ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಹಕ್ಕುಪತ್ರ ನೀಡಿಕೆಯಲ್ಲಿ ಇ- ಸ್ವತ್ತಿನ ಸಮಸ್ಯೆ ಪರಿಹರಿಸಲಾಗುವುದು: ಶಾಸಕ ಜಿ. ಎಚ್. ಶ್ರೀನಿವಾಸ್

KannadaprabhaNewsNetwork | Published : Feb 1, 2025 12:01 AM

ತರೀಕೆರೆ, ಹಕ್ಕು ಪತ್ರ ನೀಡುವಲ್ಲಿ ಎದುರಾಗುತ್ತಿರುವ ಇ-ಸ್ವತ್ತಿನ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದ ಶಾಸಕ ಜಿ. ಎಚ್. ಶ್ರೀನಿವಾಸ್ ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ, ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ ಬಳಿ ಚರ್ಚೆ ಮಾಡಲಾಗಿದೆ ಎಂದು ತಿಳಿಸಿದರು.

- ಗ್ರಾಪಂ ಚುನಾಯಿತ ಪ್ರತಿನಿಧಿ, ಅಭಿವೃದ್ಧಿ ಅಧಿಕಾರಿಗಳಿಗೆ ವಿವಿಧ ಯೋಜನೆಗಳ ಅರಿವಿನಂಗಳ ಕಾರ್ಯಕ್ರಮ

--

ಕನ್ನಡಪ್ರಭ ವಾರ್ತೆ, ತರೀಕೆರೆ

ಹಕ್ಕು ಪತ್ರ ನೀಡುವಲ್ಲಿ ಎದುರಾಗುತ್ತಿರುವ ಇ-ಸ್ವತ್ತಿನ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದ ಶಾಸಕ ಜಿ. ಎಚ್. ಶ್ರೀನಿವಾಸ್ ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ, ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ ಬಳಿ ಚರ್ಚೆ ಮಾಡಲಾಗಿದೆ ಎಂದು ತಿಳಿಸಿದರು.ಶುಕ್ರವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಚಿಕ್ಕಮಗಳೂರು ಜಿಪಂ, ತರೀಕೆರೆ ತಾಪಂನಿಂದ ಪಟ್ಟಣದ ಎಂ.ಜಿ. ಹಾಲ್ ನಲ್ಲಿ ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳು, ತಾಲೂಕು ಮಟ್ಟದ ಅಧಿಕಾರಿ, ಅಭಿವೃದ್ಧಿ ಅಧಿಕಾರಿಗಳಿಗೆ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಅರಿವಿನಂಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಅರಿವು ಮೂಡಿಸು ಅಚ್ಚುಕಟ್ಟಾದ ಕಾರ್ಯಕ್ರಮ ಇದಾಗಿದೆ. ತಜ್ಞರು ಬಂದಿದ್ದಾರೆ, ಇ-ಸ್ವತ್ತಿನ ಸಮಸ್ಯೆ ಬಹಳಷ್ಟಿದೆ. ಈ ಸಮಸ್ಯೆ ಕುರಿತು ವಿಧಾನಸಭೆಯಲ್ಲಿ ಹಲವು ಬಾರಿ ಚರ್ಚಿಸಲಾಗಿದೆ. ಮುಖ್ಯಮಂತ್ರಿ ಎಸ್. ಸಿದ್ದರಾಮಯ್ಯ , ಕಂದಾಯ , ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ ಬಳಿಯೂ ಚರ್ಚೆ ಮಾಡಲಾಗಿದ್ದು ಸಮಸ್ಯೆ ಪರಿಹಾರದ ಚಿಂತನ ನಡೆದಿದೆ ಎಂದು ಹೇಳಿದರು.ಅದರಲ್ಲಿ ಪ್ರಮುಖವಾಗಿ ಗ್ರಾಮ ಠಾಣಾಗೆ ಹೊಂದಿಕೊಂಡಂತೆ ಜನವಸತಿ ಪ್ರದೇಶಗಳು ನಿರ್ಮಾಣವಾಗಿದ್ದು ಇವು ದಾಖಲೆ ರಹಿತ ಪ್ರದೇಶ. ಈ ಪ್ರದೇಶದವರಿಗೆ ಇ- ಸ್ವತ್ತು ನೀಡಲು ಸಮಸ್ಯೆಯಾಗುತ್ತದೆ ಎಂದ ಅವರು ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಸರ್ಕಾರದ ಸೂಚನೆ ಮೇರೆಗೆ ತರೀಕೆರೆ ತಾಲೂಕಿನ ಬಾವಿಕೆರೆ ಮತ್ತು ಅಜ್ಜಂಪುರ ತಾಲೂಕಿನ ಬಗ್ಗವಳ್ಳಿ ಎರಡು ಗ್ರಾಮಗಳನ್ನು ಗುರುತಿಸಿ ಪ್ರಾಯೋಗಿಕ ವಾಗಿ ವರದಿ ಸಲ್ಲಿಸಲಾಗಿದೆ. ಇದು ಯಶಸ್ವಿಯಾದರೆ ಇದನ್ನು ರಾಜ್ಯದಲ್ಲೂ ಅನುಷ್ಠಾನಗೊಳಿಸಬಹುದಾಗಿದೆ ಎಂದು ಹೇಳಿದರು.ಅಲ್ಲದೆ ರಾಜ್ಯ ಸೇರಿದಂತೆ ಜಿಲ್ಲೆ, ತಾಲೂಕಿನಲ್ಲೂ ಕೆಲವು ಪ್ರದೇಶಗಳಲ್ಲಿ ಬೇರೊಬ್ಬರ ಹೆಸರಿನಲ್ಲಿರುವ ಪಹಣಿ ಸ್ಥಳದಲ್ಲಿ ಮನೆ ನಿರ್ಮಿಸಿಕೊಳ್ಳ ಲಾಗಿರುತ್ತದೆ. ಅವರಿಗೆ ಹಕ್ಕುಪತ್ರ ನೀಡಲು ಇ ಸ್ವತ್ತಿನಲ್ಲಿ ಸಮಸ್ಯೆಯಾಗಿದ್ದು, ಅದೇ ರೀತಿ ಭದ್ರಾ ಪುನರ್ವಸತಿ ಪ್ರದೇಶದಲ್ಲಿ ಮನೆ ನಿರ್ಮಿಸಿಕೊಂಡವರಿಗೂ ಹಕ್ಕು ಪತ್ರ ನೀಡಲು ಸಾಧ್ಯವಾಗುತ್ತಿಲ್ಲ. ಇಂತಹ ಹಲವು ಪ್ರಕರಣಗಳಲ್ಲಿ ಹಕ್ಕು ಸಮಸ್ಯೆಯನ್ನು ಪರಿಹರಿಸಲಾಗುವುದು ಎಂದು ವಿವರಿಸಿದರು.

ಜೆಜೆಎಂ ಯೋಜನೆಯಲ್ಲಿ, ಮೀಟರ್ ಅಳವಡಿಸಿ 24 x7 ಕುಡಿಯುವ ನೀರು ಸರಬರಾಜು ಮಾಡಬಹುದು, ಭದ್ರಾ ಅಣೆಕಟ್ಟಿನಿಂದ ಪ್ರತಿ ಮನೆಗೆ ನೀರು ಸರಬರಾಜು ಮಾಡಬಹುದು. ಇದು ಒಳ್ಳೆಯ ಯೋಜನೆ. ಎನ್ ಆರ್ ಇ ಜಿ ಯೋಜನೆಯಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸ ಬಹುದು. ಗ್ರಾಮಗಳಲ್ಲಿ ಶೇಕಡ ನೂರರಷ್ಟು ಕಂದಾಯ ವಸೂಲಿ ಮಾಡಿದವರನ್ನು ಗುರುತಿಸಿ ಸನ್ಮಾನಿಸುವುದು ಒಳ್ಳೆಯ ಕಾರ್ಯ ಎಂದು ಹೇಳಿದರು,

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೀರ್ತನಾ ಮಾತನಾಡಿ, ಸರ್ಕಾರದ ಯೋಜನೆಗಳು ಅನುಷ್ಠಾನ ಆಗಬೇಕು, ಇ- ಸ್ವತ್ತು, ನರೇಗಾ, ಜೆಜೆಎಂ ಯೋಜನೆ ಬಗ್ಗೆ ತಿಳಿದುಕೊಳ್ಳಬೇಕು. ಪ್ರತಿನಿತ್ಯ ಹೊಸ ತಾಂತ್ರಿಕ ಬದಲಾವಣೆ, ಹೊಸ ಸಾಫ್ಟ್ ವೇರ್ ಗಳು, ಕೇಂದ್ರ ಮತ್ತು ರಾಜ್ಯದಿಂದ ಬರುತ್ತಿವೆ. ಇದರ ಬಗ್ಗೆ ಅರಿವು ಮೂಡಿಸಬೇಕು. ಈ ಕುರಿತು ಅರಿವಿನಂಗಳ ಕಾರ್ಯಕ್ರಮ ಚೆನ್ನಾಗಿದೆ. ಶಾಸಕ ಜಿ.ಎಚ್. ಶ್ರೀನಿವಾಸ್ ಅವರಿಗೂ, ಕಾರ್ಯನಿರ್ವಹಣಾಧಿಕಾರಿ ಡಾ. ಆರ್. ದೇವೇಂದ್ರಪ್ಪ ಅವರಿಗೂ ಧನ್ಯವಾದ ಅರ್ಪಿಸಿದ ಅವರು, ಕಾರ್ಯಗಾರದ ಉಪಯೋಗವನ್ನು ಎಲ್ಲರೂ ಪಡೆಯಬೇಕು ಎಂದು ಹೇಳಿದರು.ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಡಾ.ಆರ್. ದೇವೇಂದ್ರಪ್ಪ ಅವರು ಮಾತನಾಡಿ ಅರಿವಿನಂಗಳದಲ್ಲಿ ಚರ್ಚಿಸಿ, ಏನೇನು ಯೋಜನೆಗಳು ಇದೆ ಎಲ್ಲರೂ ಯೋಜನೆಗಳ ಬಗ್ಗೆ ತಿಳಿದುಕೊಳ್ಳಬೇಕು, ಕಾರ್ಯಾಗಾರದ ಉಪಯೋಗವನ್ನು ಎಲ್ಲರೂ ಪಡೆಯಬೇಕು ಎಂದು ಹೇಳಿದರು.

ಅಜ್ಜಂಪುರ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ವಿಜಯಕುಮಾರ್, ಗ್ರಾಮೀಣಾ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ವಿಭಾಗದ ಎ.ಇ.ಇ.ಜೈನಲುಬ್ದಿನ್, ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್, ತಾ.ಪಂ.ಸಹಾಯಕ ನಿರ್ದೇಶಕರು ಸಿ.ಟಿ.ಯೋಗೀಶ್, ಅಭಿವೃದ್ಧಿ ಅಧಿಕಾರಿ ಪವಿತ್ರ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

31ಕೆಟಿಆರ್.ಕೆ.02ಃ

ತರೀಕೆರೆಯಲ್ಲಿ ನಡೆದ ಅರಿವಿನಂಗಳ ಕಾರ್ಯಕ್ರಮವನ್ನು ಶಾಸಕ ಜಿ.ಎಚ್. ಶ್ರೀನಿವಾಸ್ ಉದ್ಘಾಟಿಸಿದರು. ಜಿಪಂ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಕೀರ್ತನಾ, ತರೀಕೆರೆ ತಾಪಂ ಕಾರ್ಯನಿರ್ವಹಣಾಧಿಕಾರಿ ಡಾ.ಆರ್. ದೇವೇಂದ್ರಪ್ಪ, ಅಜ್ಜಂಪುರ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ವಿಜಯಕುಮಾರ್, ಗ್ರಾಮಿಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ವಿಭಾಗ ಎಇಇ ಜೈನಲುಬ್ದಿನ್, ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್, ತಾಪಂ ಸಹಾಯಕ ನಿರ್ದೇಶಕ ಸಿ.ಟಿ.ಯೋಗೀಶ್ ಮತ್ತಿತರರು ಇದ್ದರು.