂಕ್ರಾಮಿಕ ರೋಗ ಮಾಯವಾಯಿತು ಎಂಬ ಐತಿಹ್ಯವಿದೆ. ಅಂದಿನಿಂದ ಪ್ರತಿ ವರ್ಷ ಮಡಿಕೇರಿಯಲ್ಲಿ ದಸರಾ ಆಚರಿಸಲಾಗುತ್ತದೆ. ನಗರದಲ್ಲಿ ದೀಪಾಲಂಕಾರ : ದಸರಾ ಹಿನ್ನೆಲೆಯಲ್ಲಿ ನಗರದ ರಸ್ತೆಗಳಲ್ಲಿ ವಿದ್ಯುತ್ ದೀಪಾಲಂಕಾರವನ್ನು ಮಾಡಲಾಗಿದೆ. ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಿಂದ ಚೌಕಿ ವರೆಗೆ ರಸ್ತೆಯ ಇಕ್ಕೆಲಗಳಲ್ಲಿ ವೈವಿದ್ಯಮಯ ಅಲಂಕಾರದಿಂದ ಕಂಗೊಳಿಸುತ್ತಿದೆ. ಈ ರಸ್ತೆಯಲ್ಲಿ ಮತ್ತಷ್ಟು ಅಲಂಕಾರಿಕ ಬಲ್ಬ್ ಗಳು, ವಿನ್ಯಾಸ ಹಾಕಲಾಗುತ್ತದೆ. ಶಾಸಕ ಡಾ. ಮಂತರ್ ಗೌಡ ಅವರು ಸ್ವಂತ ವೆಚ್ಚದಲ್ಲಿ ರಸ್ತೆಯ ಇಕ್ಕೆಲಗಳಿಗೆ ವಿದ್ಯುತ್ ಅಲಂಕಾರ ಮಾಡುತ್ತಿದ್ದಾರೆ. ಆಕರ್ಷಕ ಅಲಂಕಾರ ಮಡಿಕೇರಿ ಜನೋತ್ಸವ ದಸರಾಕ್ಕೆ ನವ ಮೆರಗು ನೀಡಲಿದೆ. ನಗರದ ಪ್ರಮುಖ ಕಡೆಗಳಲ್ಲಿ ಗಣೇಶ, ಪಾರ್ವತಿ ಸೇರಿದಂತೆ ವಿವಿಧ ದೇವತೆಗಳ ಕಲಾಕೃತಿಯ ದೀಪಾಲಂಕಾರ ಕೂಡ ಮಾಡಲಾಗಿದೆ. ----------------------------------

*ಸೆ.22 ಪಂಪಿನ ಕೆರೆಯಿಂದ ಕರಗ ಉತ್ಸವ ಆರಂಭ

*ಸೆ.23ರಿಂದ ರಾತ್ರಿ ಅ.2ರ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮ

*24ರಂದು ಬೆಳಗ್ಗೆ 10 ಗಂಟೆಗೆ ಕಾಫಿ ದಸರಾ

*25ರಂದು ಬೆಳಗ್ಗೆ 10 ಗಂಟೆಗೆ ಕವಿಗೋಷ್ಠಿ

*27ರಂದು ಯುವ ದಸರಾ

*28ರಂದು ಮಹಿಳಾ ದಸರಾ

*29ರಂದು ಜಾನಪದ ದಸರಾ

*30ರಂದು ಮಕ್ಕಳ ದಸರಾ

*ಅ.1ರ ಆಯುಧಾ ಪೂಜಾ ಸಮಾರಂಭ

*ಅ.2ರ ವಿಜಯದಶಮಿಯಂದು ದಶಮಂಟಪಗಳ ಶೋಭಾಯಾತ್ರೆ

----------------------------------------

ಸೆ.23ರಿಂದ ಅಕ್ಟೋಬರ್ 2ರವರೆಗೆ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ಸಂಜೆ 6 ಗಂಟೆಯಿಂದ ಕಾರ್ಯಕ್ರಮಗಳು ಜರುಗಲಿವೆ. ಈ ಬಾರಿ ಹಲವು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಪ್ರತಿದಿನ ಇತರ ಸ್ಥಳೀಯ ಹಾಗೂ ಹೊರ ಜಿಲ್ಲಾ ಕಲಾವಿದರುಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

-ಕುಡೆಕಲ್ ಸಂತೋಷ್, ಅಧ್ಯಕ್ಷ ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ

ಸೆ.22 ರಂದು ಕರಗೋತ್ಸವ ಆರಂಭಗೊಳ್ಳಲಿದೆ. ಆದ್ದರಿಂದ ಸಂಜೆ ಮನೆ ಮತ್ತು ಅಂಗಡಿಗಳನ್ನು ಹಣತೆ, ಕಾಲುದೀಪ, ತೂಗುದೀಪಗಳಿಂದ ಅಲಂಕರಿಸಬೇಕು. ಅಲ್ಲದೆ ಮನೆಗಳ ಮುಂದೆ ಸುಂದರವಾದ ವರ್ಣರಂಜಿತ ಚುಕ್ಕಿ ರಂಗೋಲಿಯನ್ನು ಬಿಡಿಸಬೇಕು. ಈ ಎರಡೂ ಸ್ಪರ್ಧೆಗಳ ವಿಜೇತರಿಗೆ ವಿಶೇಷ ಬಹುಮಾನವನ್ನು ನೀಡಲಾಗುವುದು. ಈ ಬಾರಿ ವಿಶೇಷ ಆಕರ್ಷಣೆಯಾಗಿ ಸೆಲ್ಫಿ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಬಿ.ಎಂ.ಹರೀಶ್ ಅಣ್ವೇಕರ್,ಅಧ್ಯಕ್ಷ ದಸರಾ ದಶಮಮಂಟಪ ಸಮಿತಿ

------------------------------------------------------------------

PREV

Recommended Stories

ಸಿಬ್ಬಂದಿ ಕೊರತೆ ಬೆಂಗಳೂರು ನಗರದಲ್ಲಿ ಜಾತಿ ಗಣತಿ ವಿಳಂಬ
ಸಮೀಕ್ಷೆ ಹೆಸರಿನಲ್ಲಿ ಹಿಂದೂ ಸಮಾಜ ಒಡೆಯುವ ಹುನ್ನಾರ