ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಅದ್ಧೂರಿ ಶಿವಮೊಗ್ಗ ದಸರಾ ಆಚರಣೆಗೆ ನಿವೃತ್ತ ಲೆಫ್ಟಿನೆಂಟ್ ಜನರಲ್ ಬಗ್ಗವಳ್ಳಿ ಸೋಮಶೇಖರ್ ರಾಜು ಸೋಮವಾರ ಚಾಲನೆ ನೀಡಿದರು. ಇದಕ್ಕೂ ಮುನ್ನ ಚಾಮುಂಡೇಶ್ವರಿ ಬೆಳ್ಳಿ ವಿಗ್ರಹವನ್ನು ಮಹಾನಗರ ಪಾಲಿಕೆ ಆವರಣದಿಂದ ನಗರದ ಕೋಟೆ ರಸ್ತೆಯ ಚಂಡಿಕಾ ದುರ್ಗಾಪರಮೇಶ್ವರಿ ದೇವಾಲಯಕ್ಕೆ ಮೆರವಣಿಗೆ ಮೂಲಕ ತಂದು ಪ್ರತಿಷ್ಠಾಪನೆ ಮಾಡಲಾಯಿತು.
ವಿವಿಧ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಈ ಸಂದರ್ಭದಲ್ಲಿ ಶಾಸಕರು, ಪಾಲಿಕೆಯ ಅಧಿಕಾರಿಗಳು, ಪಾಲಿಕೆ ಮಾಜಿ ಸದಸ್ಯರು ವಾದ್ಯಗಳಿಗೆ ನೃತ್ಯ ಮಾಡಿದರು. ಕೋಟೆ ಚಂಡಿಕಾ ದುರ್ಗಾ ಪರಮೇಶ್ವರಿ ದೇಗುಲದ ಮುಂಭಾಗ ಮೆರವಣಿಗೆ ಪೂರ್ಣಗೊಳ್ಳುತ್ತಿದ್ದಂತೆ ಚಾಮುಂಡೇಶ್ವರಿ ದೇವಿಗೆ ಮಂಗಳಾರತಿ ಬೆಳಗಲಾಯಿತು.ಬೊಂಬೆ ಪೂಜೆ:
ದಸರಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಬಗ್ಗವಳ್ಳಿ ಸೋಮಶೇಖರ್ ರಾಜು, ನಮ್ಮ ಸಂಸ್ಕೃತಿಯ ಜೀವಂತಿಕೆಗೆ ಹಬ್ಬಗಳ ಆಚರಣೆಯೇ ಸಾಕ್ಷಿ. ಸಂಸ್ಕೃತಿ, ಶಿಸ್ತು, ತ್ಯಾಗವನ್ನು ಹಬ್ಬ ಕಲಿಸುತ್ತದೆ. ಮೌಲ್ಯ ಕಾಪಾಡಬೇಕು. ಹಬ್ಬಗಳಲ್ಲಿ ಶಿಸ್ತು ಪಾಲಿಸಬೇಕು ಎಂದು ಹೇಳಿದರು.
ಆಪರೇಷನ್ ಸಿಂದೂರ ಆದಾಗ ಭಾರತೀಯ ಸೇನೆ, ವಾಯುಪಡೆ ಮಾತ್ರ ಹೋಗಿಲ್ಲ. ಇಡೀ ದೇಶ ಹೋಗುತ್ತದೆ. ದೇಶ ಹಿಂದೆ ನೀವು ಇದ್ದಾಗ ಮಾತ್ರ ಗೆಲುವು ಖಚಿತ. ೨೨ ತಿಂಗಳ ಹಿಂದೆ ನಿವೃತ್ತಿಯಾಗಿದ್ದೇನೆ. ೫೦ ವರ್ಷಗಳ ಕಾಲ ಸಮವಸ್ತ್ರ ಧರಿಸಿದ್ದೇನೆ. ಪತ್ನಿಯ ಬೆಂಬಲ ಇದೆ ಎಂದರು.
ಶಂಕರಾನಂದ ಜೋಯ್ಸ್ ವೇದಘೋಷ ಮಾಡಿದರು. ಕಂದಾಯ ಅಧಿಕಾರಿ ನಾಗೇಂದ್ರ ಸ್ವಾಗತಿಸಿದರು. ಶಾಸಕ ಚನ್ನಬಸಪ್ಪ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಡಿ.ಎಸ್.ಅರುಣ್, ಡಾ.ಧನಂಜಯ ಸರ್ಜಿ, ಆಯುಕ್ತರಾದ ಮಾಯಣ್ಣ ಗೌಡ, ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಎಚ್.ಎಂ.ಮಧು, ಮಾಜಿ ಸದಸ್ಯರಾದ ಯೋಗೀಶ್, ರೇಖಾ ರಂಗನಾಥ, ಜ್ಞಾನೇಶ್ವರ್, ಮೋಹನ್ ರೆಡ್ಡಿ, ಪೌರ ಸೇವಾ ನೌಕರರ ಸಂಘದ ಅಧ್ಯಕ್ಷ ಗೋವಿಂದ, ಯಮುನಾ ರಂಗೇಗೌಡ, ಲಕ್ಷ್ಮಣ ಇತರರು ಇದ್ದರು.