ವಿನಿಮಯ ಪದ್ಧತಿಯಿಂದ ಆರ್ಥಿಕತೆಯ ಬಲ ಸಾಧ್ಯ: ಕುಲಪತಿ ಎಂ. ವೆಂಕಟೇಶ್ವರಲು

KannadaprabhaNewsNetwork |  
Published : Dec 20, 2023, 01:15 AM ISTUpdated : Dec 20, 2023, 04:29 PM IST
ಸ್ನಾತಕ ಮತ್ತು ಸ್ನಾತೋಕೊತ್ತರ ವಿದ್ಯಾರ್ಥಿಗಳಿಗೆ ಚರ್ಚಾ ಸ್ಪರ್ಧೆ’ ಕಾರ್ಯಕ್ರಮ ಉದ್ಘಾಟಿಸಿದ ಕುಲಪತಿ ವೆಂಕಟೇಶ್ವರಲು | Kannada Prabha

ಸಾರಾಂಶ

ಸಹಕಾರಿ ಸಂಘಗಳು ದೇಶದ ಅಭಿವೃದ್ಧಿಯಲ್ಲಿ ಬಹುಮುಖ್ಯ ಪಾತ್ರವಹಿಸುತ್ತವೆ ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎಂ. ವೆಂಕಟೇಶ್ವರಲು ತಿಳಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರು: ಜಿಲ್ಲೆಯ ಕೈಗಾರಿಕೋದ್ಯಮಗಳ ಸ್ಥಾಪನೆಗೆ ಮೂಲ ಕಾರಣ ಸಹಕಾರಿ ಬ್ಯಾಂಕ್‌ಗಳು. ವಿನಿಮಯ ಪದ್ಧತಿಯಿಂದ ಆರ್ಥಿಕತೆಯನ್ನು ಬಲಪಡಿಸುವ ಸಹಕಾರಿ ಸಂಘಗಳು ದೇಶದ ಅಭಿವೃದ್ಧಿಯಲ್ಲಿ ಬಹುಮುಖ್ಯ ಪಾತ್ರವಹಿಸುತ್ತವೆ ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎಂ. ವೆಂಕಟೇಶ್ವರಲು ತಿಳಿಸಿದರು.

ತುಮಕೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ವಿಭಾಗವು ಬೆಂಗಳೂರಿನ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ನಿಯಮಿತ ಸಹಯೋಗದೊಂದಿಗೆ ಮಂಗಳವಾರ ಆಯೋಜಸಿದ್ದ ‘ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಚರ್ಚಾ ಸ್ಪರ್ಧೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜ್ಞಾನಾರ್ಜನೆ ಎಲ್ಲ ವಿಷಯಗಳಲ್ಲೂ ಆಗಬೇಕು. ವಿಭಾಗಗಳ ನಡುವಣ ವಿಷಯ ವಿನಿಮಯವೂ ಕೂಡ ಸಹಕಾರವೆ. ಚರ್ಚೆಗಳಿಂದ ವಿಷಯದ ವಿವಿಧ ಆಯಾಮವನ್ನು ಕಾಣಬಹುದು. ಸೃಜನಾತ್ಮಕ ಕಲ್ಪನೆಗಳು ಹುಟ್ಟುತ್ತವೆ. ದೇಶದ ಸರ್ವತೋಮುಖ ಅಭಿವೃದ್ಧಿಗೆ ಸಹಕಾರವಾಗುವ ಕಾರ್ಯಗಳನ್ನು ಕೈಗೊಳ್ಳಲು ಪ್ರೇರೇಪಿಸುತ್ತವೆ. ಬಲವಾದ ಗುರಿಯಿದ್ದಾಗ ಸರಿಯಾದ ತಯಾರಿ ಇರುತ್ತದೆ ಎಂದರು.

ಜಿಲ್ಲಾ ಸಹಕಾರ ಯೂನಿಯನ್ ನಿಗಮದ ಅಧ್ಯಕ್ಷ ಬಿ.ಜಿ. ವೆಂಕಟೇಗೌಡ ಮಾತನಾಡಿ, 45000 ಕ್ಕೂ ಹೆಚ್ಚು ಸಹಕಾರ ಸಂಘಗಳು ನಮ್ಮ ದೇಶದಲ್ಲಿವೆ. ಆರ್ಥಿಕ ಸಬಲತೆಯನ್ನು ಬಡಜನರಿಗೆ ನೀಡುತ್ತಿವೆ. ಶಾಲಾ-ಕಾಲೇಜು ಪಠ್ಯಗಳಲ್ಲಿ ಸಹಕಾರ ವಿಷಯವನ್ನು ಅಳವಡಿಸಬೇಕು. ನೇರವಾಗಿ ಸಹಾಯ ಮಾಡಲು ಸಾಧ್ಯವಾಗುವ ಏಕೈಕ ಕ್ಷೇತ್ರವಿದು. ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಕಲ್ಪಿಸುವ ಸಂಘವಿದು ಎಂದು ಹೇಳಿದರು.

ಜಿಲ್ಲಾ ಸಹಕಾರ ಯೂನಿಯನ್ ನಿಗಮದ ಮುಖ್ಯಕಾರ್ಯನಿರ್ವಹಣಾಧಿಕಾರಿ ಮಹಾಂತೇಶ ಹಿರೇಮಠ ಮಾತನಾಡಿ, ತುಮಕೂರು ಜಿಲ್ಲೆಯಲ್ಲಿ 2024 ಸಹಕಾರ ಸಂಘಗಳಿವೆ. ಅದರಲ್ಲಿ 1324 ಹಾಲು ಉತ್ಪಾದಕರ ಸಂಘಗಳು, 236 ಕೃಷಿ ಪತ್ತಿನ ಸಹಕಾರ ಸಂಘಗಳು, 11 ಪಟ್ಟಣ ಪತ್ತಿನ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ರಾಜ್ಯದಲ್ಲಿ ಒಟ್ಟು 21 ಜಿಲ್ಲಾಕೇಂದ್ರ ಬ್ಯಾಂಕ್‌ಗಳು ಗ್ರಾಮೀಣ ಭಾಗದ ರೈತರಿಗೆ ಆರ್ಥಿಕ ಸಹಾಯ ಮಾಡುತ್ತಿವೆ ಎಂದು ತಿಳಿಸಿದರು.

ತುಮಕೂರು ವಿಶ್ವವಿದ್ಯಾನಿಲಯದ ಕುಲಸಚಿವೆ ನಾಹಿದಾ ಜಮ್‌ ಜಮ್ ಮಾತನಾಡಿ, ಸಮಾನ ನಷ್ಟ ಮತ್ತು ಲಾಭವನ್ನು ಹೊಂದಿರುವ ಸಹಕಾರ ಸಂಘಗಳನ್ನು ಸ್ಥಾಪಿಸುವುದು ದೇಶಕ್ಕೆ ಅನುಕೂಲಕರವಾಗಿದೆ. ರೈತೋತ್ಪನ್ನಗಳು, ಸಣ್ಣಕೈಗಾರಿಕೆ, ಸಹಕಾರಿ ಬ್ಯಾಂಕ್‌ಗಳು, ಕೃಷಿ, ಮಾರುಕಟ್ಟೆ, ತಯಾರಿಕ, ಬೀಜ, ಸಾವಯವ ಕ್ಷೇತ್ರದಲ್ಲಿ ಸಹಕಾರಿ ಸಂಘಗಳು ಪ್ರಮುಖ ಪಾತ್ರ ವಹಿಸುತ್ತವೆ. ತಿದ್ದುಪಡಿ 97ರಲ್ಲಿ ಅನುಮೋದನೆಗೊಂಡಿರುವ ಸಹಕಾರಿ ಸಂಘಗಳು ಸಾಂವಿಧಾನಿಕ ಹಕ್ಕು ಪಡೆದು ದೇಶದ ಅಭಿವೃದ್ಧಿಯಲ್ಲಿ ಮಹತ್ವಪೂರ್ಣ ಪಾತ್ರವಹಿಸುತ್ತಿವೆ ಎಂದರು.

ವಿಭಾಗ ಮಟ್ಟದ ಚರ್ಚಾ ವಿಷಯವಾಗಿ ಸ್ನಾತಕ ವಿದ್ಯಾರ್ಥಿಗಳಿಗೆ ‘ಮಹಿಳೆಯರು ಮತ್ತು ಯುವಜನರು ಸಹಕಾರ ಕ್ಷೇತ್ರದಲ್ಲಿ ಸಕ್ರಿಯವಾಗಿ ಪಾಲ್ಗೊಂಡಾಗ ಮಾತ್ರವೇ ರಾಷ್ಟ್ರದ ಅರ್ಥ ವ್ಯವಸ್ಥೆಯನ್ನು ಬಲಗೊಳಿಸಲು ಸಾಧ್ಯ’, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ‘ರಾಷ್ಟ್ರದಲ್ಲಿ ಬಡತನ ನಿವಾರಣೆ, ಉದ್ಯೋಗ ಸೃಷ್ಟಿ ಹಾಗೂ ಸಮಾನತೆ ಸಾಧಿಸಲು ಸಹಕಾರ ಚಳುವಳಿಯ ಬೆಳವಣಿಗೆಯಿಂದ ಮಾತ್ರವೇ ಸಾಧ್ಯ’ ವಿಷಯದ ಕುರಿತು ಜಿಲ್ಲೆಯ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪರ-ವಿರೋಧದ ಚರ್ಚೆ ಮಂಡಿಸಿದರು.

ಸ್ನಾತಕ ವಿಭಾಗದಲ್ಲಿ ವಿವಿ ಕಲಾ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿ ಎಂ. ಸವಿತಾ ಪ್ರಥಮ ಸ್ಥಾನ, ತಿಪಟೂರಿನ ಪಲ್ಲಗಟ್ಟಿ ಅಡವಪ್ಪ ಕಾಲೇಜಿನ ಮನಃಶಾಸ್ತ್ರ ವಿಭಾಗದ ವಿದ್ಯಾರ್ಥಿ ಚರಣ್‌ರಾಜ್ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟದ ಚರ್ಚಾ ಸ್ಪರ್ಧೆಗೆ ಆಯ್ಕೆಯಾದರು. ಚಿಕ್ಕನಾಯಕನಹಳ್ಳಿ ನವೋದಯ ಪ್ರಥಮ ದರ್ಜೆ ಕಾಲೇಜಿನ ಎಸ್. ತೇಜಸ್ವಿನಿ ತೃತೀಯ ಸ್ಥಾನಕ್ಕೆ ಭಾಜನರಾದರು.

ಸ್ನಾತಕೋತ್ತರ ವಿಭಾಗದಲ್ಲಿ ವಿವಿಯ ಪತ್ರಿಕೋದ್ಯಮಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿ ಎಸ್.ಕೆ. ಸುಪ್ರೀತ ಪ್ರಥಮ ಸ್ಥಾನ, ಸಾರ್ವಜನಿಕ ಆಡಳಿತ ವಿಭಾಗದ ವಿದ್ಯಾರ್ಥಿ ಜಯರಾಮ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟದ ಚರ್ಚಾ ಸ್ಪರ್ಧೆಗೆ ಆಯ್ಕೆಯಾದರು. ಭೌತಶಾಸ್ತ್ರ ವಿಭಾಗದ ವಿದ್ಯಾರ್ಥಿ ಮೇಘನ ತೃತೀಯ ಸ್ಥಾನಕ್ಕೆ ಭಾಜನರಾದರು.

ವಿವಿ ವಿದ್ಯಾರ್ಥಿಕ್ಷೇಮಾಭಿವೃದ್ಧಿ ವಿಭಾಗದ ನಿರ್ದೇಶಕ ಪ್ರೊ.ಜಿ. ಬಸವರಾಜ, ಕಲಾ ನಿಕಾಯದ ಡೀನ್‌ ಪ್ರೊ.ಎಚ್.ಕೆ. ಶಿವಲಿಂಗಸ್ವಾಮಿ, ವಿವಿ ಹಣಕಾಸು ಅಧಿಕಾರಿ ಪ್ರೊ.ಪಿ. ಪರಮಶಿವಯ್ಯ, ಸಮಾಜಕಾರ್ಯ ವಿಭಾಗದ ಪ್ರಾಧ್ಯಾಪಕ ಪ್ರೊ.ಕೆ.ಜಿ. ಪರಶುರಾಮ, ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಕೆ. ಮಹಾಲಿಂಗ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಕಾರ್ಯಕ್ರಮದಲ್ಲಿ ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಕೆ. ಪ್ರಸನ್ನಕುಮಾರ್ ಉಪಸ್ಥಿತರಿದ್ದರು.

 

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಾಸಕರಿಗೆ ಐಪಿಎಲ್‌ 3 ಟಿಕೆಟ್ ಫ್ರೀ
ಲೆಕ್ಕಕ್ಕಿಲ್ಲದ ಎಸ್ಸೆಸ್ಸೆಲ್ಸಿ ಹಿಂದಿ ಪರೀಕ್ಷೆ ಇಂದು