ರಾಮನಗರ: ನಗರಸಭೆ ವತಿಯಿಂದ ಇಲ್ಲಿವರೆಗೆ 18 ಸಾವಿರಕ್ಕೂ ಅಧಿಕ ಸ್ವತ್ತಿನ ಮಾಲೀಕರಿಗೆ ಇ ಖಾತೆ ವಿತರಣೆ ಮಾಡಲಾಗಿದೆ ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಹೇಳಿದರು.
ನಗರದ ಸರ್ವತೋಮುಖ ಅಭಿವೃದ್ಧಿಗಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಕಸ ವಿಲೇವಾರಿ ಘಟಕ ನಿರ್ಮಾಣ ಅಂತಿಮ ಹಂತ ತಲುಪಿದ್ದು, ನಗರದ ತ್ಯಾಜ್ಯವನ್ನು ಅಲ್ಲಿಗೆ ವಿಲೇವಾರಿ ಮಾಡಲು ಕ್ರಮ ವಹಿಸಲಾಗುವುದು. ನಗರದಲ್ಲಿ ಎಲ್ಲೆಂದರಲ್ಲಿ ಕಸ ವಿಲೇವಾರಿ ಮಾಡದಂತೆ ಸಾಕಷ್ಟು ಜಾಗೃತಿ ಮೂಡಿಸಲಾಗಿದೆ. ಬ್ಲಾಕ್ ಸ್ಪಾಟ್ ಗಳನ್ನು ಗುರುತಿಸಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಕಸದ ಜಾಗಗಳನ್ನು ವೇಸ್ಟ್ ಟೂ ಪಾರ್ಕ್ ಗಳಾಗಿ ಸೌಂದರ್ಯೀಕರಣ ಮಾಡಲಾಗಿದೆ. ಆದರೂ ಎಚ್ಚೆತ್ತುಕೊಳ್ಳದ ನಾಗರೀಕರು ರಾತ್ರಿ ವೇಳೆ ಎಲ್ಲೆಂದರಲ್ಲಿ ಕಸ ವಿಲೇವಾರಿ ಮಾಡುತ್ತಿದ್ದಾರೆ.
ಅದರಲ್ಲೂ ವಿದ್ಯಾವಂತರೆ ಹೆಚ್ಚಾಗಿ ಕಸವನ್ನು ರಸ್ತೆ ಬದಿಯಲ್ಲಿ ಎಸೆದು ಹೋಗುತ್ತಿರುವುದು ಗಮನಕ್ಕೆ ಬಂದಿದೆ. ಇನ್ನಾದರು ಜನರು ಎಚ್ಚೆತ್ತುಕೊಂಡು ಕಸವನ್ನು ನಗರಸಭೆ ವಾಹನಗಳಿಗೆ ನೀಡಬೇಕು. ದಂಡ ವಿಧಿಸಲು ಅವಕಾಶ ನೀಡಬಾರದು. ಸುಂದರ ನಗರ ನಿರ್ಮಾಣಕ್ಕೆ ಎಲ್ಲ ನಾಗರೀಕರು ಕೈ ಜೋಡಿಸಬೇಕು ಎಂದು ಕೆ.ಶೇಷಾದ್ರಿ ಮನವಿ ಮಾಡಿದರು.ಈ ವೇಳೆ ನಗರಸಭೆ ಸದಸ್ಯರಾದ ಮಂಜುನಾಥ್, ಮೋಯಿನ್ ಖುರೇಷಿ, ಆಯುಕ್ತ ಜಯಣ್ಣ ಇದ್ದರು.
ರಾಮನಗರ ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಕೆ.ಶೇಷಾದ್ರಿ ಸ್ವತ್ತಿನ ಮಾಲೀಕರಿಗೆ ಇ ಖಾತೆ ವಿತರಿಸಿದರು.