ತ್ಯಾಜ್ಯ ನಿರ್ವಹಣೆಗೆ ಪರಿಸರಸ್ನೇಹಿ ಮಾದರಿ ಅಗತ್ಯ

KannadaprabhaNewsNetwork |  
Published : Mar 09, 2026, 01:15 AM IST
ದೊಡ್ಡಬಳ್ಳಾಪುರದಲ್ಲಿ ನಗರ-ರೈತ ಸಹಭಾಗಿತ್ವದ ಘನ ತ್ಯಾಜ್ಯ ನಿರ್ವಹಣಾ ಯೋಜನೆ ಕಾರ್ಯಾಗಾರ ನಡೆಯಿತು. | Kannada Prabha

ಸಾರಾಂಶ

ದೊಡ್ಡಬಳ್ಳಾಪುರ: ನಗರದಲ್ಲಿ ನಗರ-ರೈತ ಸಹಭಾಗಿತ್ವದ ಘನ ತ್ಯಾಜ್ಯ ನಿರ್ವಹಣಾ ಯೋಜನೆ ಮಹತ್ವದ ಉಪಕ್ರಮವಾಗಿದ್ದು, ಜಿಲ್ಲೆಯ ಎಲ್ಲಾ ನಗರಸಭೆಗಳು ನಗರ-ರೈತ ಸಹಭಾಗಿತ್ವ ಮಾದರಿಯನ್ನು ಅನುಸರಿಸುವಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ನಗರಾಭಿವೃದ್ಧಿ ಕೋಶದ (DUDC) ಯೋಜನಾ ನಿರ್ದೇಶಕ ರಮೇಶ್‌ ಸಲಹೆ ನೀಡಿದರು

ದೊಡ್ಡಬಳ್ಳಾಪುರ: ನಗರದಲ್ಲಿ ನಗರ-ರೈತ ಸಹಭಾಗಿತ್ವದ ಘನ ತ್ಯಾಜ್ಯ ನಿರ್ವಹಣಾ ಯೋಜನೆ ಮಹತ್ವದ ಉಪಕ್ರಮವಾಗಿದ್ದು, ಜಿಲ್ಲೆಯ ಎಲ್ಲಾ ನಗರಸಭೆಗಳು ನಗರ-ರೈತ ಸಹಭಾಗಿತ್ವ ಮಾದರಿಯನ್ನು ಅನುಸರಿಸುವಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ನಗರಾಭಿವೃದ್ಧಿ ಕೋಶದ (DUDC) ಯೋಜನಾ ನಿರ್ದೇಶಕ ರಮೇಶ್‌ ಸಲಹೆ ನೀಡಿದರು.

ದೊಡ್ಡಬಳ್ಳಾಪುರ ನಗರದಲ್ಲಿ ಉತ್ಪತ್ತಿಯಾಗುವ ಪ್ರತ್ಯೇಕಿತ ಹಸಿ ತ್ಯಾಜ್ಯವನ್ನು ಸ್ವಯಂಪ್ರೇರಿತ ರೈತರಿಗೆ ನೀಡಲಾಗುತ್ತಿದ್ದು, ಅದನ್ನು ಗೊಬ್ಬರವಾಗಿ ಪರಿವರ್ತಿಸಲಾಗುತ್ತಿದೆ. ಮಾರ್ಚ್ 2025ರಲ್ಲಿ ಆರಂಭವಾದ ಯೋಜನೆ ಯಶಸ್ಸಿನ ಅನುಭವ ಹಂಚಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ಒಂದು ವರ್ಷದ ಅವಧಿಯಲ್ಲಿ 5,000 ಟನ್ ತೇವ ತ್ಯಾಜ್ಯವನ್ನು ಸಮೀಪದ ಹನ್ನೆರಡು ಗ್ರಾಮಗಳ 80 ರೈತರಿಗೆ ನೀಡಲಾಗಿದೆ ಎಂದು ಹೇಳಿದರು.

ನಗರಸಭೆ ಆಯುಕ್ತ ಕಾರ್ತಿಕೇಶ್ವರ ಮಾತನಾಡಿ, ಗೋದ್ರೆಜ್ ಪ್ರಾಪರ್ಟೀಸ್ ಲಿಮಿಟೆಡ್ ಸಹಕಾರದೊಂದಿಗೆ ಐಐಎಚ್‌ಎಸ್‌ ಸಂಸ್ಥೆ ನಗರದಲ್ಲಿ ತ್ಯಾಜ್ಯವನ್ನು ಮೂಲದಲ್ಲೇ ಪ್ರತ್ಯೇಕಿಸುವ ಅಭ್ಯಾಸವನ್ನು ಹೆಚ್ಚಿಸಲು ಕೈಗೊಂಡಿರುವ ಚಟುವಟಿಕೆಗಳ ಬಗ್ಗೆ ಸಂಪೂರ್ಣವಾಗಿ ವಿವರಿಸಿ, ಈ ಚಟುವಟಿಕೆಗಳಲ್ಲಿ ಸ್ವಯಂ ಸೇವಕರ ನಿಯೋಜನೆ, ಗೋಡೆ ಚಿತ್ರಗಳು, ರೈತರಿಗೆ ತರಬೇತಿ ಕಾರ್ಯಕ್ರಮಗಳು, ಶಾಲಾ, ಕಾಲೇಜು ವಿದ್ಯಾರ್ಥಿಗಳ ಜಾಗೃತಿ ಕಾರ್ಯಕ್ರಮಗಳು ಸೇರಿದಂತೆ ಹಲವು ಕಾರ್ಯಕ್ರಮಗಳು ಸೇರಿವೆ ಎಂದು ಹೇಳಿದರು.

ಸಂಸ್ಥೆಯ ಹಿರಿಯ ವ್ಯವಸ್ಥಾಪಕ ಎಸ್‌.ವಿ.ಪುಷ್ಕರ ಮಾತನಾಡಿ, ಕಳೆದ ಒಂದು ವರ್ಷದ ಯೋಜನೆಯ ಪ್ರಮುಖ ಫಲಿತಾಂಶಗಳನ್ನು ಪ್ರಸ್ತುತಪಡಿಸಿದರು. ನಗರ ತ್ಯಾಜ್ಯದಿಂದ ತಯಾರಿಸಿದ ಗೊಬ್ಬರವು ರಾಸಾಯನಿಕ ಗೊಬ್ಬರಗಳಿಗಿಂತ ಉತ್ತಮ ಫಲಿತಾಂಶ ನೀಡುತ್ತಿದೆ ಎಂಬುದನ್ನು ಅವರು ವಿವರಿಸಿದರು.

ಗೋದ್ರೆಜ್ ಪ್ರಾಪರ್ಟೀಸ್ ಲಿಮಿಟೆಡ್‌ನ ಪ್ರಾದೇಶಿಕ ಮುಖ್ಯಸ್ಥ ಸುಜಿತ್ ನಾಗಪ್ಪ ಮಾತನಾಡಿ, ನಗರ-ರೈತ ಸಹಭಾಗಿತ್ವ ಮಾದರಿ ಹೊಸತನದ ಯೋಜನೆಯಾಗಿದ್ದು, ಇದು ಚಿಕ್ಕಬಳ್ಳಾಪುರ ಹಾಗೂ ದೊಡ್ಡಬಳ್ಳಾಪುರದಲ್ಲಿ ಯಶಸ್ವಿಯಾಗಿದೆ ಎಂದರು.

ಕೊಡಿಗೆಹಳ್ಳಿಯ ರೈತ ವಿಜಯ್ ಕುಮಾರ್ ಮಾತನಾಡಿ, ದೊಡ್ಡಬಳ್ಳಾಪುರ ನಗರಸಭೆ ಪ್ರತ್ಯೇಕಿತ ತೇವ ತ್ಯಾಜ್ಯವನ್ನು ರೈತರಿಗೆ ನೀಡುತ್ತಿರುವುದು ಉತ್ತಮ ಯೋಜನೆ. ಈ ಯೋಜನೆಯ ಮೂಲಕ ತಮ್ಮ ಹೊಲದಲ್ಲಿ 20 ಟನ್ ತೇವ ತ್ಯಾಜ್ಯದಿಂದ ಸುಮಾರು 5 ಟನ್ ಗೊಬ್ಬರ ತಯಾರಿಸಿ, ಈ ವರ್ಷ ಸುಮಾರು ₹20,000 ಕೃಷಿ ವೆಚ್ಚವನ್ನು ಕಡಿಮೆ ಮಾಡಿಕೊಳ್ಳಲು ಸಾಧ್ಯವಾಗಿದೆ. ಇತರ ನಗರ ಸ್ಥಳೀಯ ಸಂಸ್ಥೆಗಳು ಕೂಡ ಈ ಮಾದರಿಯನ್ನು ಅನುಸರಿಸಿ ರೈತರಿಗೆ ಸಹಾಯ ಮಾಡಬೇಕೆಂದು ಅವರು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ರೈತರಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಕೋಲಾರ, ರಾಮನಗರ, ತುಮಕೂರು, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ ಜಿಲ್ಲೆಗಳ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ತಮ್ಮ ನಗರಗಳಲ್ಲಿ ಈ ಮಾದರಿಯನ್ನು ಅನುಸರಿಸುವಂತೆ ಸಲಹೆ ನೀಡಿದರು.

ಐಐಎಚ್‌ಎಸ್‌ ಸಂಸ್ಥೆಯ ಕಾರ್ಯ ನಿರ್ವಾಹಕ ನಿರ್ದೇಶಕ ಪ್ರದೀಪ್ ಸೆಕ್ಸೇನಾ, ನಗರಸಭೆ ಅಧ್ಯಕ್ಷೆ ಸುಮಿತ್ರಾ, ಉಪಾಧ್ಯಕ್ಷ ಮಲ್ಲೇಶ್‌ ಮತ್ತಿತರರು ಉಪಸ್ಥಿತರಿದ್ದರು.

8ಕಡಿಬಿಪಿ4-

ದೊಡ್ಡಬಳ್ಳಾಪುರದಲ್ಲಿ ನಗರ-ರೈತ ಸಹಭಾಗಿತ್ವದ ಘನ ತ್ಯಾಜ್ಯ ನಿರ್ವಹಣಾ ಯೋಜನೆ ಕಾರ್ಯಾಗಾರ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಕಸ್ಮಿಕ ಬೆಂಕಿಯಿಂದ ಹೊತ್ತಿ ಉರಿದ ಟಿಪ್ಪರ್‌
ಗಡಿನಾಡು ಬೆಳಗಾವಿ ಕನ್ನಡಿಗರ ದೊಡ್ಡ ಅಸ್ಮಿತೆ