ಭ್ರಷ್ಟಾಚಾರಿ, ಭಯೋತ್ಪಾದಕರಾಗುತ್ತಿರುವ ವಿದ್ಯಾವಂತರು

KannadaprabhaNewsNetwork |  
Published : Aug 21, 2024, 12:39 AM IST
ಪ್ರತಿಭಾ ಪುರಸ್ಕಾರ | Kannada Prabha

ಸಾರಾಂಶ

ಭ್ರಷ್ಟಾಚಾರಿ, ಭಯೋತ್ಪಾದಕರಾಗುತ್ತಿರುವ ವಿದ್ಯಾವಂತರು

ಕನ್ನಡಪ್ರಭ ವಾರ್ತೆ ತುಮಕೂರು

ವಿದ್ಯಾವಂತರೇ ವಿವಿಧ ಸಮಸ್ಯೆ ಸೃಷ್ಟಿ ಮಾಡುತ್ತಿದ್ದು, ಶಿಕ್ಷಣದ ಜೊತೆಗೆ ವ್ಯಕ್ತಿತ್ವ ರೂಪಿಸುವ ಕೆಲಸವೂ ಆಗಬೇಕಾಗಿದೆ ಎಂದು ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.

ನಗರದ ಸ್ಟೂಡೆಂಟ್ ಇಸ್ಲಾಮಿಕ್ ಆರ್ಗೈನೇಜೇಷನ್ ಆಫ್ ಇಂಡಿಯಾ ವತಿಯಿಂದ ಆಯೋಜಿಸಿದ್ದ 18ನೇ ವರ್ಷದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಭಿನಂದಿಸಿ ಮಾತನಾಡಿದರು.

ಇಡೀ ವಿಶ್ವದಲ್ಲಿಯೇ ಭಾರತದ ಸಂವಿಧಾನಕ್ಕೆ ಮಹತ್ವವಿದೆ. ಬಡವ, ಬಲ್ಲಿದ ಎಲ್ಲರೂ ಸಹ ಇದರ ಅಡಿಯಲ್ಲಿ ರಕ್ಷಣೆ ಪಡೆಯಬಹುದು. ಯಾವುದೇ ವ್ಯಕ್ತಿ ತಾನಾಡುವ ಮಾತು ಮತ್ತು ಮಾಡುವ ಕೆಲಸ ದೇಶದ ಅಭಿವೃದ್ಧಿಗೆ ಪೂರಕವಾಗಿದ್ದರೆ ಆತ ದೇಶಪ್ರೇಮಿ. ದೇಶ ಅಭಿವೃದ್ಧಿಗೆ ಮಾರಕವಾಗಿದ್ದರೆ ಆತನೇ ದೇಶದ್ರೋಹಿ. ಹೆಚ್ಚು ವಿದ್ಯಾವಂತರೇ ಕೋಮವಾದಿ, ಭ್ರಷ್ಟಾಚಾರಿ, ಭಯೋತ್ಪಾದಕರಾಗಿ ಬದಲಾಗುತ್ತಿದ್ದಾರೆ. ಹಾಗಾಗಿ ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳು ಸೇರಿದಂತೆ ಸಂಪೂರ್ಣ ಸಮಾಜಮುಖಿ ವ್ಯಕ್ತಿಗಳನ್ನಾಗಿ ರೂಪಿಸುವ ಅಗತ್ಯವಿದೆ ಎಂದರು.

ಪ್ರಪಂಚದಲ್ಲಿ ಡಾಕ್ಟರ್, ಎಂಜಿನಿಯರ್, ವಿಜ್ಞಾನಿ, ವಕೀಲರಾಗಲು ಕಾಲೇಜುಗಳಿವೆ. ಆದರೆ ಮಾನವೀಯತೆ, ಸಹೋದರತೆ, ಪರಸ್ಪರ ಪ್ರೀತಿಯಿಂದ ಸತ್ಪ್ರಜೆಯಾಗಿ ಬದುಕುವುದನ್ನು ಕಲಿಸುವ ಯಾವ ಕಾಲೇಜುಗಳೂ ಇಲ್ಲ. ಹಾಗಾಗಿಯೇ ಸಾಂಪ್ರದಾಯಕ ಶಿಕ್ಷಣದ ಜೊತೆಗೆ ಧಾರ್ಮಿಕ ಮತ್ತು ಲೌಕಿಕ ಜ್ಞಾನದ ಶಿಕ್ಷಣವೂ ಅಗತ್ಯವಿದೆ. ಸಮಸ್ಯೆಯನ್ನು ಸೃಷ್ಟಿಸುವವನು ನಿಜವಾದ ನಾಯಕನಲ್ಲ. ಸಮಸ್ಯೆಯ ಮೂಲ ತಿಳಿದು ಅದನ್ನು ಹೋಗಲಾಡಿಸುವವನೇ ನಿಜವಾದ ನಾಯಕ. ಇಂದು ಸಮಾಜವನ್ನು ಒಡೆಯುವವರ ಸಂಖ್ಯೆಯೇ ಹೆಚ್ಚಾಗಿದೆ. ಅವುಗಳ ನಡುವೆ ಇಂತಹ ಕಾರ್ಯಕ್ರಮಗಳ ಮೂಲಕ ಎಸ್ಐಒ ಸಮಾಜ ಕಟ್ಟುವ ಕೆಲಸ ಮಾಡುತ್ತಿದೆ. ಭವಿಷ್ಯದ ಪ್ರಜೆಗಳಾದ ಮಕ್ಕಳ ಮುಂದಿರುವ ಗುರಿಗಳೇನು, ಅವುಗಳನ್ನು ತಲುಪಲು ಇರುವ ದಾರಿಗಳೇನು ಎಂಬುದನ್ನು ಮನವರಿಕೆ ಮಾಡಿಕೊಡುವ ಕೆಲಸ ಮಾಡುತ್ತಿದೆ ಎಂದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಎಸ್ಐಒ ರಾಜ್ಯ ಕಾರ್ಯದರ್ಶಿ ಮಹಮದ್ ನಾಸೀರ್, ಕಳೆದ 40 ವರ್ಷಗಳಿಂದ ಶಿಕ್ಷಣ ಮತ್ತು ಸಮಾಜಸೇವೆಯಲ್ಲಿ ಎಸ್ಐಒ ತೊಡಗಿಕೊಂಡಿದೆ. ಕಳೆದ 22 ವರ್ಷಗಳಿಂದ ಪ್ರತಿಭಾನ್ವಿತ ಮಕ್ಕಳನ್ನು ಗುರುತಿಸಿ, ಅವರನ್ನು ಪ್ರೋತ್ಸಾಹಿಸುವ ಕೆಲಸವನ್ನು ಮಾಡುತ್ತಾ ಬಂದಿದೆ ಎಂದರು.

ಸಾನಿಧ್ಯವನ್ನು ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯಸ್ವಾಮೀಜಿ ವಹಿಸಿದ್ದರು. ವೇದಿಕೆಯಲ್ಲಿ ಮಾಜಿ ಶಾಸಕರಾದ ಎಸ್.ಶಫಿ ಅಹಮದ್, ಡಾ.ರಫೀಕ್ ಅಹಮದ್, ಮುಖಂಡರಾದ ಇಕ್ಬಾಲ್ ಅಹಮದ್ ಮಾತನಾಡಿದರು. ಎಸ್ಪಿ ಅಶೋಕ.ಕೆ.ವಿ, ಶಾಹೀನ್ ಗ್ರೂಫ್ ಅಫ್ ಎಜುಕೇಷನ್‌ನ ಅಧ್ಯಕ್ಷ ಡಾ.ಅಬ್ದುಲ್ ಖದೀರ್, ಜಿಲ್ಲಾ ಅಲ್ಪಸಂಖ್ಯಾತ ಅಧಿಕಾರಿ ಶಬ್ಬೀರ್ ಅಹಮದ್, ಪ್ರೊ.ಅಸಾದುಲ್ಲಾ ಖಾನ್, ತಾಜುದ್ದೀನ್ ಷರೀಫ್,ಅಬ್ದುಲ್ ಜಬ್ಬರ ಸಾಬ್, ಪಿಯುಡಿಡಿಪಿಐ ಡಾ.ಬಾಲ ಗುರುಮೂರ್ತಿ, ಎಸ್.ಐ.ಓ ಜಿಲ್ಲಾಧ್ಯಕ್ಷ ಖಲೀಲ್ ಅವರು ಉಪಸ್ಥಿತರಿದ್ದರು.

ಕೋಟ್‌ ..

ಶಿಕ್ಷಣವೆಂದರೆ ಬದುಕಿನ ಎಲ್ಲಾ ಸಮಸ್ಯೆಗಳನ್ನು ಎದುರಿಸಿ, ಎಲ್ಲರಲ್ಲಿಯೂ ಸಂತೋಷವನ್ನು ಉದ್ದೀಪನಗೊಳಿಸುವುದೇ ಆಗಿದೆ. ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಪ್ರತಿಯೊಬ್ಬರ ಕಾರ್ಯವೂ ಶ್ಲಾಘನೀಯ. - ಯ. ಟಿ. ಖಾದರ್‌, ವಿಧಾನಸಭಾಧ್ಯಕ್ಷ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ