ಕನ್ನಡಪ್ರಭವಾರ್ತೆ ಪುತ್ತೂರು: ಹಿಂದೂ ಧರ್ಮದಲ್ಲಿ ಮಂತ್ರಾಕ್ಷತೆಗೆ ಬಹಳ ಮಹತ್ವವಿದೆ. ಇದೀಗ ಅಯೋಧ್ಯೆಯಿಂದ ತರಲಾದ ಮಂತ್ರಾಕ್ಷತೆಯನ್ನು ಪ್ರತಿಯೊಬ್ಬ ಹಿಂದೂ ಮನೆಗೆ ತಲುಪಿಸಿ ಶ್ರೀರಾಮ ಕೈಂಕರ್ಯದಲ್ಲಿ ತೊಡಗಿಕೊಂಡಲ್ಲಿ ಶ್ರೀರಾಮನ ಪುನಃ ಪ್ರತಿಷ್ಠೆಗೆ ಅರ್ಥ ಬರುವ ಜತೆಗೆ ಹಿಂದೂ ಧರ್ಮ ಉಜ್ವಲಿಸುತ್ತದೆ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಸ್ವಾಮೀಜಿ ಹೇಳಿದ್ದಾರೆ.
ವಿಶ್ವ ಹಿಂದೂ ಪರಿಷತ್ನ ಪ್ರಾಂತ ಪ್ರಮುಖ್ ನ.ಸೀತಾರಾಮ ಮಾತನಾಡಿ, ೧೫೨೮ ರಲ್ಲಿ ಭವ್ಯ ಮಂದಿರವನ್ನು ಹೊರಗಡೆ ಶಕ್ತಿ ನಾಶ ಮಾಡಿದೆ. ರಾಮಮಂದಿರ ಪುನರ್ ನಿರ್ಮಾಣದ ಹೋರಾಟಗಳು ಕೈಗೊಂಡು ೪೯೬ ವರ್ಷಗಳು ಕಳೆದಿದ್ದರೂ ಹಿಂದೂಗಳ ಸಹನೆ ಶಕ್ತಿಯಾಗಿ ರೂಪುಗೊಂಡಿದೆ. ಆ ಬಳಿಕದ ದಿನಗಳಲ್ಲಿ ಹಿಂದೂ ಧರ್ಮವನ್ನು ಜಗತ್ತು ನೋಡುವ ದೃಷ್ಟಿ ಬದಲಾಯಿತು. ಭಕ್ತರ ಭಾವನೆಗೆ ತಕ್ಕಂತೆ ಸರಕಾರದ ಅನುದಾನವಿಲ್ಲದೆ ಭವ್ಯ ತೀರ್ಥ ಕ್ಷೇತ್ರ ಜಗತ್ತಿನ ತೀರ್ಥ ಕ್ಷೇತ್ರವಾಗಿ ರೂಪುಗೊಳ್ಳಲಿದೆ ಎಂದರು.
ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಜಿಲ್ಲಾ ಸಂಚಾಲಕ ಡಾ.ಕೃಷ್ಣ ಪ್ರಸನ್ನ ಪುತ್ತೂರು, ಜಿಲ್ಲಾ ಸಂಘ ಸಂಚಾಲಕ ವಿನಯಚಂದ್ರ, ವಿಭಾಗ ಕಾರ್ಯದರ್ಶಿ ದೇವಿಪ್ರಸಾದ್ ಇದ್ದರು. ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಜಿಲ್ಲಾ ಅಧ್ಯಕ್ಷ ರವೀಂದ್ರ ಪಿ. ನಿರೂಪಿಸಿದರು.