ಹೊನ್ನಾವರ:ಮುಂದಿನ ಪೀಳಿಗೆಯ ಸಮಗ್ರ ಹಿತದೃಷ್ಟಿಯಿಂದ ಮೀನುಗಾರರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದು ಸಚಿವ ಮಂಕಾಳ ವೈದ್ಯ ಕರೆ ನೀಡಿದರು.
ಕಡಲತೀರಗಳ ಸ್ವಚ್ಛ ಪರಿಸರ ಹಾಗೂ ನೈಸರ್ಗಿಕ ಸಂಪತ್ತು ಉಳಿಸಿಕೊಳ್ಳಬೇಕಿದೆ. ಸಚಿವ ಮಂಕಾಳು ವೈದ್ಯರು ಸಂಕಷ್ಟದಲ್ಲಿರುವ ಈ ಭಾಗದ ಮೀನುಗಾರರ ಹಿತರಕ್ಷಣೆ ಮಾಡುವರೆಂಬ ಆಶಯ ವ್ಯಕ್ತಪಡಿಸಿರುವ ಅವರು, ಎಂದಿನಂತೆ ಸಮಾಜಮುಖಿ ಕಾರ್ಯ ಮುಂದುವರಿಸಿಕೊಂಡು ಹೋಗುವುದಾಗಿ ತಿಳಿಸಿದರು.
ಶಿಕ್ಷಕ ಧರ್ಮ ವಿ. ನಾಯ್ಕ ಮಾತನಾಡಿ, ವಿದ್ಯಾರ್ಥಿಗಳಿಗೆ ಸಂಸ್ಕಾರಯುತ ಶಿಕ್ಷಣದ ಅಗತ್ಯವಿದೆ. ಉತ್ತಮ ಸಮಾಜದ ನಿರ್ಮಾಣಕ್ಕೆ ಇದು ಅಡಿಪಾಯವಿದ್ದಂತೆ ಎಂದರು.ಹೊನ್ನಾವರ ಫೌಂಡೇಶನ್ ಅಧ್ಯಕ್ಷ ಸಚ್ಚಿದಾನಂದ ಹೆಗಡೆ ಮಾತನಾಡಿ, ಮೀನಿನ ಸಾಕಣೆ ಮತ್ತು ಉತ್ಪಾದನೆಯಲ್ಲಿ ಹೊಸ ಆವಿಷ್ಕಾರಗಳುಬಂದಿವೆ. ಸರ್ಕಾರ ಈ ದಿಸೆಯಲ್ಲಿ ಮೀನುಗಾರರಿಗೆ ಪ್ರೋತ್ಸಾಹ ನೀಡಿದರೆ ಮೀನಿನ ಉತ್ಪಾದನೆಯ ಹೆಚ್ಚಳದೊಂದಿಗೆ ಈ ಕ್ಷೇತ್ರದ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ ಎಂದು ಸಚಿವರ ಗಮನ ಸೆಳೆದರು.
ಅಧ್ಯಕ್ಷತೆ ವಹಿಸಿದ್ದ ಸೇಫ್ ಸ್ಟಾರ್ ಸಂಸ್ಥೆ ಅಧ್ಯಕ್ಷ ಜಿ.ಜಿ. ಶಂಕರ ಮಾತನಾಡಿ, ಕಾಸರಕೋಡ ಟೊಂಕದ ಕಡಲತೀರದ ನಿವಾಸಿಗಳ ಮೇಲೆ ಉದ್ದೇಶಿತ ವಾಣಿಜ್ಯ ಬಂದರು ನಿರ್ಮಾಣ ಯೋಜನೆಯ ತೂಗುಗತ್ತಿ ನೇತಾಡುತ್ತಿದೆ. ಇಲ್ಲಿನ ಮೀನುಗಾರರು 10 ವರ್ಷದಿಂದ ನೆಮ್ಮದಿ ಕಳೆದುಕೊಂಡು ಭಯದಲ್ಲೇ ಬದುಕುತ್ತಿದ್ದಾರೆ ಎಂದರು.ಈ ವರೆಗೆ ಆಳಿಹೋದ ಜನಪ್ರತಿನಿಧಿಗಳ ಪರಿಸರ ಮತ್ತು ಜನವಿರೋಧಿ ಪಾತ್ರದ ಬಗ್ಗೆ ಪ್ರಸ್ತಾಪಿಸಿ ಈ ವರೆಗಿನ ಸರ್ಕಾರಗಳ ನಡೆಯನ್ನು ಪರೋಕ್ಷವಾಗಿ ಟೀಕಿಸಿದರು. ಮೀನುಗಾರರ ಸಮುದಾಯದ ಮಂಕಾಳು ವೈದ್ಯರೇ ನೀವೇ ಸಚಿವರಾಗಿದ್ದು ಇಲ್ಲಿಯ ಮೀನುಗಾರರ ಈ ಪ್ರಮುಖ ಸಮಸ್ಯೆ ಬಗೆಹರಿಸುವರೆಂಬ ಆಶಯವಿದೆ ಎಂದು ಹೇಳಿದರು.
ಮಾಜಿ ತಾಪಂ ಸದಸ್ಯ ಗಣಪಯ್ಯ ಕನ್ಯಾ ಗೌಡ, ಗ್ರಾಪಂ ಸದಸ್ಯ ಜಗದೀಶ ತಾಂಡೇಲ್, ಯುವಕ ಸಮಿತಿ ಗೌರವಾಧ್ಯಕ್ಷ ರಮೇಶ ತಾಂಡೇಲ್, ಉಪಾಧ್ಯಕ್ಷ ಮಹೇಶ ತಾಂಡೇಲ್, ಕಾರ್ಯದರ್ಶಿ ಪಿತಾಂಬರ ತಾಂಡೇಲ್, ಗಿರೀಶ ತಾಂಡೇಲ್, ಡಾ. ಪ್ರಕಾಶ ಮೇಸ್ತ, ವಾಡೆಯ ಅಧ್ಯಕ್ಷ ರಾಜೇಶ್ ತಾಂಡೇಲ್, ಜೈನಜಟಗೇಶ್ವರ ಯುವಕ ಸಮಿತಿ ಅಧ್ಯಕ್ಷ ಭಾಸ್ಕರ ತಾಂಡೇಲ್, ರಮೇಶ ಎಂ. ತಾಂಡೇಲ್, ಗಾಯಕ ಮಹೇಶ ಆಚಾರ್ಯ ಇದ್ದರು.ಇದಕ್ಕೂ ಮುನ್ನ ಸಾಮಾಜಿಕ ಹೋರಾಟಗಾರ ಚಂದ್ರಕಾಂತ ಕೊಚರೇಕರ ಮತ್ತು ಧರ್ಮ ವಿಷ್ಣು ನಾಯ್ಕ ಅವರ ಶೈಕ್ಷಣಿಕ ಕ್ಷೇತ್ರದಲ್ಲಿನ ಕಾರ್ಯ ಗುರುತಿಸಿ ಗೌರವಿಸಲಾಯಿತು.