ಶಿಕಾರಿಪುರ: ಶಿಕ್ಷಣದಿಂದ ಮಾತ್ರ ತಳ ಸಮುದಾಯ ಸದೃಢಗೊಳ್ಳಲು ಸಾಧ್ಯ. ಈ ದಿಸೆಯಲ್ಲಿ ಸಮುದಾಯದ ಪ್ರತಿಯೊಬ್ಬರೂ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಛಲ ಬೆಳೆಸಿಕೊಂಡು ಯಶಸ್ಸು ಸಾಧಿಸಿದಲ್ಲಿ ಎಲ್ಲ ವರ್ಗದ ಜನತೆ ಅಭಿವೃದ್ಧಿಗೆ ಸಹಕರಿಸಲು ಸಾಧ್ಯ ಎಂದು ಕೆಎಎಸ್ ಅಧಿಕಾರಿ ಅನ್ನಪೂರ್ಣ ಎನ್.ಮುದುಕಮ್ಮ ನವರ್ ತಿಳಿಸಿದರು. ಭಾನುವಾರ ಪಟ್ಟಣದ ಗುರುಭವನದಲ್ಲಿ ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡಗಳ ನೌಕರರ ಸಂಘ(ರಿ) ತಾ. ಘಟಕದಿಂದ ನಡೆದ 7ನೇ ವರ್ಷದ ವಾರ್ಷಿಕ ಮಹಾಸಭೆ, ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಹಾಗೂ ನಿವೃತ್ತ ನೌಕರರಿಗೆ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪರಿಶಿಷ್ಟ ಪಂಗಡಗಳ ನೌಕರರ ಸಂಘ ಪ್ರತಿಭಾ ಪುರಸ್ಕಾರ ಸತತವಾಗಿ ಹಮ್ಮಿಕೊಳ್ಳುವ ಮೂಲಕ ಪ್ರತಿಭಾನ್ವಿತ ವಿದ್ಯಾರ್ಥಿಗಳ ವಿಶೇಷ ಸಾಧನೆಯನ್ನು ಸಮಾಜಕ್ಕೆ ಪರಿಚಯಿಸುವ ಜತೆಗೆ ಉಳಿದ ಮಕ್ಕಳಿಗೆ ಮಾರ್ಗದರ್ಶನ, ಸ್ಫೂರ್ತಿದಾಯಕವಾಗಲಿ ಎಂಬ ಸದುದ್ದೇಶ ಹೊಂದಿದ್ದು, ಇದರೊಂದಿಗೆ ಸಾಧಕರಿಗೆ ಹೆಚ್ಚಿನ ಸಾಧನೆಗೆ ಪ್ರೋತ್ಸಾಹಿಸುವ ಹಿನ್ನೆಲೆಯನ್ನು ಹೊಂದಿದೆ. ಈ ದಿಸೆಯಲ್ಲಿ ನೌಕರರ ಸಂಘದ ಬಗ್ಗೆ ಪ್ರತಿಭಾನ್ವಿತರು ಕೃತಜ್ಞತೆ ಹೊಂದಿ ಭವಿಷ್ಯದಲ್ಲಿ ಉನ್ನತ ಉದ್ಯೋಗದ ಮೂಲಕ ಸಮಾಜದ ಋಣ ತೀರಿಸುವ ಸಂಕಲ್ಪ ಕೈಗೊಳ್ಳುವಂತೆ ಸಲಹೆ ನೀಡಿದರು.ವಾಲ್ಮೀಕಿ ನಾಯಕ ಸಮುದಾಯದ ಇತಿಹಾಸ ಮತ್ತು ವರ್ತಮಾನದ ಬಗ್ಗೆ ಉಪನ್ಯಾಸಕರಾಗಿ ಮಾತನಾಡಿದ ಸಹಾಯಕ ಪ್ರಾಧ್ಯಾಪಕ ಸತೀಶ ನಾಯಕ, ವಾಲ್ಮೀಕಿ ಕಳ್ಳ, ದರೋಡೆಕೋರ ಎಂಬ ಕಟ್ಟುಕತೆ ವ್ಯಾಪಕವಾಗಿದ್ದು ಇತಿಹಾಸದಲ್ಲಿ ಮರೆಮಾಚಲಾದ ಹಲವು ಸತ್ಯ ಸಂಗತಿಗಳ ಬಗ್ಗೆ ಸಮುದಾಯ ತಿಳಿದುಕೊಳ್ಳುವ ಪ್ರಯತ್ನ ಅತ್ಯಗತ್ಯವಾಗಿದೆ ಎಂದು ತಿಳಿಸಿದರು.
ಉಪನ್ಯಾಸಕ ಡಾ.ಪ್ರಕಾಶ್ ಮಾತನಾಡಿದರು. ತಾ.ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ್.ಎಂ.ಎಚ್ ಅಧ್ಯಕ್ಷತೆ ವಹಿಸಿದ್ದರು.ಇದೇ ವೇಳೆ ಸಮಾಜದ ಪ್ರತಿಭಾನ್ವಿತರನ್ನು, ನಿವೃತ್ತ ನೌಕರರನ್ನು ಹಾಗೂ ಸಾಧಕರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ತಾ.ಮಹರ್ಷಿ ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಹನುಮಂತಪ್ಪ, ವಾಲ್ಮೀಕಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಉಮೇಶ್, ಎಇಇ ಮಂಜುನಾಥ್, ನಾಗೇಶಪ್ಪ, ದೇವರಾಜ್, ಬಸವರಾಜ್, ಜಿ.ಪಂ ಮಾಜಿ ಸದಸ್ಯೆ ಮಮತಾ ಸಾಲಿ, ಸಂಘದ ಗೌರವಾಧ್ಯಕ್ಷ ಸಿದ್ದಪ್ಪ, ಉಪಾಧ್ಯಕ್ಷ ರಾಜಪ್ಪ, ಸಂಜೀವ ತಹಸೀಲ್ದಾರ್, ಸೋಮಪ್ಪ, ಡಾ.ಪಾಂಡುರಂಗ, ತಿಪ್ಪೇಶ್, ಲೋಕೇಶ್ ಮಕರಿ, ಸೋಮಶೇಖರಪ್ಪ, ಸಂಜೀವ್ ಇತರರಿದ್ದರು.