ಶಿಕ್ಷಣದಿಂದ ಲೈಂಗಿಕ ಕಿರುಕುಳ ತಡೆಯಲು ಸಾಧ್ಯ: ಹೇಮಾ ಕುಲಕರ್ಣಿ

KannadaprabhaNewsNetwork |  
Published : Jan 31, 2024, 02:18 AM IST
ಫೋಟೋ- 30ಜಿಬಿ3 | Kannada Prabha

ಸಾರಾಂಶ

ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ಕಾಯ್ದೆ 2013 ಶಿಕ್ಷಣ, ವಿಚಾರಣೆ, ಕೆಲಸದ ಸ್ಥಳವನ್ನು ಸುರಕ್ಷಿತವಾಗಿಸುವ ಮತ್ತು ಮಹಿಳಾ ಸ್ನೇಹಿಯಾಗಿ ಮಾಡುವಲ್ಲಿ ಉದ್ಯೋಗದಾತರ ಜವಾಬ್ದಾರಿ ಕುರಿತು ಮಾರ್ಗಸೂಚಿಗಳನ್ನು ಒದಗಿಸುತ್ತದೆ. ಈ ಕಾಯ್ದೆ ಅಡಿಯಲ್ಲಿ ಉದ್ಯೋಗದಾತರು ಲೈಂಗಿಕ ಕಿರುಕುಳ ತಡೆಯಲು ಅಗತ್ಯ ಮಾಹಿತಿಯನ್ನು ಸಂಸ್ಥೆಯ ಪ್ರಮುಖ ಕೆಲಸದ ಸ್ಥಳಗಳಲ್ಲಿ ಪ್ರದರ್ಶಿಸಬೇಕು.

ಕನ್ನಡಪ್ರಭ ವಾರ್ತೆ ಕಲಬುರಗಿ

ಲೈಂಗಿಕ ಕಿರುಕುಳ ತಡೆಗಟ್ಟುವಿಕೆ ಕಾಯ್ದೆಯು ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ನೈಸರ್ಗಿಕ ನ್ಯಾಯವನ್ನು ಒದಗಿಸುತ್ತದೆ ಎಂದು ಹೈಕೋರ್ಟ್ ನ್ಯಾಯವಾದಿ ಹೇಮಾ ಕುಲಕರ್ಣಿ ಹೇಳಿದರು.

ಸಿಯುಕೆಯ ಆಂತರಿಕ ದೂರುಗಳ ಸಮಿತಿ (ಐಸಿಸಿ) ಆಯೋಜಿದ್ದ ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳದ ಬಗ್ಗೆ ಜಾಗೃತಿ ಮೂಡಿಸುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯ್ದೆ 2013 ಶಿಕ್ಷಣ, ವಿಚಾರಣೆ, ಕೆಲಸದ ಸ್ಥಳವನ್ನು ಸುರಕ್ಷಿತವಾಗಿಸುವ ಮತ್ತು ಮಹಿಳಾ ಸ್ನೇಹಿಯಾಗಿ ಮಾಡುವಲ್ಲಿ ಉದ್ಯೋಗದಾತರ ಜವಾಬ್ದಾರಿ ಕುರಿತು ಮಾರ್ಗಸೂಚಿಗಳನ್ನು ಒದಗಿಸುತ್ತದೆ. ಈ ಕಾಯ್ದೆ ಅಡಿಯಲ್ಲಿ ಉದ್ಯೋಗದಾತರು ಲೈಂಗಿಕ ಕಿರುಕುಳ ತಡೆಯಲು ಅಗತ್ಯ ಮಾಹಿತಿಯನ್ನು ಸಂಸ್ಥೆಯ ಪ್ರಮುಖ ಕೆಲಸದ ಸ್ಥಳಗಳಲ್ಲಿ ಪ್ರದರ್ಶಿಸಬೇಕು. ಇದರಿಂದ ಲೈಂಗಿಕ ಕಿರುಕುಳ ಕುರಿತು ಉದ್ಯೋಗಿಗಳಲ್ಲಿ ಜಾಗೃತಿ ಮೂಡಿಸುವ ಹಾಗೂ ಉದ್ಯೋಗಿಗಳಿಗೆ ಸುರಕ್ಷಿತ ಕೆಲಸದ ಸ್ಥಳವನ್ನು ಒದಗಿಸುವುದು ಜವಾಬ್ದಾರಿ ಉದ್ಯೋಗದಾತರದ್ದಾಗಿದೆ ಎಂದರು.

ಲೈಂಗಿಕ ಕಿರುಕುಳ ಏನು ಎಂದು ಜನರಿಗೆ ಶಿಕ್ಷಣ ನೀಡಿದರೆ ಅವರು ಹಾಗೆ ಮಾಡುವುದನ್ನು ತಡೆಯುತ್ತಾರೆ. ಈ ಕಾಯ್ದೆಯ ಮತ್ತೊಂದು ಪ್ರಮುಖ ಲಕ್ಷಣವೆಂದರೆ ಐಸಿಸಿ ರಚನೆ. ಅನೇಕ ಬಾರಿ ಮಹಿಳೆಯರು ತಮ್ಮ ನೋವನ್ನು ಸೂಕ್ತ ಅಧಿಕಾರಿಗಳಿಗೆ ತಿಳಿಸಲು ಮುಂದೆ ಬರುವುದಿಲ್ಲ ಮತ್ತು ಪೊಲೀಸ್ ಠಾಣೆಗೆ ಹೋಗಲು ಹಿಂಜರಿಯುತ್ತಾರೆ. ಸಹೋದ್ಯೋಗಿಗಳು ಐಐಸಿ ಸಮಿತಿಯ ಸದಸ್ಯರಾಗಿರುವುದರಿಂದ ಮಹಿಳೆಯರು ತಮ್ಮ ನೋವುಗಳನ್ನು ಹಂಚಿಕೊಳ್ಳಲು ಮತ್ತು ಅಪರಾಧಿಯನ್ನು ಬಹಿರಂಗಪಡಿಸಲು ನಿರ್ಭೀತ ವೇದಿಕೆಯನ್ನು ಒದಗಿಸುತ್ತದೆ ಎಂದರು.

ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಡ್ಲೂರು ಸತ್ಯನಾರಾಯಣಾಚಾರ್ಯ ಮಾತನಾಡಿ, ಲೈಂಗಿಕ ಕಿರುಕುಳವು ವೃತ್ತಿಪರ ಕ್ಷೇತ್ರದಲ್ಲಿ ಲಿಂಗ ತಾರತಮ್ಯದ ಒಂದು ರೂಪವಾಗಿದೆ. ಕೆಲಸದ ಸ್ಥಳದಲ್ಲಿ ಮಹಿಳೆಯರ ಘನತೆಯನ್ನು ಖಾತ್ರಿಪಡಿಸುವುದು ಸಂಸ್ಥೆ ಮತ್ತು ಅದರ ಮುಖ್ಯಸ್ಥರ ಜವಾಬ್ದಾರಿಯಾಗಿದೆ ಎಂದರು.

ಸಿಯುಕೆಯ ಕುಲಪತಿ, ಪ್ರೊ. ಬಟ್ಟು ಸತ್ಯನಾರಾಯಣ ಮಾತನಾಡಿ, ಐಸಿಸಿ ಕೇವಲ ಉದ್ಯೋಗಿಗಳಿಗೆ ಮಾತ್ರವಲ್ಲದೆ ವಿದ್ಯಾರ್ಥಿಗಳಿಗೂ ಅನ್ವಯಿಸುತ್ತದೆ. ನಮ್ಮ ವಿಶ್ವವಿದ್ಯಾಲಯವನ್ನು ಕೆಲಸ ಮಾಡಲು ಮತ್ತು ಅಧ್ಯಯನ ಮಾಡಲು ಅತ್ಯಂತ ಸುರಕ್ಷಿತ ಸ್ಥಳವನ್ನಾಗಿ ಮಾಡಲು ನಾವು ಈ ಕಾಯ್ದೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಮಹಿಳೆಯರಿಗೆ ಅಧಿಕಾರ ನೀಡುವ ಕಾನೂನುಗಳ ಬಗ್ಗೆ ನೀವೆಲ್ಲರೂ ತಿಳಿದಿರಬೇಕು ಮತ್ತು ಅವುಗಳನ್ನು ಬಳಸಲು ಭಯಪಡಬೇಡಿ ಎಂದರು.

ಸಿಯುಕೆಯ ಐಸಿಸಿ ಸಮಿತಿ ಅಧ್ಯಕ್ಷೆ ಸುನಿತಾ ಮಂಜನಬೈಲ್ ಮಾತನಾಡಿ, ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ ಕಾಯ್ದೆ, 2013ರ ಬಗ್ಗೆ ಜಾಗೃತಿ ಮೂಡಿಸಲು ಫೆ.2ರ ವರೆಗೆ ಒಂದು ವಾರದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಉಪಕ್ರಮವು ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಸಿಬ್ಬಂದಿಗಳಲ್ಲಿ ಗೌರವ, ತಿಳುವಳಿಕೆ ಮತ್ತು ಸಮಾನತೆಯ ಸಂಸ್ಕೃತಿಯನ್ನು ಮೂಡಿಸಲಿದೆ. ಇದರ ಅಂಗವಾಗಿ ಐಸಿಸಿ ಸದಸ್ಯರಿಗೆ ತರಬೇತಿ ಕಾರ್ಯಾಗಾರ, ಆನ್‍ಲೈನ್ ಲೈಂಗಿಕ ಕಿರುಕುಳದ ಕುರಿತು ವಿಶೇಷ ಉಪನ್ಯಾಸ, ವಿದ್ಯಾರ್ಥಿಗಳಿಂದ ಪೋಸ್ಟರ್ ತಯಾರಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.

ಪ್ರಭಾರಿ ರಿಜಿಸ್ಟ್ರಾರ್ ಚನ್ನವೀರ ಆರ್ ಎಂ, ಸಿಯುಕೆ ಐಸಿಸಿ ಸದಸ್ಯ ಡಾ.ಬಸವರಾಜ ಎಂ.ಕುಬಕಡ್ಡಿ, ಡಾ.ರೇಣುಕಾ ಗುಬ್ಬೇವಾಡ, ಡಾ. ರೇಷ್ಮಾ ನದಾಫ್, ಸಮರ್ಥಿನಿ ಶೇರಿಕಾರ, ಮಹಿಳಾ ಎನ್‍ಜಿಒ ಪ್ರತಿನಿಧಿ ಡಾ.ಪಲ್ಲವಿ ಪಾಟೀಲ್ ಉಪಸ್ಥಿತರಿದ್ದರು. ಡಾ.ಜಯದೇವಿ ಜಂಗಮಶೆಟ್ಟಿ ಮತ್ತು ಡಾ.ಸ್ವಪ್ನಿಲ್ ಚಾಪೇಕರ್ ಪ್ರಾರ್ಥಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಜೆಪಿ ರಾಜ್ಯಗಳಲ್ಲಿ ಯಾಕೆ ನೌಕರಿ ಸೃಷ್ಟಿ ಆಗಿಲ್ಲ : ಸಿದ್ದರಾಮಯ್ಯ
ಹತ್ಯೆ ಕೇಸಲ್ಲಿ ಬೈರತಿಗೆ ಸದ್ಯಕ್ಕಿಲ್ಲ ಬಂಧನ ಭೀತಿ