ಕನ್ನಡಪ್ರಭ ವಾರ್ತೆ ಅರಕಲಗೂಡು
ಇತಿಹಾಸ ಪ್ರಸಿದ್ದ ಲಕ್ಷ್ಮೀ ನರಸಿಂಹಸ್ವಾಮಿ, ಅಮೃತೇಶ್ವರ ಸ್ವಾಮಿ, ಉಮಾಮಹೇಶ್ವರಿ, ಗ್ರಾಮದೇವತೆ ದೊಡ್ಡಮ್ಮ ದೇವಿ ದೇವಾಲಯದಲ್ಲಿ ವಿವಿಧ ಮಠಾಧೀಶರು, ಶಾಸಕ ಎ.ಮಂಜು, ಜಿಲ್ಲಾಧಿಕಾರಿ ಲತಾಕುಮಾರಿ ಪೂಜೆ ಸಲ್ಲಿಸಿದರು.
ಬಳಿಕ ದೊಡ್ಡಮ್ಮ ವೃತ್ತದಲ್ಲಿ ನಡೆದ ಸಭೆಯಲ್ಲಿ ದಸರಾ ಉತ್ಸವವನ್ನು ಉದ್ಘಾಟಿಸಿದ ಬುಕರ್ ಪ್ರಶಸ್ತಿ ವಿಜೇತ ಸಾಹಿತಿ ದೀಪಾ ಭಾಸ್ತಿ ತಾಲೂಕು ಕೇಂದ್ರದಲ್ಲಿ ಇಷ್ಟು ವೈಭವ ಸಂಭ್ರಮದಿಂದ ದಸರಾ ಆಚರಣೆ ನಡೆಯುತ್ತಿರುವುದು ವಿಶೇಷವಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ದೊರೆತದ್ದು ಸಂತಸದ ಸಂಗತಿ, ಸಾಹಿತಿಗಳಿಗೆ ಜನರ ಪ್ರೋತ್ಸಾಹ ಅಗತ್ಯ, ತಮ್ಮ ಸಾಹಿತ್ಯ ಕೃಷಿಗೆ ದೊಡ್ಡಮ್ಮ ದೇವಿಯ ಆಶೀರ್ವಾದ ದೊರೆಯಲಿ ಎಂದು ಪ್ರಾರ್ಥಿಸುವುದಾಗಿ ಹೇಳಿ ಜನರಿಗೆ ಶುಭಾಶಯ ಕೋರಿದರು.ಜಿಲ್ಲಾಧಿಕಾರಿ ಲತಾ ಕುಮಾರಿ ಮಾತನಾಡಿ, ಅರಕಲಗೂಡು ದಸರಾ ಜಿಲ್ಲಾದ್ಯಂತ ಗಮನ ಸೆಳೆದಿದೆ. ವೈಭವದಿಂದ ಆಚರಣೆ ನಡೆದಿರುವುದು ಸಂತೋಷದಾಯಕವಾಗಿದ್ದು ಯಾವುದೇ ಅಹಿತಕರ ಘಟನೆಗಳಿಗೆ ಕಾರಣವಾಗದಂತೆ ಶಾಂತಿಯಿಂದ ಸಂಭ್ರಮಾಚರಣೆ ನಡೆಯಲಿ ಎಂದರು. ಶಾಸಕ ಎ. ಮಂಜು ಮಾತನಾಡಿ, 25 ವರ್ಷಗಳ ಹಿಂದೆ ಮರುಚಾಲನೆ ದೊರೆತ ಬಳಿಕ ದಸರಾ ಉತ್ಸವ ಪ್ರತಿವರ್ಷ ತನ್ನ ಮೆರುಗನ್ನು ಹೆಚ್ಚಿಸಿಕೊಳ್ಳುತ್ತಾ ಬಂದಿದೆ ಎಂದರು. ಬಳಿಕ ಉತ್ಸವಗಳ ಮೆರವಣಿಗೆ ಚಾಲನೆ ನೀಡಲಾಯಿತು. ಕಣ್ಣು ಕೋರೈಸುವಂತೆ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದ್ದ ದೇವತೆಗಳ ಉತ್ಸವಗಳು, ಸ್ಥಬ್ದ ಚಿತ್ರಗಳು ಮೆರವಣಿಗೆಯಲ್ಲಿ ಬನ್ನಿ ಮಂಟಪದತ್ತ ಸಾಗಿದವು. ವಿವಿಧ ಕಲಾ ತಂಡಗಳು ಮೆರವಣಿಗೆಗೆ ಮರಗು ನೀಡಿದವು.