ಕನ್ನಡಪ್ರಭ ವಾರ್ತೆ ವಿಜಯಪುರ
ಶಿಕ್ಷಕರಾದವರು ಮಕ್ಕಳಲ್ಲಿ ಮೂಢನಂಬಿಕೆ ಬಿತ್ತದೇ ವೈಚಾರಿಕತೆಯ ನೆಲೆಗಟ್ಟಿನಲ್ಲಿ ಶಿಕ್ಷಣ ಕಲಿಸುವಂತಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹೇಳಿದರು.ಬಬಲೇಶ್ವರ ತಾಲೂಕಿನ ದೇವರಗೆಣ್ಣೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಪೋಷಕರ-ಶಿಕ್ಷಕರ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ತಾನು ಉನ್ನತ ಅಧಿಕಾರಿಯಾಗಬೇಕು. ವಿಜ್ಞಾನಿಯಾಗಬೇಕು, ರಾಜಕಾರಣಿಯಾಗಬೇಕು ಎಂಬ ದೊಡ್ಡ ದೊಡ್ಡ ಗುರಿ ಹೊಂದುವಂತೆ ಮಾಡಬೇಕಿದೆ. ಕನ್ನಡ ಶಾಲೆಯಲ್ಲಿ ಕಲಿತವರು ಇಂದು ದೊಡ್ಡ ದೊಡ್ಡ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಅದರಲ್ಲಿ ತಾವು ಒಬ್ಬರು ಎಂದು ತಾವು ನಡೆದು ಬಂದ ಹಾದಿಯ ಏರಿಳಿತಗಳನ್ನು ಹಂಚಿಕೊಳ್ಳುವ ಮೂಲಕ ಮಕ್ಕಳಲ್ಲಿ ಹಾಗೂ ಶಿಕ್ಷಕರಲ್ಲಿ ಉತ್ಸಾಹ ತುಂಬಿದರು. ಈ ಶಾಲೆಗೆ ₹50 ಸಾವಿರ ಸಹಾಯಧನ ನೀಡುವುದಾಗಿ ಘೋಷಿಸಿದರು. ಅದರಿಂದ ಬರುವ ಬಡ್ಡಿಯ ಹಣದಲ್ಲಿ ಈ ಶಾಲೆಯ 7ನೇ ತರಗತಿಯಲ್ಲಿ ಹೆಚ್ಚು ಅಂಕ ಪಡೆಯುವ ಮಕ್ಕಳಿಗೆ ಪ್ರತಿವರ್ಷ ನಗದು ಬಹುಮಾನ ನೀಡುವಂತಾಗಲಿ ಎಂದು ತಿಳಿಸಿದರು.ನಿವೃತ್ತ ಶಿಕ್ಷಕ ವಿ.ವಿ.ಅರಕೇರಿ ಮಾತನಾಡಿ, ಮಕ್ಕಳ ಮನಸ್ಸು ಮೃದುವಾದುದು. ಉತ್ತಮ ಶಿಕ್ಷಣದ ಜೊತೆಗೆ ನೈತಿಕತೆಯ ಶಿಕ್ಷಣವನ್ನು ಕಲಿಸಿ ಕೊಡಬೇಕು. ಈ ಸರ್ಕಾರಿ ಶಾಲೆಯಲ್ಲಿ ಕಲಿತ ಅನೇಕರು ಸರಕಾರಿ ಹುದ್ದೆಗಳನ್ನು ಅಲಂಕರಿಸಿದ್ದು ಸಂತೋಷದ ಸಂಗತಿ ಎಂದರು.ಸಾಹಿತಿ ಗಣಪತಿ ಚಲವಾದಿ ಮಾತನಾಡಿ, ಮಕ್ಕಳ ಕಲಿಕೆಯಲ್ಲಿ ಪ್ರಗತಿ ಸಾದಿಸುವ ನಿಟ್ಟಿನಲ್ಲಿ ಶಿಕ್ಷಕರೊಂದಿಗೆ ಪೋಷಕರೂ ಕೂಡ ಹೆಚ್ಚಿನ ಕಾಳಜಿ ತೆಗೆದುಕೊಳ್ಳಬೇಕಾಗುತ್ತದೆ ಎಂದರು.
ಮುಖ್ಯಶಿಕ್ಷಕಿ ಲಕ್ಷ್ಮೀ ಮೆಳ್ಳಿಗೇರಿಗೆ ಹಾಗೂ ಮೊರಾರ್ಜಿ ವಸತಿ ಶಾಲೆಗೆ ಪ್ರವೇಶ ಪಡೆದಿರುವ 6ನೇ ತರಗತಿ ಮಕ್ಕಳನ್ನು ಸನ್ಮಾನಿಸಲಾಯಿತು.ಮುಖ್ಯಗುರುಮಾತೆ ಜಿ.ಎ.ಹಿರೇಮಠ ಸ್ವಾಗತಿಸಿದರು. ಎಚ್.ಎಚ್.ಇಂಗಳಗಿ ನಿರೂಪಿಸಿದರು. ಆರ್.ವಿ.ಉಪ್ಪಾರ ವಿಷಯ ಮಂಡಿಸಿದರು. ಎಸ್.ಬಿ.ಹಡಪದ ವಂದಿಸಿದರು. ಶಿವು ಕಾಂಬಳೆ, ಎಸ್ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತದ್ದರು.