ಪುತ್ತೂರು: ಪುತ್ತೂರಿನಲ್ಲಿ ರಾಜ್ಯದಲ್ಲಿಯೇ ೩ನೇ ಅತಿ ಎತ್ತರದ ರಾಷ್ಟ್ರ ಧ್ವಜಸ್ತಂಭ ನಿರ್ಮಾಣವಾಗಿದ್ದು, ತಾಲೂಕು ಕೇಂದ್ರಗಳನ್ನು ಪರಿಗಣಿಸಿದರೆ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ. ಇಲ್ಲಿ ಹಾರಾಡುವ ರಾಷ್ಟ್ರಧ್ವಜವು ೨೪೦೦ ಚದರ ಅಡಿ ವಿಸ್ತೀರ್ಣ ಹೊಂದಿದೆ. ಈ ಧ್ವಜಸ್ತಂಭ ಸುಮಾರು ೪೦ ವರ್ಷಗಳ ಕಾಲ ಬಾಳಿಕೆ ಬರಲಿದೆ. ಈ ಸ್ತಂಭಕ್ಕೆ ಆಳವಡಿಸಿರುವ ಧ್ವಜವನ್ನು ವರ್ಷಕ್ಕೆ ೩ ಬಾರಿ ಬದಲಾಯಿಸಬೇಕಾಗುತ್ತದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.
ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮಳ ರಾಮಚಂದ್ರ ಮಾತನಾಡಿ, ದೇಶದ ಅಖಂಡತೆ, ಸಮಗ್ರತೆ ಮತ್ತು ಸಾರ್ವಭೌಮತೆಯ ಸಂಕೇತ ಈ ರಾಷ್ಟ್ರಧ್ವಜ. ಈ ಚಾರಿತ್ರಿಕ ಧ್ವಜಸ್ಥಂಭ ನಿರ್ಮಿಸುವಲ್ಲಿ ನಗರ ಯೋಜನಾ ಪ್ರಾಧಿಕಾರ ರು. ೩೫ ಲಕ್ಷ ಅನುದಾನ ನೀಡಿದೆ. ಶಾಸಕರು ರು.೨೫ ಲಕ್ಷ ನೀಡಿದ್ದಾರೆ. ಉಳಿದ ಅನುದಾನ ನಗರಸಭೆಯಿಂದ ಪ್ರಾಪ್ತವಾಗಿದೆ. ರು. ೧ ಕೋಟಿ ವೆಚ್ಚದಲ್ಲಿ ಈ ಚಾರಿತ್ರಿಕ ತಾಣ ತಲೆ ಎತ್ತಿದೆ ಎಂದು ತಿಳಿಸಿದರು. ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಗುರುಪ್ರಸಾದ್ ಸ್ವಾಗತಿಸಿದರು. ನಗರಸಭೆ ಪೌರಾಯುಕ್ತರಾದ ವಿದ್ಯಾ ಕಾಳೆ ವಂದಿಸಿದರು. ನಗರ ಯೋಜನಾ ಪ್ರಾಧಿಕಾರದ ಸದಸ್ಯರಾದ ಅನ್ವರ್ ಖಾಸಿಂ, ಲ್ಯಾನ್ಸಿ ಮಸ್ಕರೇನಸ್, ನಿಹಾಲ್ ಶೆಟ್ಟಿ ಉಪಸ್ಥಿತರಿದ್ದರು. ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕಿ ಶಿವಪ್ರಿಯಾ ವಂದೇಮಾತರಂ ಹಾಡಿದರು.ಆಕರ್ಷಕ ಪಥಸಂಚಲನ:ಕಾರ್ಯಕ್ರಮದ ಆರಂಭದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಭಾಗದಿಂದ ಆಕರ್ಷಕ ಪಥಸಂಚಲನ ನಡೆಯಿತು. ಸ್ಕೌಟ್ಸ್, ಗೈಡ್ಸ್, ರೋವರ್ಸ್ ಆ್ಯಂಡ್ ರೇಂಜರ್ಸ್, ಎನ್ಸಿಸಿ ಕೆಡೆಟ್ಸ್, ಕಾಲೇಜ್ ಸ್ಟೂಡೆಂಟ್ ಪೊಲೀಸ್ ವಿಂಗ್ ಘಟಕಗಳ ಪಾಲ್ಗೊಂಡರು. ಪುತ್ತೂರಿನ ನಿವೃತ್ತ ಸೈನಿಕರ ಸಂಘದ ಸದಸ್ಯರು ಸಮವಸ್ತ್ರಧಾರಿಗಳಾಗಿ ಪಥ ಸಂಚಲನದಲ್ಲಿ ಭಾಗವಹಿಸಿದರು. ರಾಷ್ಟ್ರಧ್ವಜದ ಮುಂಭಾಗದಲ್ಲಿ ಶಾಸಕರು ಗೌರವ ರಕ್ಷೆ ಸ್ವೀಕರಿಸಿದರು. ಬಟನ್ ಒತ್ತುತ್ತಿದ್ದಂತೆ ಮೋಟಾರ್ ಚಾಲಿತ ಶಕ್ತಿಯೊಂದಿಗೆ ಮೆಗಾ ತ್ರಿವರ್ಣ ಧ್ವಜವು ೨೦ ನಿಮಿಷಗಳ ಅವಧಿಯಲ್ಲಿ ೭೮ ಮೀಟರ್ ಎತ್ತರದ ಸ್ತಂಭವನ್ನೇರಿ ತುತ್ತತುದಿಯಲ್ಲಿ ರಾರಾಜಿಸಿತು. ಈ ಸಂದರ್ಭದಲ್ಲಿ ವಂದೇಮಾತರಂ, ರಾಷ್ಟ್ರಗೀತೆ ಮತ್ತು ಧ್ವಜಗೀತೆ ಹಾಡಲಾಯಿತು. ಸಭಾ ಕಾರ್ಯಕ್ರಮದಲ್ಲಿ ಐತಿಹಾಸಿಕ ಧ್ವಜಸ್ಥಂಭದ ಕಾಮಗಾರಿ ನಡೆಸಿದ ಗುತ್ತಿಗೆದಾರ ಘನಶ್ಯಾಮ ಶೆಟ್ಟಿ ಅವರನ್ನು ಶಾಸಕರು ಸನ್ಮಾನಿಸಿ ಗೌರವಿಸಿದರು.