ಸಿದ್ಧಗೊಂಡಿರುವ ಮನೆಗಳ ಹಂಚಿಕೆಗೆ ಗ್ರಹಣ!

KannadaprabhaNewsNetwork |  
Published : Jun 26, 2026, 03:15 AM IST
ಸೋಂಬೇರಿಯಂತೆ ಮಲಗಿರುವ ಕರ್ನಾಟಕ ಕೊಳೇಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳು! | Kannada Prabha

ಸಾರಾಂಶ

ಶಿವಾನಂದ ಪಿ.ಮಹಾಬಲಶೆಟ್ಟಿ ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಅಟಲ್ ಆವಾಸ್, ಪ್ರಧಾನಮಂತ್ರಿ ಗೃಹ ಯೋಜನೆಗಳಲ್ಲಿ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ನಿಗದಿತ ಕಾಲದಲ್ಲಿ ಮನೆಗಳ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದರೂ ಫಲಾನುಭವಿಗಳಿಗೆ ಹಂಚಿಕೆ ಮಾಡದೇ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ.

ಶಿವಾನಂದ ಪಿ.ಮಹಾಬಲಶೆಟ್ಟಿ

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಅಟಲ್ ಆವಾಸ್, ಪ್ರಧಾನಮಂತ್ರಿ ಗೃಹ ಯೋಜನೆಗಳಲ್ಲಿ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ನಿಗದಿತ ಕಾಲದಲ್ಲಿ ಮನೆಗಳ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದರೂ ಫಲಾನುಭವಿಗಳಿಗೆ ಹಂಚಿಕೆ ಮಾಡದೇ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ.

ಖಾಸಗಿ ಬಡ್ಡಿಯಡಿ ತಮಗೊಂದು ಸ್ವಂತ ಸೂರು ಸಿಗುವ ಭರವಸೆಯಲ್ಲಿ ಸಾಲ ಮಾಡಿ 2021ರಲ್ಲಿ ಲಕ್ಷಾಂತರ ರೂ. ಭರಿಸಿದ್ದ ಫಲಾನುಭವಿಗಳು 5 ವರ್ಷಗಳ ಕಾಲ ಬಡ್ಡಿ ತುಂಬಿ ಹೈರಾಣಾಗಿದ್ದಾರೆ. ತಮಗೂ ಒಂದು ಮನೆ ಹಂಚಿಕೆಯಾಗುತ್ತೆ ಎಂಬ ನಿರೀಕ್ಷೆಯಲ್ಲಿ ಬಕಪಕ್ಷಿಗಳಂತೆ ಕಾದು ಕೂತಿದ್ದರೂ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳು ಸ್ವಯಂ ಮೆಟ್ಟಿಕೊಂಡಿರುವ ಕೊಳೆಯಲ್ಲೇ ಗಾಢ ನಿದ್ರೆಯಲ್ಲಿ ಮಲಗಿರುವುದು ಫಲಾನುಭವಿಗಳ ನಿದ್ದೆಗೆಡಿಸಿದೆ.

ಇದು ರಬಕವಿಯಲ್ಲಿ ಒಟ್ಟು 25540 ಚ.ಮೀ. ವಿಶಾಲ ಜಾಗದಲ್ಲಿ ಜಿ1 ಮಾದರಿಯ ಒಟ್ಟು 565 ಮನೆಗಳು ನಿರ್ಮಾಣಗೊಂಡು ವಿತರಣೆಗೆ ಸಿದ್ಧವಾಗಿದ್ದರೂ ಹಾಳಾಗುವವರೆಗೆ ವಿತರಿಸುತ್ತಿಲ್ಲವೆಂಬ ಆಣೆಗೆ ಕಟ್ಟುಬಿದ್ದಂತಿರುವ ಅಧಿಕಾರಿಗಳು ಹಾಗೂ ಸೌಜನ್ಯಕ್ಕೂ ಇತ್ತ ತಿರುಗಿ ನೋಡುತ್ತಿಲ್ಲ. ಆಡಳಿತ ವರ್ಗವಾಗಲಿ, ಜನಪ್ರತಿನಿಧಿಗಳಾಗಲಿ ಯಾರೂ ಇತ್ತ ಚಿತ್ತ ಹರಿಸಿಲ್ಲ ಎಂಬುವುದೇ ಅಪಸವ್ಯವಾಗಿದೆ.

ಗುತ್ತಿಗೆದಾರನ ಅಭಿಯಂತರನೊಬ್ಬ ಸ್ಥಳೀಯ ಪ್ರಭಾವಿಗಳೊಡನೆ ಸೇರಿಕೊಂಡು ತಮಗಿಷ್ಟಬಂದ ಮೊತ್ತದ ಬೇಡಿಕೆಯಿಡುತ್ತ ಫಲಾನುಭವಿಗಳನ್ನು ಪೀಡಿಸುತ್ತಿದ್ದಾನೆ ಎಂಬ ಆರೋಪ ಕೂಡ ಕೇಳಿಬಂದಿದೆ. ಇತ್ತ ಹಣ ಕಟ್ಟಿದ ಫಲಾನುಭವಿಗಳಿಗೆ ಹಂಚಿಕೆಯಾಗದ ಮನೆಗಳಿಗಾಗಿ ಬಡ್ಡಿ ಹಣ ಕಟ್ಟುತ್ತಾ ಹಿಡಿಶಾಪ ಹಾಕುತ್ತಿದ್ದಾರೆ.

2025ರ ನವೆಂಬರ್‌ನಲ್ಲಿ ಮನೆ ವಿತರಣೆಗೆ ಬೆಳಗ್ಗೆ 10ಕ್ಕೆ ಸಮಯ ನಿಗದಿ ಮಾಡಿದ್ದ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಎಂದಿನಂತೆ ತಡವಾಗಿ ಮಧ್ಯಾಹ್ನ 2.05ಕ್ಕೆ ಬಂದು ಕಾಟಾಚಾರ ಎಂಬಂತೆ ಬಂದಷ್ಟೇ ವೇಗವಾಗಿ ತೆರಳಿದ್ದರು.

ಕೊಳಚೆ ಮಂಡಳಿ ಅಧಿಕಾರಿಗಳು ವಿತರಣೆಯಲ್ಲಿ ತಮ್ಮ ಪಾತ್ರ ಏನೂ ಇಲ್ಲವೆಂಬಂತೆ ವರ್ತಿಸುತ್ತಿದ್ದಾರೆ.

ಒಟ್ಟು 25,340 ಚ.ಮೀ.ಜಾಗೆಯಲ್ಲಿ 18,815 ಚ.ಮೀ.ಜಾಗದಲ್ಲಿ ಪ್ರತಿ ಮನೆಗೆ ₹ 7 ಲಕ್ಷ ಹಣ ವ್ಯಯಿಸಿ, ಎಸ್.ಸಿ.ಫಲಾನುಭವಿಗಳಿಗೆ ₹ 69,500 ಹಾಗೂ ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ₹ 1.38 ಲಕ್ಷ ಮೊತ್ತ ನಿಗದಿಗೊಳಿಸಿ ಕೊಳಚೆ ಮಂಡಳಿ ಭರಿಸಿಕೊಂಡಿದೆ. ಒಟ್ಟು 565 ಮನೆಗಳನ್ನು ನಿರ್ಮಿಸಿದ್ದು, 384 ಜಿ-1 ಮನೆಗಳಾಗಿದ್ದರೆ ಸ್ವಂತ ಜಾಗೆಗಳಲ್ಲಿ ಒಟ್ಟು 157 ಫಲಾನುಭವಿಗಳು ಮನೆ ನಿರ್ಮಿಸಿಕೊಳ್ಳುತ್ತಿದ್ದು, ಈವರೆಗೆ 24 ಫಲಾನುಭವಿಗಳು ಮನೆ ನಿರ್ಮಾಣ ಪೂರ್ಣಗೊಳಿಸಿಕೊಂಡಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪಾಲು ₹37,09,77,000ಗಳಷ್ಟು ಬೃಹತ್ ಮೊತ್ತದ ಅನುದಾನ ಬಳಕೆಯಾಗಿದ್ದರೂ ಫಲಾನುಭವಿಗಳಿಗೆ ದೊರಕುತ್ತಿಲ್ಲ.

ಇದೀಗ ನಿರ್ಮಾಣಗೊಂಡು ಮನೆಗಳಿಗೆ ಸೂಕ್ತ ರಕ್ಷಣೆಯಿಲ್ಲದೇ ಅನೈತಿಕ ಚಟುವಟಿಕೆಗಳ ಕೇಂದ್ರವಾಗಿವೆ. ಮನೆಗಳ ಬಾಗಿಲುಗಳು ಮುರಿದಿವೆ. ಕಿಟಕಿಗಳ ಗಾಜುಗಳನ್ನು ಒಡೆದು ಹಾಕಲಾಗಿದೆ ಹಾಗೂ ವಿದ್ಯುತ್ ಸಂಪರ್ಕದ ವೈರ್‌ಗಳನ್ನು ಅಲ್ಲದೇ ಮನೆಗಳಿಗೆ ಅಳವಡಿಸಿದ್ದ ವಿದ್ಯುತ್ ಮೀಟರ್‌ಗಳನ್ನು ಕಳವು ಮಾಡಲಾಗಿದ್ದು, ಸ್ಲಂ ಬೋರ್ಡ್‌ನ ಸ್ಲಂ ಅಧಿಕಾರಿಗಳು ಸರಿಪಡಿಸಬೇಕಿದೆ. ಒಳ ಕೊಠಡಿಗಳಲ್ಲಿ ಸಾರಾಯಿ ಬಾಟಲ್‌ ಗಳು, ಪೌಚ್‌ಗಳು, ಬಳಸಿ ಎಸೆದ ಕಾಂಡೋಮ್‌ಗಳು ಕಣ್ಣಿಗೆ ರಾಚುತ್ತಿರುವುದು ಇಲ್ಲಿನ ಚಟುವಟಿಕೆಗಳಿಗೆ ನಿದರ್ಶನವಾಗಿವೆ.

ಸಕಾಲದಲ್ಲಿ ಫಲಾನುಭವಿಗಳಿಗೆ ಮನೆಗಳ ಹಸ್ತಾಂತರ ಮಾಡಿದ್ದರೆ ಇಂಥ ಅಕ್ರಮಗಳಿಗೆ ಕಡಿವಾಣ ಹಾಕಬಹುದಿತ್ತು. ಮನೆಗಳ ಕಾವಲಿಗೆ ವಯಸ್ಸಾದ ವ್ಯಕ್ತಿಯನ್ನು ಮಾಸಿಕ ₹2 ಸಾವಿರ ಮೊತ್ತ ನೀಡಿ ಇಟ್ಟಿದ್ದರೂ ನಿಷ್ಪ್ರಯೋಜಕವಾಗಿದೆ. ಫಲಾನುಭವಿಗಳಿಗೆ ವಿತರಣೆಗೆ ಸಿದ್ಧಗೊಂಡ ಮನೆಗಳು ಶೇ.40ರಷ್ಟು ದುಷ್ಕರ್ಮಿಗಳ ಅಟ್ಟಹಾಸಕ್ಕೆ ಹಾಳಾಗಿದೆ. ಫಲಾನುಭವಿಗಳಿಗೆ ವಿತರಿಸುವ ಮೊದಲು ಸ್ಲಂ ಬೋರ್ಡ್ ಅಧಿಕಾರಿಗಳು ದುರಸ್ತಿ ಮಾಡಿಸಬೇಕು ಇಲ್ಲವಾದಲ್ಲಿ ಫಲಾನುಭವಿಗಳಿಗೇ ರಿಪೇರಿ ಭಾಗ್ಯದ ಹೊರೆ ಖಚಿತ.

ಬೆಳಗಾವಿ ಸೇರಿ 8 ಕಡೆಗಳಲ್ಲಿ 600 ಮನೆಗಳ ನಿರ್ಮಾಣ ಕಾಮಗಾರಿಯಲ್ಲಿನ ₹ 33 ಕೋಟಿ ಅನುದಾನದಲ್ಲಿ ₹ 23 ಕೋಟಿ ಅನುದಾನ ದುರ್ಬಳಕೆಯಾದ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಬೆಳಗಾವಿ ಲೋಕಾಯುಕ್ತ ಎಸ್ಪಿ ಪ್ರಸನ್ನ ದೇಸಾಯಿ ಬೆಂಗಳೂರು, ಧಾರವಾಡ, ರಾಮದುರ್ಗ, ವಿಜಯಪುರ, ಹುಬ್ಬಳ್ಳಿ, ಬೆಳಗಾವಿಯ ಒಟ್ಟು 8 ಕಡೆ ದಾಳಿ ನಡೆಸಿ ಕೋಟ್ಯಂತರ ಮೌಲ್ಯದ ಬಿಲ್‌ಗಳನ್ನು, ಮಹತ್ವದ ದಾಖಲೆಗಳನ್ನು ವಶ ಪಡಿಸಿಕೊಂಡು ಮಂಡಳಿಯ ನಿವೃತ್ತ ಎಇಇ ಶಂಭುಲಿಂಗಪ್ಪ, ಎಕ್ಸಿಕ್ಯೂಟಿವ್ ಇಇ ಲಮಾಣಿ, ಎನ್‌ಟಿಸಿಸಿ ಮ್ಯಾನೇಜರ್ ಎನ್.ಪ್ರಸಾದ, ವಿಜಯಪುರ ಗುತ್ತಿಗೆದಾರ ಗಿರಮಲ್ಲಪ್ಪ ಜೋಗೂರ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಈ ಪ್ರಕರಣದ ಹಿನ್ನೆಲೆಯಲ್ಲಿ ನಿಗಮ ಸುಧಾರಿಸಬೇಕಿತ್ತಾದರೂ ಅಧಿಕಾರಿಗಳು ಏನೇ ಆದರೂ ಸುಧಾರಿಸುವುದಿಲ್ಲ ಎಂಬುದು ಸ್ಪಷ್ಟವಾಗುತ್ತಿದ್ದರೆ, ಇತ್ತ ಖಾಸಗಿ ವ್ಯಕ್ತಿಗಳಿಂದ ಪಡೆದ ಸಾಲಕ್ಕೆ ಬಡ್ಡಿ ಹಣ ತುಂಬಿ ಸುಸ್ತಾಗಿರುವ ಫಲಾನುಭವಿಗಳು ಮಾತ್ರ ಐದು ವರ್ಷಗಳಾದರೂ ತಮಗೆ ಯಾವಾಗ ಮನೆ ಸಿಗುತ್ತದೆ ಎಂಬ ಚಿಂತೆಯಲ್ಲಿದ್ದಾರೆ. ಕೇಳುವವರಿಲ್ಲದೇ ಮನಬಂದಂತೆ ನಡೆದುಕೊಳ್ಳುತ್ತಿರುವ ಪುಢಾರಿಗಳಿಗೆ ಮಾತ್ರ ಪುಷ್ಕಳ ರಸಗವಳ ನಿರಂತರ ದೊರೆಯುತ್ತಿದೆ ಎನ್ನುತ್ತಾರೆ ಇಲ್ಲಿನ ನಾಗರಿಕರು.

ರಾಷ್ಟ್ರೀಕೃತ ಬ್ಯಾಂಕ್‌ಗಳ ಮೂಲಕ ಕೊಳಚೆ ನಿರ್ಮೂಲನಾ ಮಂಡಳಿಗೆ ಹಣ ಭರಣಾ ಮಾಡಿ ಐದು ವರ್ಷಗಳಾದರೂ ಇನ್ನೂ ಮನೆಗಳ ನೀಡಿಲ್ಲ. ನಾವು ಕೂಲಿ ಮಾಡುವ ಮನೆಯೊಡೆಯರ ಬಳಿ ಸಾಲ ಪಡೆದುಕೊಂಡಿದ್ದು, ನಾವು ದುಡಿದ ಹಣ ಬಡ್ಡಿಗೇ ಸರಿಯಾಗುತ್ತಿದೆ. ಮನೆಯಾಸೆಗೆ ಬಿದ್ದು ಸದ್ಯ ಮನೆ ನಡೆಸುವುದೇ ದುಸ್ತರವಾಗಿದೆ. ಸರ್ಕಾರ ನೀಡುವ ಅಕ್ಕಿ, ಗೃಹಲಕ್ಷ್ಮೀ, ಗೃಹಜ್ಯೋತಿ ಯೋಜನೆಗಳೇ ನಮಗೆ ಆಸರೆಯಾಗಿವೆ. ಮನೆ ಬಾಡಿಗೆ ನೀಡುವುದು ತಪ್ಪುವತ್ತ ಸ್ಲಂ ಬೋರ್ಡ ಅಧಿಕಾರಿಗಳು ತಕ್ಷಣ ನಮಗೆ ಮನೆಗಳನ್ನು ವಿತರಿಸಬೇಕು. ಇಲ್ಲವಾದಲ್ಲಿ ವಿಜಯಪುರದ ಕಚೇರಿ ಎದುರು ನಿರಶನ ನಡೆಸಲು ನಾವು ಸಿದ್ಧರಿದ್ದೇವೆ.

-ಮೀನಾಕ್ಷಿ ರಮೇಶ ಬೀಳಗಿ, ಶಾಂತಾ ಬಸವರಾಜ ಹೊರಟ್ಟಿ, ತನು ಶಿವಾನಂದ ಹೊಸಮನಿ. ಫಲಾನುಭವಿಗಳು, ರಬಕವಿ.

ನಾನು ಖಾಸಗಿ ಮನೆಗಳಲ್ಲಿ ಕೂಲಿ ಮಾಡುತ್ತಿದ್ದು, ಎರಡು ಮಕ್ಕಳೊಡನೆ ಬಾಡಿಗೆ ಮನೆಯಲ್ಲಿ ವಾಸವಿದ್ದೇನೆ. ಮಕ್ಕಳ ಶಿಕ್ಷಣ ವೆಚ್ಚ, ಮನೆ ನಿರ್ವಹಣೆ, ಬಾಡಿಗೆ ಪಾವತಿಸುವುದು ಹೊರೆಯಾಗಿದ್ದರಿಂದ ಸ್ಲಂ ಬೋರ್ಡ್ಗೆ ಎಸ್‌ಬಿಐ ಮೂಲಕ ಹಣ ಪಾವತಿಸಿದ್ದು, ಮನೆಗಳ ಫಲಾನುಭವಿಗಳ ಪಟ್ಟಿಯಲ್ಲಿ ಹೆಸರಿದೆ ಆದರೆ ಇನ್ನೂ ವಿತರಣೆಯಾಗಿಲ್ಲ. ಮನೆಗಾಗಿ ನೀಡಿದ ಹಣದ ಬಡ್ಡಿ ಹಾಗೂ ಮನೆ ಬಾಡಿಗೆ ತುಂಬಿ ಸುಸ್ತಾಗಿದ್ದು ತಯಾರಾಗಿರುವ ಮನೆಗಳನ್ನು ವಿತರಿಸಿದರೆ ಮಹದುಪಕಾರವಾಗುತ್ತದೆ.

-ಪದ್ಮಾಕ್ಷಿ ಅಪ್ಪಾಸಾಹೇಬ ಪೋತೆ. ಫಲಾನುಭವಿ, ಬನಹಟ್ಟಿ.

ನವೆಂಬರ್ ತಿಂಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ.ಬಿ.ತಿಮ್ಮಾಪುರ ಆಯ್ದ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಿದ್ದಾರೆ. ಮುಂದಿನ ವಿತರಣೆಗೆ ಸಂಬಂಧಿತ ಸಮಸ್ಯೆಗಳ ಬಗ್ಗೆ ಎಇ ಸೋಹೆಲ ಅವರೊಡನೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.

-ಶ್ವೇತಾ ಬೀಡಿಕರ, ಉಪವಿಭಾಗಾಧಿಕಾರಿಗಳು ಜಮಖಂಡಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಿಳಾ ವಿವಿ ಐವರು ವಿದ್ಯಾರ್ಥಿನಿಯರು ಬ್ರಿಟನ್‌ ಪ್ರವಾಸಕ್ಕೆ ಆಯ್ಕೆ
ಗೋವಾ ಬಾಗಾ ಬೀಚ್‌ನಲ್ಲಿ ದೇವರಹಿಪ್ಪರಗಿ ಯುವಕ ಸಾವು