ಮಂಗಳೂರು: ಮೇ 31ರಿಂದ ಜೂ.6ರತನಕ ಆಯೋಜಿಸಲಾಗಿರುವ ಲಕ್ಷ ದ್ವೀಪ ಪ್ರಯಾಣದ ಯಕ್ಷಧ್ರುವ ಸಮುದ್ರಯಾನದ ಉದ್ಘಾಟನೆ ಬಲ್ಲಾಳ್ಭಾಗ್ ಬಳಿಯ ಪತ್ತುಮುಡಿ ಸೌಧದಲ್ಲಿ ನಡೆಯಿತು.ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ನ ಮಹಾದಾನಿ ಬರೋಡ ಶಶಿಧರ ಶೆಟ್ಟಿ ಅವರು ಯಕ್ಷಧ್ರುವ ಸಮುದ್ರಯಾನದ ಬ್ಯಾನರ್ ಅನಾವರಣಗೊಳಿಸುವ ಮೂಲಕ ಉದ್ಘಾಟನೆ ನೆರವೇರಿಸಿದರು.ಭವಾನಿ ಶಿಪ್ಪಿಂಗ್ ಸರ್ವಿಸಸ್ ಮುಂಬೈ ಸಹಕಾರದೊಂದಿಗೆ ಯಕ್ಷಧ್ರುವ ಪಟ್ಲ ಫೌಂಡೇಶನ್ ಹಾಗೂ ತ್ರಿರಂಗ ಸಂಗಮ ಮುಂಬೈ ಸಂಯೋಜನೆಯಲ್ಲಿ, ಮೇ 31ರಂದು ಮಂಗಳೂರಿನಿಂದ ಮುಂಬೈಗೆ ತೆರಳಿ ಜೂನ್ 1ರಂದು ಹಡಗಿನಲ್ಲಿ ಲಕ್ಷದ್ವೀಪಕ್ಕೆ ತೆರಳಿ ಜೂನ್ 6ಕ್ಕೆ ಮಂಗಳೂರಿಗೆ ವಾಪಸು ಬರಲಾಗುವುದು. ಪ್ರಯಾಣದ ದರ ನಿಗದಿಗೊಳಿಸಲಾಗಿದ್ದು, ಆಸಕ್ತರು ಇದರ ಪ್ರಯೋಜನ ಪಡೆಯಬಹುದಾಗಿದೆ. ಮುಂದಿನ ವರ್ಷ ವಿಮಾನಯಾನ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಬರೋಡ ಶಶಿಧರ ಶೆಟ್ಟಿ ತಿಳಿಸಿದರು.
ಸಮುದ್ರಯಾನದ ಕುರಿತು ತ್ರಿರಂಗ ಸಂಗಮದ ಸಂಚಾಲಕ ಕರ್ನೂರು ಮೋಹನ್ ರೈ ಮತ್ತು ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್ ಮಾಹಿತಿ ನೀಡಿದರು. ಸಮುದ್ರಯಾನದಲ್ಲಿ ಭಾಗವಹಿಸುವವರು ಪ್ರದೀಪ್ ಆಳ್ವ ಕದ್ರಿ 9964279525 ಅಥವಾ ಕರ್ನೂರು ಮೋಹನ್ ರೈ 9867304757 ಅವರನ್ನು ಸಂಪರ್ಕಿಸಬಹುದು.
ಮೇ 30ಕ್ಕೆ ಪಟ್ಲ ಸಂಭ್ರಮ:ಮೇ 30ರಂದು 11ನೇ ವರ್ಷದ ‘ಪಟ್ಲ ಸಂಭ್ರಮ’ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಕುರಿತು ರೂಪುರೇಷೆಗಳನ್ನು ಸಿದ್ಧಪಡಿಸಿ ಎಲ್ಲ ಘಟಕಗಳಿಗೂ ಜವಾಬ್ದಾರಿ ನೀಡಲಾಗುವುದು ಎಂದು ಪಟ್ಲ ಸತೀಶ್ ಶೆಟ್ಟಿ ತಿಳಿಸಿದರು.
ಕಲಾವಿದರಿಗೆ ಪಟ್ಲ ಯಕ್ಷಾಶ್ರಯ ಯೋಜನೆಯಡಿ 15 ಲಕ್ಷ ರು. ವಿತರಿಸಲಾಯಿತು. ಪೂರ್ವಭಾವಿ ಸಭೆಗೆ ಪ್ರಾದೇಶಿಕ ಘಟಕಗಳ 350ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.ಟ್ರಸ್ಟ್ ಕೋಶಾಧಿಕಾರಿ ಸಿಎ ಸುದೇಶ್ ಕುಮಾರ್ ರೈ, ಸಂಘಟನಾ ಕಾರ್ಯದರ್ಶಿ ಪ್ರದೀಪ್ ಆಳ್ವ ಕದ್ರಿ, ಬಾಳ ಜಗನ್ನಾಥ ಶೆಟ್ಟಿ, ಜತೆ ಕಾರ್ಯದರ್ಶಿ ರವಿಚಂದ್ರ ಶೆಟ್ಟಿ, ಉದಯಕುಮಾರ್ ಶೆಟ್ಟಿ ಇದ್ದರು. ಸರಪಾಡಿ ಅಶೋಕ ಶೆಟ್ಟಿ, ಪ್ರಭಾಕರ ಜೋಷಿ, ಭುಜಬಲಿ ಅನಿಸಿಕೆ ವ್ಯಕ್ತಪಡಿಸಿದರು.