ರಾಣಿಬೆನ್ನೂರು: ಸಮಾಜದ ಅಭಿವೃದ್ಧಿ ಕಾಣಲು ಶಿಕ್ಷಣ ಜೊತೆಗೆ ಒಗ್ಗಟ್ಟು ಮುಖ್ಯವಾಗಿದೆ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.ಇಲ್ಲಿಯ ವಿಕಾಸ ನಗರದ ಶ್ರೀ ಸೇವಾಲಾಲ ದೇವಸ್ಥಾನದ ಆವರಣದಲ್ಲಿ ಸೋಮವಾರ ತಾಲೂಕು ಬಂಜಾರಾ ಕಲ್ಯಾಣ ಕ್ಷೇಮಾಭಿವೃದ್ಧಿ ಸಂಘ ಹಾಗೂ ಸಂತ ಶ್ರೀ ಸೇವಾಲಾಲ ಜಯಂತ್ಯುತ್ಸವ ಆಚರಣಾ ಸಮಿತಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸಂತ ಶ್ರೀ ಸೇವಾಲಾಲ ಮಹಾರಾಜರ 287ನೇ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು.ಸಮಾಜದಲ್ಲಿ ಸಮಾನತೆ, ಮಾನವೀಯತೆ ಮೂಡಿಸಲು ಸಂತ ಸೇವಾಲಾಲ್ ಹುಟ್ಟಿ ಬರಬೇಕಾಯಿತು. ಸಮಾಜದಲ್ಲಿ ಹೋರಾಟ ಮಾಡಿ ಸಮಾನತೆ ತಂದರು. ಇವರ ನಂತರ ಅಂಬೇಡ್ಕರ್ ಅವರು ಕೂಡ ಎಲ್ಲರೂ ಸಮಾನರು ಎಂಬ ಪರಿಕಲ್ಪನೆ ತಂದರು. ಆದರೆ ರಾಜಕಾರಣಿಗಳು ಒಡೆದಾಳುವ ನೀತಿ ತರುತ್ತಾರೆ. ನಿಮ್ಮ ಹಕ್ಕು ನಿಮಗೆ ಸಿಗಬೇಕಾದರೆ ನಿಮ್ಮಲ್ಲಿ ಒಗ್ಗಟ್ಟು ಪ್ರದರ್ಶನವಾಗಬೇಕು. ಯಾವ ರಾಜಕಾರಣಿಗಳ ಮಾತಿಗೆ ಬೆಲೆ ಕೊಡದೆ ಒಗ್ಗಟ್ಟಾಗಿ ಸಮಾಜದ ಏಳಿಗಿಗೆ ಶ್ರಮಿಸಬೇಕು ಎಂದರು.ಮಾಜಿ ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ಬಂಜಾರ ಸಮಾಜ ಯಾರಿಗೂ ಮೋಸ ಮಾಡಿಲ್ಲ. ಆದರೆ ಮೀಸಲಾತಿ ವಿಚಾರದಲ್ಲಿ ಸಮಾಜಕ್ಕೆ ಅನ್ಯಾಯಾವಾಗಿದೆ. ನಾವು ಧ್ವನಿ ಎತ್ತಬೇಕು. ಸಮಾಜದ ಪರವಾಗಿ ಯಾರು ದ್ವನಿ ಎತ್ತುತ್ತಾರೋ ಅವರ ದ್ವನಿ ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ನಾವು ರಾಜಕಾರಣ ಮಾಡಬಾರದು. ಮುಂದಿನ ಮಕ್ಕಳ ಭವಿಷ್ಯ ರೂಪಿಸುವ ಕೆಲಸವಾಗಬೇಕು ಎಂದರು.ಜಿಪಂ ಮಾಜಿ ಸದಸ್ಯ ಸಂತೋಷಕುಮಾರ ಪಾಟೀಲ ಮಾತನಾಡಿದರು.ಚಿತ್ರದುರ್ಗದ ಬಂಜಾರ ಗುರುಪೀಠದ ಸರ್ದಾರ ಸೇವಾಲಾಲ ಸ್ವಾಮೀಜಿ, ಆದ್ರಳ್ಳಿ ಗುರುಪೀಠದ ಕುಮಾರ ಮಹಾರಾಜ್ ಸಾನ್ನಿಧ್ಯ ವಹಿಸಿದ್ದರು.ಜಯಂತ್ಯುತ್ಸವ ಆಚರಣಾ ಸಮಿತಿ ಅಧ್ಯಕ್ಷ ಸೋಮಪ್ಪ ಲಮಾಣಿ ಅಧ್ಯಕ್ಷತೆ ವಹಿಸಿದ್ದರು.ಬಿಜೆಪಿ ಮುಖಂಡ ಪರಮೇಶ ಗೂಳಣ್ಣನವರ, ಸಮಾಜದ ಮುಖಂಡ ಹನುಮಂತಪ್ಪ ನಾಯಕ, ರಾಮಪ್ಪ ನಾಯಕ, ಗೀತಾ ಲಮಾಣಿ, ಪರಮೇಶ ಲಮಾಣಿ, ರಮೇಶ ನಾಯಕ, ಚಂದ್ರಪ್ಪ ಲಮಾಣಿ, ವಸಂತ ಲಮಾಣಿ, ಮಾಲತೇಶ ಜಾಧವ, ರವಿ ಲಮಾಣಿ, ಹೋಬಾ ನಾಯಕ, ಬೀರಪ್ಪ ಲಮಾಣಿ, ರಮೇಶ ಹಂಚಿನಮನಿ, ನಾಗೇಶ ಚೌವಾಣ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.ಇದಕ್ಕೂ ಮುನ್ನ ತಹಸೀಲ್ದಾರ್ ಕಚೇರಿಯಿಂದ ಆರಂಭವಾದ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸೇವಾಲಾಲ್ ದೇವಸ್ಥಾನ ತಲುಪಿತು.