ಕೊಪ್ಪಳ: ಮಹಾತ್ಮ ಗಾಂಧಿ ನರೇಗಾ ಯೋಜನೆ ಗ್ರಾಮೀಣ ಕೂಲಿಕಾರರಿಗೆ ಆರ್ಥಿಕ ಸದೃಢತೆಗೆ ದಾರಿಯಾಗಿದೆ ಎಂದು ಕೊಪ್ಪಳ ತಾಪಂ ನರೇಗಾ ಸಹಾಯಕ ನಿರ್ದೇಶಕ ಯಂಕಪ್ಪ ಹೇಳಿದರು.
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೇವಲ ಸಾಮೂದಾಯಿಕ ಕಾಮಗಾರಿ ಮಾತ್ರವಲ್ಲದೇ ವೈಯಕ್ತಿಕ ಕಾಮಗಾರಿ ಮಾಡಿಕೊಳ್ಳಲು ಅವಕಾಶವಿರುತ್ತದೆ. ಆರ್ಥಿಕ ವರ್ಷದಲ್ಲಿ ಒಂದು ಕುಟುಂಬಕ್ಕೆ 100 ದಿನಗಳ ಕೆಲಸ ನೀಡಲಾಗುತ್ತದೆ. ಗ್ರಾಮೀಣ ಭಾಗದ ಕುಟುಂಬಗಳು ಕೆಲಸ ಅರಸಿ ಬೇರೆ ಕಡೆ ಗುಳೆ ಹೋಗದಂತೆ ತಡೆದು ಸ್ಥಳೀಯವಾಗಿ ವೈಯಕ್ತಿಕ ಹಾಹೂ ಸಾಮೂದಾಯಿಕ ಕಾಮಗಾರಿಗಳಲ್ಲಿ ಕೂಲಿ ಕೆಲಸ ನೀಡುವ ಉದ್ದೇಶ ನೆರವೇರುತ್ತಿರುವುದು ಖುಷಿಯ ಸಂಗತಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಯೋಜನೆಯ ಮೂಲ ಉದ್ದೇಶ ಈಡೇರುತ್ತಿರುವುದು ಕೂಲಿಕಾರರಲ್ಲಿ ಸಂತಸ ಮೂಡಿಸಿದೆ ಎಂದರು.
ನರೇಗಾ ಯೋಜನೆಯಿಂದ ಬಡಕುಟುಂಬಗಳು ಸಾಕಷ್ಟು ಪ್ರಯೋಜನೆ ಪಡೆದಿವೆ. ಇದರಿಂದ ಗ್ರಾಮೀಣ ಭಾಗದಲ್ಲಿ ಬಡತನ ನಿವಾರಣೆಯತ್ತ ಹೆಜ್ಜೆ ಇಟ್ಟಿದೆ. ನರೇಗಾ ಯೋಜನೆ ಕೇವಲ ಕೂಲಿ ಕೆಲಸ ಮಾತ್ರ ನೀಡದೇ ಕೂಲಿಕಾರರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದೆ. ಗ್ರಾಮ ಆರೋಗ್ಯದಡಿ ಎಲ್ಲ ಕೂಲಿಕಾರರಿಗೆ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಕೈಗೊಂಡು ಬಿಪಿ, ಶುಗರ್, ಅನೆಮಿಯಾ, ಕ್ಷಯ ತಪಾಸಣೆಗೆ ಒಳಪಡಿಸಿ ಕೂಲಿಕಾರರ ಆರೋಗ್ಯದ ನಿಗಾ ವಹಿಸುತ್ತಿರುವುದರಿಂದ ಕೂಲಿಕಾರರು ಕೆಲಸದ ನಂತರ ಆರೋಗ್ಯ ಬಗ್ಗೆ ಕಾಳಜಿ ವಹಿಸಬೇಕು ಎಂದರು.ಗ್ರಾಮ ಆರೋಗ್ಯ ಜಿಲ್ಲಾ ಸಂಯೋಜಕ ಸಿದ್ದಲಿಂಗಯ್ಯ ಮಾತನಾಡಿ, ಆರೋಗ್ಯ ಹಣದಿಂದ ಕೊಂಡುಕೊಳ್ಳಲು ಸಾಧ್ಯವಿಲ್ಲ. ಇದರ ಬಗ್ಗೆ ಕಾಳಜಿ ವಹಿಸದೇ ಇದ್ದಲ್ಲಿ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವದು ಖಚಿತ ಎಂದರು.
ಗ್ರಾಪಂದಿಂದ ಆಯೋಜಿಸಿದ 5 ಕೆಜಿ ಕೇಕ್ ನ ಮೇಲೆ ನರೇಗಾ ದಿವಸ್ ಆಚರಣೆ ಎಂಬ ಶಿರ್ಷಿಕೆ ಒಳಗೊಂಡ ಕೂಲಿಕಾರರು ಮತ್ತು ಕಾಯಕ ಬಂಧುಗಳು ಕೆಕ್ ಕತ್ತರಿಸುವ ಮೂಲಕ ಸಂಭ್ರಮಿಸಿದರು. ನರೇಗಾ ದಿವಸ ಕೂಲಿಕಾರರ ದಿನವೆಂದು ಖುಷಿಪಟ್ಟರು.