ಚಳ್ಳಕೆರೆ: ಪ್ರತಿಯೊಬ್ಬ ವಿದ್ಯಾರ್ಥಿಯೂ ಗಿಡಗಳನ್ನು ನೆಟ್ಟು ಪೋಷಿಸಬೇಕು. ವನ್ಯಸಂಪತ್ತು ನಮಗೆ ನೈಸರ್ಗಿಕವಾಗಿ ದೇವರು ನೀಡಿದ ವರವಾಗಿದೆ. ಇತ್ತೀಚಿನ ದಿನಗಳಲ್ಲಿ ಗಿಡ, ಮರಗಳನ್ನು ನಾಶಪಡಿಸುವ ಪ್ರವೃತ್ತಿ ಹೆಚ್ಚುತ್ತಿರುವುದು ಆತಂಕಕಾರಿ ವಿಷಯ. ಕಾಲೇಜಿನಲ್ಲೂ ವಿಶಾಲವಾದ ಮೈದಾನವಿದೆ. ಎಲ್ಲರೂ ಸೇರಿ ವಿವಿಧ ಹೂ, ಗಿಡಗಳನ್ನು ನೆಟ್ಟು ಕೈತೋಟ ನಿರ್ಮಿಸಿ ಪ್ರಕೃತಿಮಾತೆಗೆ ನಮಿಸೋಣವೆಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ. ತಿಮ್ಮಯ್ಯ ತಿಳಿಸಿದರು.
ಇಕೋಕ್ಲಬ್ ನಿರ್ದೇಶಕಿ, ಎನ್ಎಸ್ಎಸ್ ಅಧಿಕಾರಿ ಬಿ. ಶಾಂತಕುಮಾರಿ ಮಾತನಾಡಿ, ಸಸ್ಯಶ್ಯಾಮಲ ಯೋಜನೆ ಹಾಗೂ ಎನ್ಎಸ್ಎಸ್ ಘಟಕದಿಂದ ಗ್ರಾಮೀಣ ಪ್ರದೇಶದಲ್ಲಿ ಕೈಗೊಳ್ಳುವ ಶಿಬಿರದಲ್ಲೂ ಸಹ ಮರಗಿಡಗಳನ್ನು ಬೆಳೆಸುವ ಬಗ್ಗೆ ವಿದ್ಯಾರ್ಥಿಗಳಲ್ಲಿ ಮಾರ್ಗದರ್ಶನ ನೀಡುತ್ತಾ ಬಂದಿದೆ. ಪ್ರತಿ ಕಾಲೇಜಿನಲ್ಲೂ ಹೂ ತೋಟಗಳನ್ನು ನಿರ್ಮಿಸಿ ಅವುಗಳನ್ನು ಸಂರಕ್ಷಿಸುವ ಕಾರ್ಯವನ್ನು ಇಕೋಕ್ಲಬ್ ನಿರಂತರವಾಗಿ ಮಾಡುತ್ತಿದೆ ಎಂದು ಹೇಳಿದರು.
ಉಪನ್ಯಾಸಕ ಹಬೀಬುಲ್ಲಾ, ನಾಗರಾಜ, ಪುಟ್ಟರಂಗಪ್ಪ, ಕೆ.ವಿ. ಚಂದ್ರಶೇಖರ್, ಪಾಲಯ್ಯ, ಡಿ.ಕೆ. ಚಂದ್ರಶೇಖರ್ ಮುಂತಾದವರು ಉಪಸ್ಥಿತರಿದ್ದರು.