- ಶೆಟ್ಟಿಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ । ಸಮವಸ್ತ್ರ ವಿತರಣೆ, ಸನ್ಮಾನ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರವಿದ್ಯೆ ಯಾರೂ ಕದಿಯಲಾಗದ ಸಂಪತ್ತು ಎಂದು ಬೆಂಗಳೂರಿನ ಉದ್ಯಮಿ, ದಾನಿ ಗದ್ದೇಮನೆ ವಿಶ್ವನಾಥ ತಿಳಿಸಿದರು.
ಶುಕ್ರವಾರ ಶೆಟ್ಟಿಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ 79 ನೇ ಸ್ವಾತಂತ್ರ್ಯ ದಿನಾಚರಣೆ, ದಾನಿ ವಿಶ್ವನಾಥ್ ಅವರಿಗೆ ಸನ್ಮಾನ ಹಾಗೂ ಸಮವಸ್ತ್ರ ವಿತರಣಾ ಕಾರ್ಯಕ್ರಮದಲ್ಲಿ ತಮಗೆ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದರು.ಮಲೆನಾಡಿನ ಭಾಗದ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತುಕೊಟ್ಟು ಅವರಿಗೆ ಬೇಕಾದ ಶಾಲಾ ಪರಿಕರಗಳನ್ನು ನೀಡುತ್ತಿದ್ದೇನೆ. ಕುಗ್ರಾಮದ ಸರ್ಕಾರಿ ಶಾಲೆಗಳ ಮಕ್ಕಳಿಗೆ ಹೆಚ್ಚು ಸಹಾಯ ಮಾಡುತ್ತಿದ್ದೇನೆ. ಇದುವರೆಗೆ ನನ್ನ ಅಭಿಮಾನಿ ಬಳಗದ ಮೂಲಕ 8 ಸಾವಿರ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಾಲಾ ಬ್ಯಾಗ್, ಸಮವಸ್ತ್ರ ಹಾಗೂ ಟ್ರ್ಯಾಕ್ ಸೂಟ್ ನೀಡಿದ್ದೇನೆ. ಇದನ್ನು ಉಪಯೋಗಿಸಿಕೊಂಡು ಮಕ್ಕಳು ಉತ್ತಮ ಶಿಕ್ಷಣ ಪಡೆಯಿರಿ ಎಂದು ಕರೆ ನೀಡಿದರು.
ಅತಿಥಿಯಾಗಿದ್ದ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎನ್.ಎಂ.ಕಾಂತರಾಜ್ ಮಾತನಾಡಿ, ದಾನಿ ವಿಶ್ವನಾಥ್ ಮಲೆನಾಡಿನ ಮಣ್ಣಿನ ಮಗನಾಗಿದ್ದಾರೆ. ಶಾಲಾ ದಿನಗಳಲ್ಲಿ ಅವರು ಅನುಭವಿಸಿದ ಕಷ್ಟದ ದಿನಗಳನ್ನು ಗಮನದಲ್ಲಿ ಇರಿಸಿಕೊಂಡು ಮಲೆನಾಡು ಭಾಗದ ಮಕ್ಕಳು ಕೊರತೆ ಇಲ್ಲದ ಶಿಕ್ಷಣ ಪಡೆಯಬೇಕು ಎಂದು ಮಕ್ಕಳಿಗೆ ಸಹಾಯ ಮಾಡುತ್ತಿದ್ದಾರೆ ಎಂದರು. ಗ್ರಾಪಂ ಮಾಜಿ ಉಪಾಧ್ಯಕ್ಷ ಗಾಂದಿಗ್ರಾಮ ನಾಗರಾಜ್ ಮಾತನಾಡಿದರು.ಇದೇ ಸಂದರ್ಭದಲ್ಲಿ ಶಾಲೆಯಿಂದ ದಾನಿ ಗದ್ದೇಮನೆ ವಿಶ್ವನಾಥ್ ಹಾಗೂ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎನ್.ಎಂ. ಕಾಂತರಾಜ್ ಅವರನ್ನು ಸನ್ಮಾನಿಸಲಾಯಿತು. ಈ ಹಿಂದೆ ದಾನಿ ಎನ್.ಎಂ.ಕಾಂತರಾಜ್ ಭರವಸೆ ನೀಡಿದಂತೆ ಪ್ರತಿ ಮಕ್ಕಳಿಗೆ 1 ಸಾವಿರ ರು. ಠೇವಣಿ ಬಾಂಡ್ ವಿತರಿಸಿದರು.
ಸಭೆ ಅಧ್ಯಕ್ಷತೆಯನ್ನು ಎಸ್.ಡಿಎಂಸಿ ಅಧ್ಯಕ್ಷ ಎಂ.ಜಗದೀಶ್ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ಲಿಲ್ಲಿ ಮಾತುಕುಟ್ಟಿ, ಉಪಾಧ್ಯಕ್ಷ ಸುನೀಲ್ ಕುಮಾರ್, ಸದಸ್ಯರಾದ ವಾಣಿ ನರೇಂದ್ರ, ಶೈಲಾ ಮಹೇಶ್, ಎ.ಬಿ.ಮಂಜುನಾಥ್, ಮಾಜಿ ಸದಸ್ಯ ಶೆಟ್ಟಿಕೊಪ್ಪ ಮಹೇಶ್, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಬೇಸಿಲ್,ವಿಎಸ್.ಎಸ್.ಎನ್.ಉಪಾಧ್ಯಕ್ಷ ಅಜಂತ, ಮೂಡಬಾಗಿಲು ಪ್ರೌಢ ಶಾಲೆ ಮುಖ್ಯ ಶಿಕ್ಷಕ ಶ್ರೀಕಾಂತ್,ಪಿಡಿಓ ವಿಂದ್ಯಾ, ಲಯನ್ಸ್ ಕ್ಲಬ್ ಕಾರ್ಯದರ್ಶಿ ಎಲ್ದೋ,ಎಸ್.ಡಿಎಂಸಿ ಉಪಾಧ್ಯಕ್ಷೆ ರಾಗಿಣಿ, ಮುಖ್ಯ ಶಿಕ್ಷಕಿ ಶುಭ, ಅರುಣಕುಮಾರ್ , ರಾಧಾಮಣಿ, ಮಲ್ಲಿಕಾರ್ಜುನ್ , ಗಾಯಿತ್ರಿ ಇದ್ದರು.